Last Updated:
ಟೀಂ ಮಂಗಳೂರು ತಂಡ ಭಾರತವನ್ನು ಪ್ರತಿನಿಧಿಸಿ Dieppe ಅಂತರಾಷ್ಟ್ರೀಯ ಗಾಳಿಪಟ ಉತ್ಸವದಲ್ಲಿ ಫ್ರಾನ್ಸ್ ಆಗಸದಲ್ಲಿ ಗಾಳಿಪಟ ಹಾರಿಸಿದೆ, ನೀರಿನ ಸಂರಕ್ಷಣೆಯ ಸಂದೇಶ ನೀಡಿದೆ.
ಮಂಗಳೂರು: ಹಿಂಗಾರಿನ ಮೂಡುಗಾಳಿ ಭಾರತಕ್ಕೆ (India) ಸೀಮಿತವಲ್ಲ, ಹಾಗೆಯೇ ಗಾಳಿಪಟದ (Kite) ಹಬ್ಬವೂ ಕೂಡ! ಹೌದಾ! ಎಂದು ಹುಬ್ಬೇರಿಸಬೇಡಿ. ಇಲ್ಲಿ ಹಾರಿಸುತ್ತಿರುವುದು ಸಾಮಾನ್ಯ ಗಾಳಿಪಟವಲ್ಲ, ಭಾರತದ ಹೆಮ್ಮೆ, ಮೇಡ್ ಇನ್ ತುಳುನಾಡು, ಫ್ರಮ್ ಕರ್ನಾಟಕ! ಹೌದು ಕರ್ನಾಟಕದ ಮಂಗಳೂರಿನ “ಟೀಂ ಮಂಗಳೂರು” ತಂಡ ನಮ್ಮ ಭಾರತದ ಪ್ರತಿನಿಧಿಯಾಗಿ ಫ್ರಾನ್ಸ್ (France) ಆಗಸದಲ್ಲಿ ಹಾರಾಡಿದೆ.
ಹೌದು, ಕಳೆದ 13 ಸೆಪ್ಟೆಂಬರ್ನಿಂದ 21 ಸೆಪ್ಟೆಂಬರ್ವರೆಗೆ ಅಂತಾರಾಷ್ಟ್ರೀಯ ಮಟ್ಟದ Dieppe international kite festival ಪ್ರತೀ ಎರಡು ವರ್ಷಕ್ಕೊಮ್ಮೆ ಆಯೋಜಿಸಲ್ಪಡುತ್ತದೆ. ಜಗತ್ತಿನ 300 ಸುಪ್ರಸಿದ್ಧ ಕಾರ್ಯಕ್ರಮಗಳಲ್ಲಿ ಇದೂ ಒಂದು. ಯುರೋಪಿನ ಅತೀ ದೊಡ್ಡ ಕಡಲ ತೀರದಲ್ಲಿ ನಡೆಯುವ ಈ ಗಾಳಿಪಟದ ಸಮ್ಮೇಳನಕ್ಕೆ ಪ್ರತೀ ವರ್ಷ 5,00,000 ಜನ ಸೇರುತ್ತಾರೆ.
ವಿಶ್ವದ 40 ದೇಶಗಳಿಂದ ಬರುವ ಗಾಳಿಪಟಗಳಿಗೆ ಇಲ್ಲಿ ಹಾರಾಡಲು ಅವಕಾಶವಿದ್ದು, ಈ ಬಾರಿ ಭಾರತವನ್ನು ಟೀಮ್ ಮಂಗಳೂರು ತಂಡ ಪ್ರತಿನಿಧಿಸಿದೆ. ತೇರಿನ ರೂಪದ ಗಾಳಿಪಟದ ಹಾರಾಟ ಮುಗಿಲಲ್ಲಿ ಕಂಡಾಗ ಐರೋಪಿಯನ್ನರ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. ಫ್ರಾನ್ಸ್ನಲ್ಲಿ ಈಗ ಬೇಸಿಗೆ, ಹೀಗಾಗಿ ಇದನ್ನ ಸಮ್ಮರ್ ಈವೆಂಟ್ ಆಗಿ ಪರಿಗಣಿಸಲಾಗಿದೆ.
ದಿನೇಶ್ ಹೊಳ್ಳ ಅವರ ರಚನೆಯ ಗಾಳಿಪಟಕ್ಕೆ ಟೀಮ್ ಮಂಗಳೂರು ತಂಡದ ಪ್ರಾಣೇಶ್ ಕುದ್ರೋಳಿ, ಸತೀಶ್ ರಾವ್, ಅರುಣ್ ಹಾಗೂ ಸರ್ವೇಶ್ ರಾವ್ ಅವರು ಗಾಳಿಪಟ ಹೊಲಿಗೆಯನ್ನು ಮಾಡಿದ್ದಾರೆ. ಇಡೀ ಜಗತ್ತೇ ಇಂದು ನೀರಿನ ಬರಗಾಲವನ್ನು ಅನುಭವಿಸುತ್ತಿದೆ. ‘ನೀರು ಈ ಭುವಿಯ ಸಕಲ ಜೀವ ಸಂಕುಲಗಳ ಚೇತನಾ ಶಕ್ತಿ, ಪ್ರತೀ ನೀರಿನ ಹನಿಯೂ ತುಂಬಾ ಮಹತ್ವದ್ದು, ನೀರಿನ ಸಂರಕ್ಷಣೆಯ ಬಗ್ಗೆ ಪಲ್ಲಕ್ಕಿಯಲ್ಲಿ ನೀರಿನ ತಂಬಿಗೆಯನ್ನು ಇಟ್ಟು ನೀರು ಈ ಭುವಿಯ ಪ್ರತ್ಯಕ್ಷ ದೇವರು ಎಂಬಂತೆ ಇನ್ನೊಂದು ಗಾಳಿಪಟವನ್ನು ಮಾಡಲಾಗಿದೆ.
ಈ ಗಾಳಿಪಟದ ವಿಶೇಷತೆಗಳೇನು?
ಆಕಾಶದ ಕೆಳಗೆ ಬೆಟ್ಟ ನಡುವೆ ನೀರಿನ ತಂಬಿಗೆ, ಬಾಲಂಗೋಚಿಯಲ್ಲಿ ಮರ, ಗಿಡಗಳ ಹಸಿರು ಹಂದರವನ್ನು ಕೆಳಗಡೆ ನೀರಿನ ಶೇಖರಣೆಯನ್ನು ಅಂದರೆ ಹಸಿರು ಪರಿಸರ ಇದ್ದರೆ ನೀರು ಸಹಜವಾಗಿಯೇ ಸಂಗ್ರಹವಾಗುತ್ತದೆ ಎಂಬ ಸಂದೇಶವನ್ನು ಸಾರಲಾಗಿದೆ. ರಿಪ್ ಸ್ಟಾಪ್ ನೈಲಾನ್ ಬಟ್ಟೆಯಿಂದ ಅಪ್ಲಿಕ್ ಮಾದರಿಯಲ್ಲಿ ಈ ಗಾಳಿಪಟವನ್ನು ತಯಾರಿಸಲಾಗಿದೆ. ಮಂಗಳೂರಿನ ಅಶೋಕ ನಗರದ ಸರ್ವೇಶ್ ರಾವ್ ರವರ ಮನೆಯಲ್ಲಿ ಈ ಗಾಳಿಪಟದ ತಯಾರಿ ಆಗುತ್ತಿದೆ.
Dakshina Kannada,Karnataka
September 24, 2025 1:28 PM IST