Last Updated:
ಕರ್ನಾಟಕದ ಕರುಣ್ ನಾಯರ್ 8 ವರ್ಷಗಳ ಬಳಿಕ ಟೀಂ ಇಂಡಿಯಾಗೆ ಮರಳಿದ್ದಾರೆ. ರಣಜಿ ಸೀಸನ್ನಲ್ಲಿ ವಿದರ್ಭ ಪರ ಅಮೋಘ ಬ್ಯಾಟಿಂಗ್ ಪ್ರದರ್ಶನದಿಂದ ಈ ಸಾಧನೆ ಸಾಧ್ಯವಾಯಿತು. ಇದೀಗ ಅವರು ಹಾಲಿ ಚಾಂಪಿಯನ್ ತಂಡ ತೊರೆಯಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಕರ್ನಾಟಕದ ಕರುಣ್ ನಾಯರ್ (Karun Nair) ಬರೋಬ್ಬರಿ 8 ವರ್ಷದ ಮೂಲಕ ಟೀಂ ಇಂಡಿಯಾಗೆ (Team India) ಕಂಬ್ಯಾಕ್ ಮಾಡಿದ್ದಾರೆ. ಕಳೆದ ರಣಜಿ ಸೀಸನ್ನಲ್ಲಿ (Ranji) ಅಮೋಘ ಬ್ಯಾಟಿಂಗ್ ಮಾಡುವ ಮೂಲಕ ಅವರು ಸದ್ಯ ಟೀಂ ಇಂಡಿಯಾಗೆ ಮರಳಿದ್ದಾರೆ. ಕಳೆದ ರಣಜಿ ಸೀಸನ್ನಲ್ಲಿ ಅವರು ವಿದರ್ಭ (Vidarbha) ತಂಡದ ನಾಯಕರಾಗಿ ಮುನ್ನಡೆಸಿದ್ದರು ಅಷ್ಟೇ ಅಲ್ಲ ಅವರು ತಂಡದ ನಾಯಕನಾಗಿ ತಂಡವನ್ನು ಚಾಂಪಿಯನ್ ಮಾಡಿದ್ದರು. ಸದ್ಯ ಅವರು ಹಾಲಿ ಚಾಂಪಿಯನ್ಸ್ ವಿದರ್ಭ ತಂಡವನ್ನು ತೊರೆಯಲು ನಿರ್ಧರಿಸಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.
ಕರ್ನಾಟಕದ ಪರ ಆಡಲು ಸಜ್ಜಾದ ಕನ್ನಡಿಗ
ಕರುಣ್ 2024/25 ರ ದೇಶೀಯ ಋತುವಿನಲ್ಲಿ ವಿದರ್ಭ ಪರ ಅಮೋಘ ಬ್ಯಾಟಿಂಗ್ ಪ್ರದರ್ಶನ ತೋರಿದ್ದರು ಮತ್ತು ಅವರ ಅದ್ಭುತ ಪ್ರದರ್ಶನದಿಂದಾಗಿ ಅವರು ಬರೋಬ್ಬರಿ 8 ವರ್ಷಗಳ ಬಳಿಕ ಭಾರತ ಟೆಸ್ಟ್ ತಂಡಕ್ಕೆ ಮರಳಲು ಸಹಕಾರವಾಗಿದೆ. ಕರುಣ್ 2023/24 ರ ದೇಶೀಯ ಋತುವಿಗೆ ಮೊದಲು ವಿದರ್ಭ ತಂಡವನ್ನು ಸೇರಿಕೊಂಡಿದ್ದರು. ಸದ್ಯ ಇದೀಗ ಕ್ರಿಕ್ಬುಜ್ ಮಾಡಿರುವ ವರದಿಯ ಪ್ರಕಾರ ಕರುಣ್ ನಾಯರ್ ಅವರು, ಮುಂದಿನ ಆವೃತ್ತಿ ಅಂದ್ರೆ 2025-2026ನೇ ಆವೃತ್ತಿಯಲ್ಲಿ ಕರ್ನಾಟಕ ತಂಡಕ್ಕೆ ಮರಳಲಿದ್ದಾರೆ ಎಂದು ವರದಿಯಾಗಿದೆ.
ಕಳೆಪೆ ಫಾರ್ಮ್ನಿಂದ ಕರ್ನಾಟಕ ತಂಡದಿಂದ ಔಟ್
ಬಲಗೈ ಬ್ಯಾಟ್ಸ್ಮನ್ ಟೀಂ ಇಂಡಿಯಾಗೆ ಆಯ್ಕೆಯಾಗುವುದಕ್ಕೆ ಮೊದಲು ಅವರು ಕರ್ನಾಟಕ ತಂಡದ ಭಾಗವಾಗಿದ್ದರು. ಇಲ್ಲಿಂದಲೇ ಅವರು ಟೀಂ ಇಂಡಿಯಾಗೆ ಆಯ್ಕೆಯಾಗಿದ್ದರು. 2016 ರಲ್ಲಿ ಅವರು ಟೀಂ ಇಂಡಿಯಾ ಪರ ಟೆಸ್ಟ್ ಆಡಿದ್ದರು. ಬಳಿಕ ಟೆಸ್ಟ್ ತಂಡದಲ್ಲಿ ಸ್ಥಾನ ಕಳೆದುಕೊಂಡ 4 ವರ್ಷಗಳ ನಂತರ ರಾಜ್ಯ ತಂಡದಲ್ಲಿಯೂ ಸ್ಥಾನ ಕಳೆದುಕೊಂಡರು. ಹಾಗಾಗಿ ಅವರು ವಿದರ್ಭ ಪರ ಆಡಬೇಕಾಯಿತು. ಸದ್ಯ ಅವರು ಕರ್ನಾಟಕ ಪರ ಮರಳಲು ಸಜ್ಜಾಗಿದ್ದಾರೆ.
ಕರುಣ್ ನಾಯರ್ ಕಳೆದ ರಣಜಿ ಸೀಸನ್ನಲ್ಲಿ ಕರುಣ್ 9 ಪಂದ್ಯಗಳಲ್ಲಿ 863 ರನ್ ಗಳಿಸಿದರು. ಈ ಋತುವಿನಲ್ಲಿ ಅವರ ಸರಾಸರಿ 389.50 ಇತ್ತು. ಅದಾದ ಬಳಿಕ ನಡೆದ ವಿಜಯ್ ಹಜಾರೆ ಟ್ರೋಫಿಯಲ್ಲಿ 8 ಇನ್ನಿಂಗ್ಸ್ಗಳಲ್ಲಿ 779 ರನ್ ಗಳಿಸಿದರು. ಅವರ ಒಟ್ಟು ರನ್ಗಳಲ್ಲಿ 5 ಶತಕಗಳು ಮತ್ತು 1 ಅರ್ಧಶತಕ ಸೇರಿತ್ತು.
33 ವರ್ಷದ ಆಟಗಾರ 2025 ರ ಚಾಂಪಿಯನ್ಸ್ ಟ್ರೋಫಿ ತಂಡದಲ್ಲಿ ಸ್ಥಾನ ಪಡೆಯುವ ಅವಕಾಶವನ್ನು ಕಳೆದುಕೊಂಡರು. ಆದರೆ ಸದ್ಯ ನಡೆಯುತ್ತಿರುವ ಟೆಸ್ಟ್ ತಂಡಕ್ಕೆ ಮರಳಿದರು. ಕರುಣ್ 2017 ರ ನಂತರ ತಮ್ಮ ಮೊದಲ ಟೆಸ್ಟ್ ಪಂದ್ಯವನ್ನು ಆಡಲು ಸಜ್ಜಾಗಿದ್ದಾರೆ. ಅವರು 2018 ರಲ್ಲಿ ಇಂಗ್ಲೆಂಡ್ ಪ್ರವಾಸದ ಭಾಗವಾಗಿದ್ದರು ಆದರೆ ಪ್ಲೇಯಿಂಗ್ XI ನಲ್ಲಿ ಸ್ಥಾನ ಪಡೆಯಲಿಲ್ಲ. ಇಂಗ್ಲೆಂಡ್ ಸರಣಿಯ ನಂತರ ಅವರನ್ನು ಕೈಬಿಡಲಾಯಿತು.
ಟೆಸ್ಟ್ ಕ್ರಿಕೆಟ್ನಲ್ಲಿ ತ್ರಿಶತಕ ಗಳಿಸಿದ ಇಬ್ಬರು ಭಾರತೀಯ ಬ್ಯಾಟ್ಸ್ಮನ್ಗಳಲ್ಲಿ ಕರುಣ್ ಕೂಡ ಒಬ್ಬರು. ಅವರು 6 ಟೆಸ್ಟ್ ಪಂದ್ಯಗಳಲ್ಲಿ 374 ರನ್ ಗಳಿಸಿದ್ದಾರೆ. 2016 ರಲ್ಲಿ ಇಂಗ್ಲೆಂಡ್ ವಿರುದ್ಧದ ಚೆನ್ನೈ ಟೆಸ್ಟ್ ಪಂದ್ಯದಲ್ಲಿ ಅವರು ಈ ಮೈಲಿಗಲ್ಲು ಸಾಧಿಸಿದರು. ವೀರೇಂದ್ರ ಸೆಹ್ವಾಗ್ ಟೆಸ್ಟ್ನಲ್ಲಿ ತ್ರಿಶತಕ ಬಾರಿಸಿದ ಮೊದಲ ಬ್ಯಾಟ್ಸ್ಮನ್. ಕರುಣ್ 2 ಏಕದಿನ ಪಂದ್ಯಗಳಲ್ಲಿ 46 ರನ್ ಗಳಿಸಿದ್ದಾರೆ. ಜೂನ್ 2016 ರಲ್ಲಿ ಜಿಂಬಾಬ್ವೆ ವಿರುದ್ಧದ 3 ಪಂದ್ಯಗಳ ಸರಣಿಯ ಮೊದಲ ಏಕದಿನ ಪಂದ್ಯಕ್ಕೂ ಆಡಿದ್ದರು.
June 20, 2025 4:03 PM IST