Last Updated:
ಮಹಿಷನ ಆರ್ಭಟದ ವೇಳೆ ಪಟಾಕಿ ಸದ್ದು ಮತ್ತು ಹೊಗೆಯಿಂದ ಕಲಾವಿದರ ಆರೋಗ್ಯ ಹಾನಿಯಾಗುತ್ತಿರುವುದರಿಂದ ಕಟೀಲು ಮೇಳ ಆಡಳಿತ ಮಂಡಳಿ ಪಟಾಕಿ ಪ್ರದರ್ಶನಕ್ಕೆ ನಿಯಮ ರೂಪಿಸಿದೆ.
ಮಂಗಳೂರು: ಮಗನೇ ಮಹಿಷ, ಈ ಡೈಲಾಗ್ ಯಕ್ಷ ವೇದಿಕೆಯಲ್ಲಿ ಕೇಳಿದರೆ ಸಾಕು, ಜನ ರಂಗ ಬಿಟ್ಟು ಎದುರಿನ ಮೈದಾನಕ್ಕೆ (Ground) ಓಡುತ್ತಾರೆ. ಯಾಕೆಂದರೆ ಮಹಿಷನ ಆರ್ಭಟ, ಅವನ ಮೆರವಣಿಗೆ ಇಡೀ ದೇವಿ ಮಹಾತ್ಮೆಯಲ್ಲಿ ಜನಮಾನಸದಲ್ಲಿ ಉತ್ಸಾಹ (Enthusiasm) ತುಂಬುವ ಕ್ಷಣ. ಆಗ ಸಿಡಿಮದ್ದುಗಳ ಆರ್ಭಟವೂ ಜೋರು, ಆದರೆ ಈಗ ಆ ಆರ್ಭಟ (Aggression) ಚೂರು ಕಮ್ಮಿ ಮಾಡಿ ಎಂದು ಯಕ್ಷಾಭಿಮಾನಿಗಳಲ್ಲಿ ಆಯೋಜಕರು ವಿನಂತಿಸುತ್ತಿದ್ದಾರೆ. ಅದಕ್ಕೆ ಕಾರಣ ಏನು? ಅಂತ ನಾವು ಹೇಳ್ತೀವಿ ಕೇಳಿ
ಕಟೀಲು ಮೇಳದ ಏಳೂ ಮೇಳಗಳೂ ಯಕ್ಷಗಾನ ಬಯಲಾಟ ನಡೆಸುತ್ತಿದೆ. ಅತೀ ಹೆಚ್ಚು ಹರಕೆಯ ಸೇವೆಗಳನ್ನೇ ಆಡಿ ತೋರಿಸುವ ಕಟೀಲು ಮೇಳ ಈ ಬಾರಿ ಸೇವಾಕರ್ತರಿಗೆ ವಿಶೇಷ ಮನವಿಯನ್ನು ಮಾಡಿದೆ. ಕಟೀಲು ಮೇಳಗಳ ಬಯಲಾಟದ ಸಂದರ್ಭದಲ್ಲಿ ಸಿಡಿಮದ್ದು ಪ್ರದರ್ಶನಕ್ಕೆ ಕಟೀಲು ಮೇಳ ನಿಯಮ ರೂಪಿಸಿದೆ.
ಮೇಳದ ದೇವರ ಚೌಕಿ ಪೂಜೆ, ಆ ಬಳಿಕ ದೇವರು ರಂಗಸ್ಥಳಕ್ಕೆ ಬರುವ ತನಕ ಸುಡುಮದ್ದು ಪ್ರದರ್ಶನ ಮಾಡಬಹುದು. ಆದರೆ ಆ ಬಳಿಕ ಪಟಾಕಿ ಪ್ರದರ್ಶನ ಮಾಡದಂತೆ ಕಟೀಲು ಮೇಳದ ಆಡಳಿತ ಮಂಡಳಿ ಮನವಿ ಮಾಡಿದೆ.
ಅನೇಕ ಕಡೆಗಳಲ್ಲಿ ಸುಡುಮದ್ದು ಬಿಡುವ ಮೂಲಕ ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತಿದೆ. ಕಲಾವಿದರ ಆರೋಗ್ಯಕ್ಕೆ ತೊಂದರೆಯಾಗುತ್ತಿದೆ. ಪ್ರೇಕ್ಷಕರಿಗೂ ಪಟಾಕಿ ಸದ್ದು ಮತ್ತು ಹೊಗೆಯಿಂದ ಕಿರಿಕಿರಿಯಾಗುತ್ತಿದೆ. ಸೇವೆಯಾಟ ನಡೆಸುವವರಿಗೆ ಒಂದು ದಿನ ಪಟಾಕಿ ಬಿಟ್ಟು ಗೌಜಿ ಪ್ರದರ್ಶನ ಮಾಡಬಹುದು. ಆದರೆ ಕಲಾವಿದರಿಗೆ ಪಟಾಕಿ ಸದ್ದು, ಹೊಗೆಯನ್ನು ತಿರುಗಾಟದ ಉದ್ದಕ್ಕೂ ಅನುಭವಿಸಬೇಕಾಗಿದೆ.
ಮಹಿಷನ ಆರ್ಭಟಕ್ಕೆ ಸಿಡಿಮದ್ದಿನ ರಂಗು, ವಿಪರೀತವಾದರೆ ಎಲ್ಲವೂ ವಿಷ
ಪಟಾಕಿ ಸದ್ದಿನಿಂದ ಕಲಾವಿದರಿಗೂ ಸಂಭಾಷಣೆ ಕೇಳೋದಿಲ್ಲ. ಹೊಗೆಯಿಂದ ಕಲಾವಿದರ ಆರೋಗ್ಯಕ್ಕೂ ಹಾಳಾಗುತ್ತದೆ. ಸಾಮಾನ್ಯವಾಗಿ ಕಟೀಲು ಮೇಳದಲ್ಲಿ ದೇವಿ ಮಹಾತ್ಮೆಯೇ ಹೆಚ್ಚು ಪ್ರದರ್ಶನಗೊಳ್ಳುತ್ತದೆ. ದೇವಿ ಪ್ರತ್ಯಕ್ಷವಾಗುವಾಗ, ಮಹಿಷಾಸುರ ಬರೋವಾಗ, ಮಹಿಷ ವಧೆ ಆಗುವಾಗ, ವಿದ್ಯುನ್ಮಾಲಿ ಬರೋವಾಗ ಯಕ್ಷನ ಪ್ರವೇಶ, ಶುಂಭ-ನಿಶುಂಭರು ಬರೋವಾಗ ಹೀಗೆ ಆಟದುದ್ದಕ್ಕೂ ಸುಡುಮದ್ದು ಪ್ರದರ್ಶನ ಮಾಡಲಾಗುತ್ತಿತ್ತು. ಹೀಗಾಗಿ ಸೇವಾಕರ್ತರು ಎಲ್ಲರ ಆರೋಗ್ಯದ ದೃಷ್ಟಿಯಿಂದ ಸಹಕರಿಸುವಂತೆ ಕಟೀಲು ಮೇಳದ ಆಡಳಿತ ಮಂಡಳಿ ಮನವಿ ಮಾಡಿದೆ
Dakshina Kannada,Karnataka
November 30, 2025 11:02 AM IST