Last Updated:
ಕುಕ್ಕೆ ಸುಬ್ರಹ್ಮಣ್ಯ ದೇವಳದಲ್ಲಿ ವರ್ಷದಲ್ಲಿ ಒಂದೇ ಬಾರಿ ಗರ್ಭಗುಡಿಯ ಮೂಲಮೃತ್ತಿಕಾ ಮಹಾಪ್ರಸಾದ ಭಕ್ತರಿಗೆ ನೀಡಲಾಗುತ್ತದೆ, ಇದು ರೋಗ ನಿವಾರಣೆ ಮತ್ತು ಪುಣ್ಯಕ್ಕಾಗಿ ವಿಶೇಷವಾಗಿ ಪ್ರಸಿದ್ಧ.
ದಕ್ಷಿಣ ಕನ್ನಡ: ಶ್ರೀ ಕ್ಷೇತ್ರ ಕುಕ್ಕೆಯ (Kukke) ಬಗ್ಗೆ ಸುಬ್ರಹ್ಮಣ್ಯನ ಬಗ್ಗೆ ಒಂದು ಮಾತಿದೆ. ‘ಅಖಿಲರೋಗಹಾರಿ’ ಅರ್ಥಾತ್ ಎಲ್ಲಾ ರೋಗ (Disease) ಕಳೆಯುವವನು ಎಂಬ ಅಭಿದಾನವದು. ಅದಕ್ಕೆ ತಕ್ಕಂತೆ ವರ್ಷಕ್ಕೊಮ್ಮೆ ಒಂದು ವಿಶೇಷ ಕೈಂಕರ್ಯ ದೇಗುಲದಲ್ಲಿ (Temple) ನಡೆಯುತ್ತದೆ. ನಾಗಾರಾಧನೆಯ ಪುಣ್ಯ ಕ್ಷೇತ್ರ ದಕ್ಷಿಣಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಶ್ರೀ ಕ್ಷೇತ್ರದ ಪವಿತ್ರ ಮಹಾಪ್ರಸಾದ ಮೂಲಮೃತ್ತಿಕೆ ಅರ್ಥಾತ್ ಹುತ್ತದ ಮಣ್ಣನ್ನು (Soil) ತೆಗೆಯಲಾಯಿತು. ಶ್ರೀ ದೇವಳದ ಗರ್ಭಗುಡಿಯಿಂದ ದೇವಳದ ಪ್ರಧಾನ ಅರ್ಚಕರು ವಿವಿಧ ವೈದಿಕ ವಿಧಿವಿಧಾನಗಳೊಂದಿಗೆ ಮುಂಜಾನೆಯ ಶುಭ ಮುಹೂರ್ತದಲ್ಲಿ ಮೂಲಪ್ರಸಾದ ತೆಗೆದರು.
ಕ್ಷೇತ್ರದ ಮೂಲಸ್ಥಾನವಾದ ಗರ್ಭಗುಡಿಯಿಂದ ಈ ಮೃತ್ತಿಕಾ ಪ್ರಸಾದವನ್ನು ದೇವಳದ ಪ್ರಧಾನ ಅರ್ಚಕರು ತೆಗೆದು ಭಕ್ತಾದಿಗಳಿಗೆ ನೀಡಿದರು. ಇದು ಮೂಲಸ್ಥಾನವಾದ ಕುಕ್ಕೆ ಸುಬ್ರಹ್ಮಣ್ಯ ದೇವಳದ ಗರ್ಭಗುಡಿಯಿಂದ ತೆಗೆಯುವ ಕ್ಷೇತ್ರದ ಅತ್ಯಂತ ಪವಿತ್ರ ಮಹಾಪ್ರಸಾದ. ಯಾವುದೇ ದೇವಳದಲ್ಲಿ ಕೂಡಾ ಇಂತಹ ಪ್ರಸಾದ ದೊರಕುವುದಿಲ್ಲ. ಇದು ಕುಕ್ಕೆ ಕ್ಷೇತ್ರದಲ್ಲಿ ಮಾತ್ರ ಭಕ್ತರಿಗೆ ದೊರಕುವುದು ವಿಶೇಷ.
ಮೂಲಮೃತ್ತಿಕಾ ಪ್ರಸಾದವನ್ನು ವರ್ಷದಲ್ಲಿ ಒಂದೇ ಬಾರಿ ತೆಗೆಯಲಾಗುವುದು. ಈ ಮೃತ್ತಿಕಾ ಪ್ರಸಾದವು ರೋಗ ನಿರೋಧಕ, ಸಂತಾನ ಕಾರಕ ಮತ್ತು ಚರ್ಮರೋಗಗಳ ಪರಿಹಾರಕ್ಕೆ ದಿವ್ಯ ಔಷಧ. ಕ್ಷೇತ್ರದ ಈ ಮುಖ್ಯ ಪ್ರಸಾದವನ್ನು ಶುಭ ಕಾರ್ಯಗಳ ಒಳಿತಿಗೂ, ವ್ಯಾಧಿಗಳ ನಿವಾರಣೆಗೂ ಭಕ್ತ ಜನರು ಕೊಂಡೊಯ್ಯುತ್ತಾರೆ. ಇದನ್ನು ತೀರ್ಥದಲ್ಲಿ ಸೇವಿಸುವುದರ ಮೂಲಕ ಅಥವಾ ಶರೀರಕ್ಕೆ ರಕ್ಷೆಯಾಗಿ ಕಟ್ಟಿಕೊಳ್ಳುವುದರ ಮೂಲಕ ಭಕ್ತಾದಿಗಳು ಈ ಪ್ರಸಾದವನ್ನು ತಮ್ಮೊಳಗೆ ಧಾರಣೆ ಮಾಡುತ್ತಾರೆ. ಆದರೆ ಇದನ್ನು ಶರೀರದಲ್ಲಿ ಇರಿಸಿಕೊಂಡಾಗ ಅಪವಿತ್ರವಾಗದಂತೆ ತಡೆಯುವುದು ಮಾತ್ರ ಅತ್ಯಂತ ಪ್ರಮುಖವಾದ ಅಂಶವಾಗಿದೆ.
ಪ್ರತೀ ವರ್ಷ ಜಾತ್ರೆಯ ಹೊತ್ತಲ್ಲಿ ತಿಳಿಯುವ ಹುತ್ತದ ಮಣ್ಣಿನ ಮಹತ್ವ
ನಾಗಾರಾಧನೆಯ ಪವಿತ್ರ ಕ್ಷೇತ್ರವಾದ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಾಗದೋಷ ಪರಿಹಾರವಾಗಿ ಆಶ್ಲೇಷ ಬಲಿ ಪೂಜೆ, ಸರ್ಪ ಸಂಸ್ಕಾರ ಸೇವೆಯನ್ನು ನೆರವೇರಿಸಲಾಗುತ್ತದೆ. ಕ್ಷೇತ್ರದ ಪ್ರಮುಖ ಸೇವೆಯ ರೂಪದಲ್ಲಿ ಈ ಎರಡೂ ಸೇವೆಯನ್ನು ಕ್ಷೇತ್ರದಲ್ಲಿ ಸಲ್ಲಿಸಲು ಅವಕಾಶಗಳಿದ್ದು, ಸರ್ಪಸಂಸ್ಕಾರ ಸೇವೆ ಸಲ್ಲಿಸಿದವರಿಗೆ ಈ ಮೂಲ ಮೃತ್ತಿಕೆ ಪ್ರಸಾದವನ್ನೂ ನೀಡಲಾಗುತ್ತದೆ. ಕ್ಷೇತ್ರದಲ್ಲಿ ವಾರ್ಷಿಕ ಜಾತ್ರೋತ್ಸವ ಆರಂಭಗೊಂಡ ಹಿನ್ನೆಲೆಯಲ್ಲಿ ಸಂಪ್ರದಾಯದಂತೆ ಜಾತ್ರೋತ್ಸವದ ಸಂದರ್ಭದಲ್ಲಿ ಹುತ್ತದ ಮೂಲಮೃತ್ತಿಕೆಯನ್ನು ತೆಗೆಯುವ ಸಂಪ್ರದಾಯ ಅನಾದಿಕಾಲದಿಂದಲೂ ಇಲ್ಲಿ ಆಚರಣೆಯಲ್ಲಿದೆ.
Disclaimer
ಇಲ್ಲಿ ನೀಡಿರುವ ಎಲ್ಲಾ ಮಾಹಿತಿಯನ್ನು ಜ್ಯೋತಿಷ್ಯ ಶಾಸ್ತ್ರಜ್ಞರು ಮತ್ತು ತಜ್ಞರನ್ನು ಸಂಪರ್ಕಿಸಿ ರಾಶಿ, ಧರ್ಮ ಮತ್ತು ಶಾಸ್ತ್ರಗಳಿಗೆ ಅನುಸಾರವಾಗಿ ನೀಡಲಾಗಿದೆ. ಯಾವುದೇ ಘಟನೆ-ದುರ್ಘಟನೆ ಅಥವಾ ಲಾಭ-ನಷ್ಟಗಳು ಕೇವಲ ಕಾಕತಾಳೀಯ. ಸಾರ್ವಜನಿಕ ಹಿತದೃಷ್ಟಿಯಿಂದ ಜ್ಯೋತಿಷಿಗಳ ಮಾಹಿತಿ ನೀಡಲಾಗಿದೆ. ಇಲ್ಲಿ ತಿಳಿಸಿರುವ ಯಾವುದೇ ಮಾಹಿತಿಯನ್ನು ಲೋಕಲ್ 18 ವ್ಯಕ್ತಿಗತವಾಗಿ ಸಮರ್ಥಿಸಿಕೊಳ್ಳುವುದಿಲ್ಲ.
Dakshina Kannada,Karnataka
November 17, 2025 11:55 AM IST