Last Updated:
ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕಾಜೆಯಲ್ಲಿ ನಡೆದ ಅಯ್ಯಪ್ಪ ದೀಪೋತ್ಸವದಲ್ಲಿ ಮಾಲಾಧಾರಿಗಳು ಶಬರಿಮಲಾ ಶೈಲಿಯಲ್ಲಿ ಕೆಂಡ ಸೇವೆ ಹಾಗೂ ಎಣ್ಣೆಯಲ್ಲಿ ಅಪ್ಪ ತೆಗೆಯುವ ವಿಧಿ ನೆರವೇರಿಸಿದರು.
ದಕ್ಷಿಣ ಕನ್ನಡ: ಅಯ್ಯಪ್ಪ ಸ್ವಾಮಿಯ (Lord Ayyappa) ಪ್ರಮುಖ ಕ್ಷೇತ್ರವಾದ ಶಬರಿಮಲೆಯಲ್ಲಿ (Sabarimala) ಜನವರಿ 14 ರಂದು ಮಕರ ಸಂಕ್ರಮಣದ ಸಂಭ್ರಮ ಕಂಡು ಬರಲಿದೆ. ಈ ನಡುವೆ ಅಯ್ಯಪ್ಪ ಮಾಲಾಧಾರಿಗಳು ತಮ್ಮ ತಮ್ಮ ಶಿಬಿರಗಳಲ್ಲಿ ಹಲವು ಬಗೆಯ ಧಾರ್ಮಿಕ ವಿಧಿ, ವಿಧಾನಗಳು ನಡೆಸುತ್ತಾರೆ. ಅದರಲ್ಲೊಂದು ವಿಶೇಷವಾದ ಕೆಂಡ ಸೇವೆ ಮತ್ತು ಕುದಿಯುವ ಎಣ್ಣೆಯಿಂದ ಅಪ್ಪವನ್ನು (ತಿಂಡಿ) ತೆಗೆಯೋದು ಕೂಡಾ ಒಂದು. ಕರಾವಳಿ ಭಾಗದಲ್ಲಿ ಹಿಂದೆ ಪ್ರಸಿದ್ಧಿ ಪಡೆದಿದ್ದ ಅಯ್ಯಪ್ಪ ಭಕ್ತರ ಕೆಂಡ ಸೇವೆ ಇತ್ತೀಚಿನ ದಿನಗಳಲ್ಲಿ ಅತಿ ಕಡಿಮೆ ಎನ್ನಬಹುದಾಗಿದೆ. ಅಂತೆಯೇ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಬಂಟ್ವಾಳ ತಾಲೂಕಿನ ಕುಕ್ಕಾಜೆಯಲ್ಲಿ ಇಂತಹುದೇ ಒಂದು ಅಯ್ಯಪ್ಪ ದೀಪೋತ್ಸವ ಭಕ್ತರ (Devotees) ಶ್ರದ್ಧಾಭಕ್ತಿಯ ಮೂಲಕ ನಡೆದಿದೆ.
ಪ್ರಮುಖವಾಗಿ ಅಯ್ಯಪ್ಪ ಸ್ವಾಮಿಯ ಜೀವನ ಚರಿತ್ರೆ, ಧಾರ್ಮಿಕ ವಿಧಿ-ವಿಧಾನಗಳನ್ನು ನೆರವೇರಿಸಲೆಂದೇ ಪಕ್ಕದ ಕೇರಳದ ಕಾಞಂಗಾಡ್ ನಿಂದ ಅಯ್ಯಪ್ಪ ಸ್ವಾಮಿಯ ಮಾಲಾಧಾರಿಗಳು ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸುತ್ತಾರೆ. ಶಬರಿಮಲೆಯಲ್ಲಿ ಯಾವ ರೀತಿಯಲ್ಲಿ ಅಯ್ಯಪ್ಪ ಸ್ವಾಮಿಯ ಗುಡಿ ಮತ್ತು ಇತರ ಗುಡಿಗಳಿವೆಯೋ, ಅದೇ ರೀತಿಯ ಕುಟೀರಗಳನ್ನು ದೀಪೋತ್ಸವಕ್ಕಾಗಿಯೇ ಮಾಲಾಧಾರಿಗಳು ನಿರ್ಮಿಸುತ್ತಾರೆ.
ಆ ಬಳಿಕ ಅಯ್ಯಪ್ಪ ಸ್ವಾಮಿ ಮತ್ತು ವಾವರ ಸ್ವಾಮಿ ನಡುವೆ ನಡೆಯುವ ಯುದ್ಧದ ಸನ್ನಿವೇಶವನ್ನೂ ನರ್ತನದ ಮೂಲಕ ಪ್ರಸ್ತುತ ಪಡಿಸುತ್ತಾರೆ. ಅಯ್ಯಪ್ಪ ಸ್ವಾಮಿಗೆ ಅತೀ ಪ್ರಿಯವಾದ ಪಾಲಸಮರದ ಮೆರವಣಿಗೆಯೂ ನಡೆಯುತ್ತದೆ. ಹಲಸಿನ ಮರದ ಕಟ್ಟಿಗೆಗೆ ಬೆಂಕಿ ಹಾಕಿ ಅದರ ಮೇಲೆ ಅಯ್ಯಪ್ಪ ಮಾಲಾಧಾರಿಗಳು ಕೆಂಡ ಸೇವೆಯನ್ನು ನೆರವೇರಿಸಲಾಗುತ್ತದೆ.
ಈ ವಿಧಿ-ವಿಧಾನಗಳ ಜೊತೆಗೆ ಅಯ್ಯಪ್ಪ ಮಾಲಾಧಾರಿಗಳು ಕೆಂಡ ಸೇವೆಯನ್ನೂ ನೆರವೇರಿಸುವ ಮೂಲಕ ಅಯ್ಯಪ್ಲನ ಕೃಪೆಗೆ ಪಾತ್ರರಾಗುತ್ತಾರೆ. ಉರಿಯುವ ಕೆಂಡದ ಮಧ್ಯ ಅಯ್ಯಪ್ಪ ಮಾಲಾಧಾರಿಗಳು ಯಾವುದೇ ಅಂಜಿಕೆಯಿಲ್ಲದೆ ನಡೆದು ತಮ್ಮ ಭಕ್ತಯನ್ನ ಪ್ರದರ್ಶಿಸುತ್ತಾರೆ. ಅಲ್ಲದೆ ಕುದಿಯುತ್ತಿರುವ ಎಣ್ಣೆಯಲ್ಲಿ ಬೇಯುತ್ತಿರುವ ಅಕ್ಕಿಯ ಅಪ್ಪವನ್ನು ಬರಿಗೈಯಿಂದಲೇ ಎಣ್ಣೆಯಿಂದ ತೆಗೆಯುವ ಮೂಲಕ ಎಲ್ಲರ ಆಶ್ಚರ್ಯದ ಕೇಂದ್ರಬಿಂದುವಾಗುತ್ತಾರೆ.
Dakshina Kannada,Karnataka