Last Updated:
ಮಂಗಳೂರು: ದಕ್ಷಿಣ ಕನ್ನಡದಲ್ಲಿ 170 ಟನ್ ಪ್ಲಾಸ್ಟಿಕ್ ತ್ಯಾಜ್ಯ ಬಳಸಿ 50 ಕಿ.ಮೀ ಉದ್ದದ ಸರ್ವೀಸ್ ರಸ್ತೆ ನಿರ್ಮಾಣ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈ ವಿನೂತನ ಪ್ರಯೋಗದಲ್ಲಿ ಯಶಸ್ವಿಯಾಗಿದೆ.
ಮಂಗಳೂರು: ಹೌದು ಎಸೆದ ಕಲ್ಲನ್ನು ಬಳಸಿ ಸೇತುವೆ ಮಾಡು ಅನ್ನೋ ಗಾದೆಯ ಹಾಗೆ ಇಲ್ಲಿ ಬಿಸಾಡಿದ ಪ್ಲಾಸ್ಟಿಕ್ ಸಂಗ್ರಹಿಸಿ (Plastic Waste) ರಸ್ತೆ ನಿರ್ಮಿಸಲಾಗಿದೆ. ರೋಡು ತುಂಬಾ ಪ್ಲಾಸ್ಟಿಕ್ ಎಂಬ ವರದಿ ಈಗ ಜನರಿಗೆ ಬೇಸರವಲ್ಲ, ಖುಷಿ ಉಂಟು ಮಾಡುತ್ತಿದೆ. ಕಾರಣ ಪ್ಲಾಸ್ಟಿಕ್ ರಸ್ತೆಯ ಮೇಲಿರದೇ ಅದರಿಂದಲೇ ಸರ್ವೀಸ್ ರಸ್ತೆ (Service Road) ತಯಾರಾಗುತ್ತಿದೆ. ಪ್ಲಾಸ್ಟಿಕ್ ತ್ಯಾಜ್ಯ ವಿಲೇವಾರಿ (Plastic Waste Disposal) ಸದ್ಯದ ತಲೆನೋವು. ಆದರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (National Highway Authority)ಪ್ಲಾಸ್ಟಿಕ್ ಬಳಸಿ ಸರ್ವೀಸ್ ರಸ್ತೆ ನಿರ್ಮಿಸುವ ಮೂಲಕ ವಿನೂತನ ಪ್ರಯೋಗ ನಡೆಸಿ ಯಶಸ್ವಿಯಾಗಿದೆ.
170 ಟನ್ ಪ್ಲಾಸ್ಟಿಕ್, 50 ಕಿ.ಮೀ ಉದ್ದದ ರಸ್ತೆ
ಹೌದು, ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಗ್ರಾಮ ಪಂಚಾಯತ್ ವ್ಯಾಪ್ತಿಯಿಂದ ಸಂಗ್ರಹಿಸಿರುವ 170 ಟನ್ ಪ್ಲಾಸ್ಟಿಕ್ ತ್ಯಾಜ್ಯವನ್ನು ಬಳಕೆ ಮಾಡಿ ಸುಮಾರು 50 ಕಿ.ಮೀ. ಉದ್ದದ ಸರ್ವೀಸ್ ರಸ್ತೆಗಳನ್ನು ನಿರ್ಮಾಣ ಮಾಡಿದೆ. ರಾಷ್ಟ್ರೀಯ ಹೆದ್ದಾರಿ 66ರ ತಲಪಾಡಿಯಿಂದ ನಂತೂರುವರೆಗೆ ಮತ್ತು ಸುರತ್ಕಲ್ನಿಂದ ಸಾಸ್ತಾನದವರೆಗೆ ಕಡಿಮೆ ಸಾಂದ್ರತೆಯ ಪಾಲಿಥಿನ್ ಬಳಸಿ ಈ ಸರ್ವೀಸ್ ರಸ್ತೆಗಳನ್ನು ನಿರ್ಮಿಸಲಾಗಿದೆ.
ಮಳೆಗಾಲಕ್ಕೂ ಮಿಸುಕೋಲ್ಲ ಈ ರಸ್ತೆ
ಮಳೆ ಅಧಿಕವಿರುವ ಪ್ರದೇಶಗಳಲ್ಲಿ ಡಾಂಬರ್ ರಸ್ತೆಯಲ್ಲಿ ಹೊಂಡಗುಂಡಿಗಳು ಬೇಗ ಸೃಷ್ಟಿಯಾಗುತ್ತದೆ. ಇದಕ್ಕೆ ಪರಿಹಾರ ಕಂಡುಕೊಳ್ಳಲು ಎನ್ಎಚ್ ಮಂಗಳೂರು ಕಚೇರಿಯ ಯೋಜನಾ ನಿರ್ದೇಶಕರು ಹೆದ್ದಾರಿ ಪ್ರಾಧಿಕಾರಕ್ಕೆ ಪರ್ಯಾಯ ವ್ಯವಸ್ಥೆಗೆ ವರದಿ ಸಲ್ಲಿಸಿದ್ದರು. ಇದನ್ನು ಪರಿಶೀಲಿಸಿದ ಇಂಡಿಯನ್ ರೋಡ್ ಕಾಂಗ್ರೆಸ್(ಐಆರ್ಸಿ) ದಕ್ಷಿಣ ಕನ್ನಡ ಜಿಲ್ಲೆಯ ಸರ್ವೀಸ್ ರಸ್ತೆ ನಿರ್ಮಾಣಕ್ಕೆ ಕಡಿಮೆ ಸಾಂದ್ರತೆಯ ಪಾಲಿಥಿನ್ ಬಳಸುವಂತೆ ಅನುಮತಿ ನೀಡಿದೆ. ಇದು ರಸ್ತೆಯ ಗಟ್ಟಿತನವನ್ನು ಹೆಚ್ಚಿಸಿ ಬಾಳಿಕೆಯನ್ನು ದೀರ್ಘಗೊಳಿಸುತ್ತದೆ.
ಕ್ಯಾರಿ ಬ್ಯಾಗ್ ಇಂದ ತಯಾರಾಯ್ತು ಕಾರು ಓಡಾಡೋ ರೋಡು
ದಕ್ಷಿಣ ಕನ್ನಡ ಜಿಲ್ಲೆಯ 4ಕಡೆಗಳಲ್ಲಿ ಶೂನ್ಯ ನಿರ್ವಹಣಾ ವೆಚ್ಚದ ಮಾದರಿಯಲ್ಲಿ ಸಮಗ್ರ ಎಂಆರ್ಎಫ್ ಘಟಕವನ್ನು ನಿರ್ವಹಿಸುತ್ತಿರುವ ಮಂಗಳಾ ರಿಸೋರ್ಸಸ್ ಮ್ಯಾನೇಜ್ಮೆಂಟ್ಗೆ ಹೆದ್ದಾರಿ ಕಾಮಗಾರಿ ನಿರ್ಮಿಸಿರುವ ಇನ್ನಾ ಎಂಬ ಉಪಗುತ್ತಿಗೆದಾರ ಕಂಪೆನಿ ಎಲ್ಡಿಪಿಇಗೆ ಬೇಡಿಕೆ ಸಲ್ಲಿಸಿತ್ತು. ಜನವರಿಯಿಂದ ಮೇ ನಡುವೆ ಸಂಗ್ರಹಿಸಿರುವ ಘನತ್ಯಾಜ್ಯದಲ್ಲಿ, 170 ಟನ್ನಷ್ಟು ಕ್ಯಾರಿಬ್ಯಾಗ್, ಪ್ಯಾಕೇಜಿಂಗ್ ಕವರ್ಗಳನ್ನು ರಸ್ತೆ ನಿರ್ಮಾಣಕ್ಕೆ ನೀಡಲಾಗಿದೆ.
ಪ್ಲಾಸ್ಟಿಕ್ ಅನ್ನು ಗ್ರೇಡಿಂಗ್, ಸ್ವಚ್ಛಗೊಳಿಸಿ, ವ್ಯವಸ್ಥಿತಗೊಳಿಸಿ ಕೊಡುವುದು ಸವಾಲಿನ ಕೆಲಸ. ಇದಕ್ಕಾಗಿ ಪ್ರತ್ಯೇಕ ಯಂತ್ರವನ್ನು ಅಳವಡಿಸಲಾಗಿದೆ. ಒಟ್ಟಿನಲ್ಲಿ ಪ್ಲಾಸ್ಟಿಕ್ ಮರುಬಳಕೆಯೊಂದಿಗೆ ರಸ್ತೆ ನಿರ್ಮಾಣದ ವಿನೂತನ ಪ್ರಯೋಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಶಸ್ವಿಯಾಗಿದೆ.
Dakshina Kannada,Karnataka
June 17, 2025 5:41 PM IST