Last Updated:
ಸಾನಿಧ್ಯದ ನಾಲ್ವರು ಶಿಕ್ಷಕರಿಗೆ ಬೆಂಗಳೂರಿನ ಕ್ರಾಫ್ಟಿಂಜನ್ ಫೌಂಡೇಶನ್ನಿಂದ ಊದುಬತ್ತಿ ತಯಾರಿಯ ತರಬೇತಿ ದೊರಕಿತ್ತು. ಕಳೆದ ಮೂರು ತಿಂಗಳಿನಿಂದ ಈ ಶಿಕ್ಷಕರು ವಿಶೇಷ ಚೇತನ ಮಕ್ಕಳನ್ನು ಊದುಬತ್ತಿ ತಯಾರಿಕೆಯಲ್ಲಿ ತೊಡಗಿಸುತ್ತಿದ್ದಾರೆ.
ಮಂಗಳೂರು: ಎಲ್ಲವೂ ಸರಿಯಿದ್ದರೂ ಕೆಲವೊಬ್ಬರು ಏನೂ ಕೆಲಸ ಮಾಡದೆ ತಿರುಗಾಡುತ್ತಿದ್ದಾರೆ. ಆದರೆ ಈ ದೇವರ ಮಕ್ಕಳು ಮಾತ್ರ ತಾವ್ಯಾರಿಗೂ ಕಡಿಮೆಯಿಲ್ಲ ಎಂಬಂತೆ ತ್ಯಾಜ್ಯ ಹೂಗಳಿಂದಲೇ(Waste Flowers) ಊದುಬತ್ತಿ ತಯಾರಿಸುತ್ತಿದ್ದಾರೆ. ಹೌದು.. ಹೇಳಿ ಕೇಳಿ ಇವರು ವಿಶೇಷ ಚೇತನರು(Specially abled). ಮಂಗಳೂರಿನ ಶಕ್ತಿನಗರದ ಸಾನಿಧ್ಯ ವಿಶೇಷ ಮಕ್ಕಳ ವಸತಿಶಾಲೆಯ ವಿದ್ಯಾರ್ಥಿಗಳಾದ ಇವರು ವೇಸ್ಟ್ ಹೂಗಳಿಂದಲೇ ಅಗರಬತ್ತಿ ತಯಾರಿಸುತ್ತಿದ್ದಾರೆ.
ಇಲ್ಲಿನ 20ವಿದ್ಯಾರ್ಥಿಗಳು ಅಗರಬತ್ತಿ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಊದುಬತ್ತಿ ತಯಾರಿಯಲ್ಲಿ ತೊಡಗಿರುವವರು 21ವರ್ಷ ಮೇಲ್ಪಟ್ಟ ವಿಶೇಷ ಚೇತನರು. ಸಾನಿಧ್ಯದ ನಾಲ್ವರು ಶಿಕ್ಷಕರಿಗೆ ಬೆಂಗಳೂರಿನ ಕ್ರಾಫ್ಟಿಂಜನ್ ಫೌಂಡೇಶನ್ನಿಂದ ಊದುಬತ್ತಿ ತಯಾರಿಯ ತರಬೇತಿ ದೊರಕಿತ್ತು. ಕಳೆದ ಮೂರು ತಿಂಗಳಿನಿಂದ ಈ ಶಿಕ್ಷಕರು ವಿಶೇಷ ಚೇತನ ಮಕ್ಕಳನ್ನು ಊದುಬತ್ತಿ ತಯಾರಿಕೆಯಲ್ಲಿ ತೊಡಗಿಸುತ್ತಿದ್ದಾರೆ.
ಇದನ್ನೂ ಓದಿ: Kannada Nudi Habba: ಕನ್ನಡ ಭುವನೇಶ್ವರಿ ರಥಕ್ಕೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಭವ್ಯ ಸ್ವಾಗತ!
ಹೂವಿನ ದಳಗಳನ್ನು ಹುಡಿ ಮಾಡಿ ಅಗರಬತ್ತಿ ತಯಾರಿ ನಡೆಯುತ್ತಿದೆ. ಇದಕ್ಕಾಗಿ ಸಾನಿಧ್ಯ ವಸತಿ ಶಾಲೆಯು ದೇವಸ್ಥಾನ, ಸಮಾರಂಭ, ಮಾರ್ಕೆಟ್ಗಳಲ್ಲಿ ಬಳಸಿದ ಮತ್ತು ಉಳಿದ ಹೂವನ್ನು ಸಂಗ್ರಹಿಸುತ್ತಿದೆ. ಇದರಲ್ಲಿ ಚೆಂಡು ಹೂ, ಸೇವಂತಿಗೆ, ಜೀನಿಯಾ ಹೂಗಳನ್ನು ಪ್ರತ್ಯೇಕಿಸಿ ಎಸಳುಗಳನ್ನು ಸಂಗ್ರಹಿಸುತ್ತಾರೆ. ಈ ಎಸಳುಗಳನ್ನು ವಾರದವರೆಗೆ ನೆರಳಿನಲ್ಲಿ ಒಣಗಿಸಲಾಗುತ್ತದೆ. ಬಳಿಕ ಎಸಳುಗಳನ್ನು ಯಂತ್ರದಲ್ಲಿ ಹುಡಿಗೊಳಿಸಿ ಫ್ರಿಮಿಕ್ಸ್ನೊಂದಿಗೆ ಸೇರಿಸಿ ಎಸೆನ್ಸ್, ನೀರು ಹಾಕಿ ಅಂಟು ಮಾಡಲಾಗುತ್ತದೆ.
ಈ ಅಂಟನ್ನು ಊದುಕಡ್ಡಿಯೊಂದಿಗೆ ಯಂತ್ರಕ್ಕೆ ಹಾಕಲಾಗುತ್ತದೆ. ಕಾಲಿನಿಂದ ಯಂತ್ರದ ಪೆಡಲ್ಅನ್ನು ಬಲವಾಗಿ ಅದುಮಿದಂತೆ ಯಂತ್ರದಿಂದ ಊದುಬತ್ತಿ ರೆಡಿಯಾಗಿ ಬರುತ್ತದೆ. ಸಿದ್ಧ ಊದುಬತ್ತಿ ಒಣಗಿದ ಬಳಿಕ ಅದನ್ನು ಪ್ಯಾಕ್ ಮಾಡಲಾಗುತ್ತದೆ. ಬೆಂಗಳೂರು ಕೇಂದ್ರದಿಂದ ಇಲ್ಲಿನ 2,500 ಅಗರಬತ್ತಿಗಳಿಗೆ ಆರ್ಡರ್ ಬಂದಿದೆ. ಮುಂದಕ್ಕೆ ಇನ್ನಷ್ಟು ಆರ್ಡರ್ ದೊರಕುವ ಸಾಧ್ಯತೆಯಿದೆ.
ಒಟ್ಟಿನಲ್ಲಿ ಊದುಬತ್ತಿ ಮಾಡುವ ಕಾಯಕದಲ್ಲಿ ಪರಿಣತಿ ಹೊಂದಿದ ವಿಶೇಷ ಚೇತನರು, ದುಡಿಮೆ ಸಾಧ್ಯ ಎಂಬುದನ್ನು ತೋರಿಸಿದ್ದಾರೆ..
Mangalore,Dakshina Kannada,Karnataka
November 24, 2024 5:35 PM IST