ಕೇವಲ 30 ನಿಮಿಷದಲ್ಲಿ ಮಂಗಗಳನ್ನು ಸೆರೆ ಹಿಡಿಯುವ ಸಮಾಧಾನ್ ಸಹೋದರರು; ಹೇಗಿರುತ್ತೆ ಗೊತ್ತಾ ಈ ಮಂಕಿ ಮ್ಯಾನ್ಗಳ ಕಾರ್ಯಾಚರಣೆ? – MONKEY WHISPERERS OF MAHARASHTRA
ಬೆಳೆಗಳಿಗೆ ಹಾನಿ ಮಾಡುವ ಮಂಗಗಳನ್ನು ಕೌಶಲ್ಯಯುತವಾಗಿ ಕೆಲವೇ ನಿಮಿಷದಲ್ಲಿ ಸೆರೆ ಹಿಡಿದು ಅವುಗಳನ್ನು ಸುರಕ್ಷಿತವಾಗಿ ಕಾಡಿಗೆ ಬಿಡುವುದು ಇವರ ಕಾರ್ಯ.
ಅಮರಾವತಿ (ಮಹಾರಾಷ್ಟ್ರ): ಜರ್ಮನ್ ಪ್ರಸಿದ್ಧ ಜಾನಪದ ಕಥೆ ಹ್ಯಾಮೆಲಿನ್, ಕಿಂದರಿ ಜೋಗಿ ತುತ್ತೂರಿ ಊದುತ್ತಾ ಇಲಿಗಳನ್ನು ಕರೆದುಕೊಂಡು ಹೋದ ಕಥೆ ರೀತಿಯಲ್ಲೇ ಮಹಾರಾಷ್ಟ್ರದ ಸಹೋದರರು ಇದೀಗ ತಮ್ಮ ಕಾರ್ಯದ ಮೂಲಕ ಗಮನ ಸೆಳೆದಿದ್ದಾರೆ. ಆದರೆ, ಇವರು ಇಲಿ ಬದಲಾಗಿ ಹಿಡಿದಿರುವುದು ಮಂಗಗಳನ್ನು. ಕೋತಿಗಳನ್ನೇ ಯಾಮಾರಿಸಿ ಅವುಗಳನ್ನು ಸೆರೆ ಹಿಡಿಯುವುದು ಇವರ ಕಾಯಕ.
ಬೆಳೆಗಳಿಗೆ ನಷ್ಟ ಉಂಟು ಮಾಡಿ, ರೈತರಿಗೆ ಸಂಕಷ್ಟ ತಂದೊಡ್ಡುತ್ತಿದ್ದ ಮಂಗಗಳನ್ನು ಆಮಿಷವೊಡ್ಡಿ ಬೋನಿನಲ್ಲಿ ಸೆರೆಯಾಗಿಸಿದ್ದು, ಅವುಗಳನ್ನು ಕಾಡಿಗೆ ಸುರಕ್ಷಿತವಾಗಿ ಬಿಡುವ ಕಾರ್ಯಾಚರಣೆ ನಡೆಸುವುದು ಇವರ ಕಾಯಕವಾಗಿದೆ.

ಸಮಾಧಾನ್ ಗಿರಿ ಮತ್ತು ಅವರ ಸಹೋದರ ಇತ್ತೀಚಿಗೆ ಅಮರಾವತಿಯ ಅಂಜನ್ಗಾಂವ್ ಪ್ರದೇಶದಲ್ಲಿ ಕೇವಲ 30 ನಿಮಿಷದಲ್ಲಿ ಈ ಕೆಲಸ ಮಾಡಿಮುಗಿಸಿದ್ದಾರೆ. ಕೃಷಿ ಭೂಮಿಯನ್ನು ಆಟದ ಸ್ಥಳ ಮಾಡಿಕೊಂಡು ಬೆಳೆಗಳನ್ನು ಹಾಳು ಮಾಡುವ ಜೊತೆಗೆ ಮರದಿಂದ ಮರಕ್ಕೆ ಹಾರುತ್ತ, ಹಣ್ಣುಗಳನ್ನು ತಿನ್ನುತ್ತಾ, ಮನೆ ಮೇಲ್ಚಾವಣಿಗಳ ಮೇಲೆ ಓಡಾಡುವ ಮಂಗಗಳ ಕಾಟದಿಂದ ಜನರು ಹೈರಾಣಾಗಿದ್ದರು. ಇಂತಹ ಮಂಗಗಳ ಕಾಟವನ್ನು ಇದೀಗ ಸಮಾಧಾನ್ ಮತ್ತು ಆತನ ಸಹೋದರರಾದ ಸಂದೀಪ್ ಮತ್ತು ಕೃಷ್ಣ ಹಿಡಿದಿದ್ದಾರೆ.
ಇಂತಹ ಕುಚೇಷ್ಟೆ ಮಂಗಗಳನ್ನು ಓಡಿಸುವುದೇ ಹರಸಾಹಸ ಎನ್ನುವಾಗ ಈ ಸಹೋದರರು ಕೇವಲ 30 ನಿಮಿಷದಲ್ಲಿ 60 ಮಂಗಗಳನ್ನು ಕೂಡಿ ಹಾಕಿದ್ದಾರೆ. ಈ ರೀತಿಯ ಮಂಗಗಳನ್ನು ಸೆರೆಹಿಡಿಯುವ ಕಾರ್ಯದಲ್ಲಿ ನಮ್ಮ ಅಜ್ಜ ಮತ್ತು ಮುತ್ತಜ್ಜ ಪರಿಣಿತರಿದ್ದರು. ಇದೀಗ ನಾವು ಈ ವಿದ್ಯೆ ಕಲಿತಿದ್ದೇವೆ ಎನ್ನುತ್ತಾರೆ ಈ ಕಿಂದರಿಜೋಗಿ ಸಹೋದರರು.
ತಮ್ಮ ಹಿರಿಯ ಪೀಳಿಗೆಯಿಂದ ಮಂಗಗಳನ್ನು ಕಲಿಯುವ ತಂತ್ರ ಇವರಿಗೆ ನೈಸರ್ಗಿಕವಾಗಿ ಒಲಿದು ಬಂದಿದೆ. ಇದಕ್ಕಾಗಿ ಹೊಸ ತಂತ್ರ ಕಲಿತಿಲ್ಲ ಎನ್ನುವ ಸಮಾಧಾನ್ ತಾವು 10 ವರ್ಷದ ಬಾಲಕನಿದ್ದಾಗಿನಿಂದ ಈ ರೀತಿ ಮಂಗಗಳನ್ನು ಸೆರೆ ಹಿಡಿಯುವುದನ್ನು ಆರಂಭಿಸಿದಾಗಿ ತಿಳಿಸಿದ್ದಾರೆ. ಕುಟುಂಬದ ಜೊತೆಗೆ ಕೋತಿಗಳನ್ನು ಸೆರೆ ಹಿಡಿಯುವಾಗ ಹೋಗುತ್ತಿದ್ದೆ ಎನ್ನುವ ಸಮಾಧಾನ್, ಮಹಾರಾಷ್ಟ್ರದ 3,500 ಹಳ್ಳಿ ಹಾಗೂ ಇತರೆ ರಾಜ್ಯಗಳಿಗೂ ಪ್ರಯಾಣಿಸಿದ್ದಾಗಿ ಹೇಳಿದ್ದಾರೆ. ಈ ಸೆರೆಹಿಡಿಯುವ ತಂತ್ರಗಾರಿಕೆ ಸರಳ ಹಾಗೂ ಪರಿಣಾಮಕಾರಿಯಾಗಿದೆ. ಮಂಗಗಳು ಹೆಚ್ಚಾಗಿರುವ ಕೃಷಿ ಸ್ಥಳದಲ್ಲಿ ಒಂದು ದೊಡ್ಡ ಪಂಜರವಿಟ್ಟು, ಅದರ ಒಂದು ಮೂಲೆಯಲ್ಲಿ ಬಾಳೆಹಣ್ಣು ಹಾಗೇ ಜೋಳವನ್ನು ಹಾಕಬೇಕು. ಅವುಗಳು ಅದನ್ನು ತಿನ್ನಲು ಬರುವವರೆಗೆ ಕಾದು, ಅವುಗಳು ಬಂದ ಬಳಿಕ ಅದರ ಬಾಗಿಲು ಮುಚ್ಚಬೇಕು ಎನ್ನುತ್ತಾರೆ.
ಅಂಜನಗಾಂವ್ ಬಾರಿಯಲ್ಲಿ ರವೀಂದ್ರ ಮೆಟ್ಕರ್ ಅವರ ಕೃಷಿ ತೋಟದಲ್ಲಿ ಈ ರೀತಿ 60 ಮಂಗಗಳನ್ನು ಒಂದೂವರೆ ಗಂಟೆಯಲ್ಲಿ ಹಿಡಿಯಲಾಗಿದೆ. ಇವುಗಳನ್ನು ಹಿಡಿಯಲು ಬೆನ್ನಟ್ಟುವುದಾಗಲಿ, ಹಿಂಸಿಸುವುದಾಗಲಿ ಮಾಡುವುದಲ್ಲ. ಅವುಗಳಿಗೆ ಹಣ್ಣು ಇಷ್ಟ ಎಂಬುದು ಗೊತ್ತು. ಅದನ್ನು ತಿಳಿದು ಅದಕ್ಕೆ ಪಂಜರದೊಳಗೆ ಹೋಗುವಂತೆ ನಾವು ಮಾಡುತ್ತೇವೆ. ಬಳಿಕ ಅವುಗಳನ್ನು ಸುರಕ್ಷಿತ ಸ್ಥಳಕ್ಕೆ ಬಿಡಲಾಗುವುದು ಎಂದರು. ಸಣ್ಣ ಪಂಜರದಿಂದ ದೊಡ್ಡ ಪಂಜರದೊಳಗೆ ಅದೇ ರೀತಿ ತಂತ್ರದ ಮೂಲಕ ಕಡಲೆ ಬೀಜ, ಜೋಳ, ನೀರು ಇಟ್ಟು ಬರುವಂತೆ ಮಾಡುತ್ತೇವೆ. ಸೆರೆಹಿಡಿದ ಮಂಗಗಳನ್ನು ಬುಲ್ದಾನ್ ಜಿಲ್ಲೆಯಲ್ಲಿ ಬೊಥಾ ಅರಣ್ಯದಲ್ಲಿ ಸುರಕ್ಷಿತವಾಗಿ ಬಿಡುತ್ತೇವೆ ಎಂದು ಮಾಹಿತಿ ನೀಡಿದರು.
ಈ ಕುರಿತು ಮಾತನಾಡಿದ ರವೀಂದ್ರ ಮೆಟ್ಕರ್, ನಮ್ಮ ಜಮೀನಿನಲ್ಲಿ ತೆಂಗಿನ ಮರ ಸೇರಿದಂತೆ ಇತರೆ ಬೆಳೆಗಳಿಗೆ ಮಂಗಗಳು ಹಾನಿ ಮಾಡುತ್ತಿದ್ದವು. ಅಲ್ಲದೆ ಅವು ಪೌಲ್ಟ್ರಿ ಮೇಲ್ಚಾವಣಿ ಮೇಲೆ ಓಡಾಡುತ್ತಾ ಹಾನಿ ಮಾಡುತ್ತಿದ್ದವು. ಈ ಹಿನ್ನೆಲೆ ಗಿರಿ ಸಹೋದರರಿಗೆ ಕರೆದು ಸಹಾಯ ಪಡೆದಿದ್ದಾಗಿ ತಿಳಿಸಿದರು.
ಗಿರಿ ಮಂಕಿ ಮ್ಯಾನ್ ಎಂದೇ ಪರಿಚಿತರಾಗಿದ್ದು, ಇವರ ಕುಟುಂಬ ಛತ್ರಪತಿ ಸಂಭಾಜಿ ನಗರ್ ಜಿಲ್ಲೆಯ ಸಿಲೊದ್ ತಾಲೂಕಿನ ಅಂಬಾಯಿ ಗ್ರಾಮದ ಮೂಲದವರಾಗಿದ್ದಾರೆ. ಇವರು ಇದುವರೆಗೂ ರಾಜ್ಯದ 4.5 ಲಕ್ಷ ಮಂಗಗಳ ಸ್ಥಳಾಂತರ ಮಾಡಿದ್ದಾರೆ.
ಗಿರಿ ಸಹೋದರರು ವನ್ಯಜೀವಿ ಪ್ರೇಮಿಗಳಾಗಿದ್ದು, ಹೆಮ್ಮೆಯಿಂದ ಮಂಗಗಳಿಗೆ ಹೊಸ ಬದುಕನ್ನು ನೀಡುತ್ತಿದ್ದಾರೆ. ಮಂಗಗಳು ಮಾತ್ರ ಕೃಷಿಕರಿಗೆ ತೊಂದರೆ ನೀಡುವುದಿಲ್ಲ. ಅನೇಕ ವೇಳೆ ಮಂಗಗಳ ಮೇಲೆ ಕೂಡ ದಾಳಿಯಾಗುತ್ತದೆ. ಇದರಿಂದ ಅವುಗಳಿಗೆ ಸುರಕ್ಷತೆ ಕಲ್ಪಿಸಲು ನಾವು ಈ ಕಾಯಕ ಮುಂದುವರೆಸಿದ್ದೇವೆ ಎಂದಿದ್ದಾರೆ.
ಮಂಗಗಳನ್ನು ಹಿಡಿಯುವ ಇವರ ಕೌಶಲ್ಯಕ್ಕೆ ಮಹಾರಾಷ್ಟ್ರ ರಾಜ್ಯಪಾಲರಾದ ರಮೇಶ್ ಬಾಯಿ ಕೂಡ ಬೆರಗಾಗಿ ಅವರಿಂದ ಸಹಾಯ ಪಡೆದು, ಛತ್ತೀಸ್ಗಢದ ರಾಯ್ಪುರದಲ್ಲಿ ಅವರ ಜಮೀನಿನ ಮಂಗಗಳನ್ನು ಸೆರೆಹಿಡಿಯುವಂತೆ ಕೋರಿದ್ದರು.
ಕೋತಿ ಹಿಡಿಯುವ ಕಾರ್ಯ ಸುಲಭವಾಗಿದ್ದರೂ, ಈ ವೇಳೆ ಗ್ರಾಮದ ಜನರು ಗುಂಪಿನ ಗದ್ದಲ ಹೆಚ್ಚು ಸವಾಲು ಮೂಡಿಸುತ್ತದೆ. ಆದರೆ, ಇದೀಗ ಈ ಇದನ್ನು ನಿರ್ವಹಣೆ ಮಾಡುವುದನ್ನು ಕಲಿತಿದ್ದೇವೆ ಎನ್ನುತ್ತಾರೆ.
ಈ ಕೋತಿಗಳನ್ನು ಹಿಡಿಯುವ ಕಾರ್ಯಕ್ಕೆ ಇವರು 800 ರೂ. ಶುಲ್ಕ ವಿಧಿಸುತ್ತಾರೆ. ಆದರೆ, ಇವರು ಮಾಡುವ ಕಾರ್ಯಕ್ಕೆ ಬೆಲೆ ಕಟ್ಟಲಾಗಲ್ಲ. ಕಾರಣ ನಮ್ಮ ಲಕ್ಷಾಂತರ ಮೌಲ್ಯದ ಬೆಳೆ ಹಾನಿಯನ್ನು ತಪ್ಪಿಸಿದ್ದಾರೆ ಎನ್ನುತ್ತಾರೆ ರವೀಂದ್ರ ಮೆಟ್ಕರ್.
ಮಹಾರಾಷ್ಟ್ರ ರಾಜ್ಯ ಆದಾಯ ಮತ್ತು ಅರಣ್ಯ ಇಲಾಖೆ, ಕೊಂಕಣ್ ಮತ್ತು ಮರಾಠವಾಡದಲ್ಲಿ ಇವರ ಪ್ರಯತ್ನಕ್ಕೆ ಸಂಭಾವನೆಯಾಗಿ 60 ಸಾವಿರ ನೀಡಿದೆ. ಚಿಪ್ಲುನ್, ರತ್ನಗಿರಿ ಮತ್ತು ದಪೊಲಿಯಂತಹ ಸರ್ಕಾರದಲ್ಲಿ ನಮ್ಮ ಕೆಲಸಕ್ಕೆ ಸರ್ಕಾರದ ಸಹಾಯಬೇಕು. ಆದರೆ, ವಿದರ್ಭದಲ್ಲಿ ಸರ್ಕಾರ ಯಾವುದೇ ಸಹಾಯವನ್ನು ನೀಡದ ಕಾರಣ ರೈತರಿಗೆ ಬೇರೆ ಆಯ್ಕೆಗಳಿಲ್ಲ ಎನ್ನುತ್ತಾರೆ.