Last Updated:
ಟೆಸ್ಟ್ ತಂಡಕ್ಕೆ ಶುಭ್ಮನ್ ಗಿಲ್, ಟಿ-20 ತಂಡಕ್ಕೆ ಸೂರ್ಯಕುಮಾರ್ ಯಾದವ್ರನ್ನು ನೇಮಿಸಿದೆ. ಸದ್ಯ ರೋಹಿತ್ ಶರ್ಮಾ ಏಕದಿನ ತಂಡದ ನಾಯಕರಾಗಿದ್ದು ಮುಂದಿನ ದಿನಗಳಲ್ಲಿ ಏಕದಿನ ತಂಡವನ್ನು ಯಾರು ಮುನ್ನಡೆಸಲಿದ್ದಾರೆ ಎಂಬ ಗೊಂದಲ ಉಂಟಾಗಿದೆ.
ಭಾರತ ಕ್ರಿಕೆಟ್ (Team India) ತಂಡದಲ್ಲಿ ಈಗ ಬದಲಾವಣೆಯ ಪರ್ವ ಆರಂಭವಾಗಿದೆ. ಈಗಾಗಲೇ ಹಿರಿಯ ಆಟಗಾರರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಆರ್ ಅಶ್ವಿನ್ರಂತಹ ಆಟಗಾರರು ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ. ಇನ್ನೂ ಕೆಲವು ಹಿರಿಯ ಆಟಗಾರರತ್ತ ಬಿಸಿಸಿಐ ಬಿಗ್ ಬಾಸ್ಗಳು ತಿರುಗಿಯೂ ನೋಡುತ್ತಿಲ್ಲ. ಕೇವಲ ಯುವ ಆಟಗಾರರ ಆಯ್ಕೆಯತ್ತ ಚಿತ್ತ ಹರಿಸಿದೆ. ಈ ನಡುವೆ ಟೆಸ್ಟ್ ತಂಡಕ್ಕೆ ಶುಭ್ಮನ್ ಗಿಲ್ (Shubhman Gill), ಟಿ-20 ತಂಡಕ್ಕೆ ಸೂರ್ಯಕುಮಾರ್ ಯಾದವ್ರನ್ನು (Suryakumar Yadav) ನೇಮಿಸಿದೆ. ಸದ್ಯ ರೋಹಿತ್ ಶರ್ಮಾ (Rohit Sharma) ಏಕದಿನ ತಂಡದ ನಾಯಕರಾಗಿದ್ದು ಮುಂದಿನ ದಿನಗಳಲ್ಲಿ ಏಕದಿನ ತಂಡವನ್ನು ಯಾರು ಮುನ್ನಡೆಸಲಿದ್ದಾರೆ ಎಂಬ ಗೊಂದಲ ಉಂಟಾಗಿದೆ.
ಏಕದಿನ ತಂಡದ ನಾಯಕರಾಗ್ತಾರಾ ಅಯ್ಯರ್
ಸದ್ಯ ಏಕದಿನ ನಾಯಕತ್ವ ಎಂದು ಬಂದ ತಕ್ಷಣ ಎಲ್ಲರ ಚಿತ್ತ ಶ್ರೇಯಸ್ ಅಯ್ಯರ್ರತ್ತ ತಿರುಗುತ್ತದೆ. ಕಾರಣ ಅವರ ಸ್ಥಿರ ಪ್ರದರ್ಶನ ಅವರು ಇತ್ತೀಚೆಗೆ ಮುಕ್ತಾಯಗೊಂಡ 2025 ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭರ್ಜರಿ ಪ್ರದರ್ಶನ ತೋರಿದ್ದರು. ಮಾತ್ರವಲ್ಲ ಇತ್ತೀಚೆಗೆ ಮುಕ್ತಾಯಗೊಂಡ 2025 ರ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಪಂಜಾಬ್ ಕಿಂಗ್ಸ್ ಪರ ತಮ್ಮ ಪ್ರದರ್ಶನದ ಜೊತೆಗೆ ನಾಯಕರಾಗಿಯೂ ಯಶಸ್ವಿಯಾಗಿದ್ದಾರೆ.
ಐಪಿಎಲ್ನಲ್ಲಿ ಪಂಜಾಬ್ ಫೈನಲ್ಗೆ
ಫೆಬ್ರವರಿ 19 ರಿಂದ ಮಾರ್ಚ್ 19 ರವರೆಗೆ ಪಾಕಿಸ್ತಾನ ಆಯೋಜಿಸಿದ್ದ ಐಸಿಸಿ ಈವೆಂಟ್ನಲ್ಲಿ ಭಾರತದ ಪರ ಪ್ರಮುಖ ರನ್ ಗಳಿಸಿದವರಾಗಿ ಸ್ಥಾನ ಪಡೆದ ಮುಂಬೈನ ಬಲಗೈ ಬ್ಯಾಟ್ಸ್ಮನ್ ಅಯ್ಯರ್, ಐಪಿಎಲ್ನಲ್ಲೂ ತಮ್ಮ ಫಾರ್ಮ್ ಅನ್ನು ಮುಂದುವರೆಸಿದ್ದಾರೆ. ಅವರು ಪಂಜಾಬ್ ಕಿಂಗ್ಸ್ ಪರ 17 ಪಂದ್ಯಗಳಲ್ಲಿ ಒಟ್ಟು 604 ರನ್ ಗಳಿಸಿ ಗರಿಷ್ಠ ರನ್ ಗಳಿಸಿದವರ ಸಾಲಿಗೆ ಸೇರಿದ್ದಾರೆ.
ಬ್ಯಾಟಿಂಗ್ ಹೊರತಾಗಿ, ಅಯ್ಯರ್ ತಮ್ಮ ಅದ್ಭುತ ನಾಯಕತ್ವದಿಂದಲೂ ಸುದ್ದಿಯಾಗಿದ್ದಾರೆ. 2014 ರ ನಂತರ ಪಂಜಾಬ್ ಕಿಂಗ್ಸ್ ತಂಡವನ್ನು ಮೊದಲ ಬಾರಿಗೆ ಐಪಿಎಲ್ ಫೈನಲ್ಗೆ ತೆಗೆದುಕೊಂಡು ಹೋಗಿದ್ದಾರೆ. ದುರದೃಷ್ಟವಶಾತ್, ಅಯ್ಯರ್ ನಾಯಕನಾಗಿ ಸತತ ಎರಡು ಐಪಿಎಲ್ ಪ್ರಶಸ್ತಿ ಗೆಲ್ಲಲು ವಿಫಲರಾದರು. ಆದರೆ ಅವರು ತಮ್ಮ ನಾಯಕತ್ವ ಗುಣವನ್ನು ಸಾಭೀತುಪಡಿಸಿದ್ದಾರೆ. ಜೂನ್ 7ರಂದು ಇಂಡಿಯನ್ ಎಕ್ಸ್ಪ್ರೆಸ್ನಲ್ಲಿ ಬಂದ ವರದಿಯ ಪ್ರಕಾರ, ಅವರು ಈಗ ಅಧಿಕೃತವಾಗಿ ಭಾರತದ ವೈಟ್-ಬಾಲ್ ನಾಯಕತ್ವದ ರೇಸ್ಗೆ ಸೇರಿದ್ದಾರೆ.
ಉನ್ನತ ಮೂಲದಿಂದ ಮಾಹಿತಿ
“ಸದ್ಯ ಅವರು ಕೇವಲ ಏಕದಿನ ಪಂದ್ಯಗಳನ್ನು ಆಡುತ್ತಿದ್ದಾರೆ, ಆದರೆ ಈ ಐಪಿಎಲ್ ನಂತರ ಅವರನ್ನು ನಾವು ಟಿ-20 ತಂಡದಲ್ಲೂ ಕಾಣುವ ಸಾಧ್ಯತೆ ಇದೆ. ಟೆಸ್ಟ್ ಪಂದ್ಯಗಳಿಂದ ದೂರವಿಡಲು ಸಾಧ್ಯವಿಲ್ಲ. ಜೊತೆಗೆ, ಅವರು ಈಗ ಅಧಿಕೃತವಾಗಿ ವೈಟ್-ಬಾಲ್ ನಾಯಕತ್ವದ ರೇಸ್ಗೆ ಸೇರಿದ್ದಾರೆ” ಎಂದು ಭಾರತೀಯ ಕ್ರಿಕೆಟ್ನ ಪ್ರಭಾವಿ ನಿರ್ಧಾರ ತೆಗೆದುಕೊಳ್ಳುವವರಲ್ಲಿ ಒಬ್ಬರು ಇಂಡಿಯನ್ ಎಕ್ಸ್ಪ್ರೆಸ್ಗೆ ತಿಳಿಸಿದ್ದಾರೆ.
ಶ್ರೇಯಸ್ ಅಯ್ಯರ್, ಇದುವರೆಗೆ 14 ಟೆಸ್ಟ್, 70 ಏಕದಿನ ಮತ್ತು 51 ಟಿ-20ಐ ಪಂದ್ಯಗಳನ್ನು ಆಡಿರುವ ಅಯ್ಯರ್, ಕೊನೆಯ ಬಾರಿಗೆ ಭಾರತ ಪರ ಟೆಸ್ಟ್ ಪಂದ್ಯವನ್ನು ಫೆಬ್ರವರಿ 2024 ರಲ್ಲಿ ಆಡಿದ್ದರು ಮತ್ತು ಅವರ ಕೊನೆಯ ಟಿ-20ಐ ಪಂದ್ಯವು ಡಿಸೆಂಬರ್ 2023 ರಲ್ಲಿ ಆಸ್ಟ್ರೇಲಿಯಾ ವಿರುದ್ಧವಾಗಿತ್ತು. ಕಳೆದ ವರ್ಷ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಐಪಿಎಲ್ 2024 ಚಾಂಪಿಯನ್ ಮಾಡಿದ್ದರು. ಮಾತ್ರವಲ್ಲ, ದೇಶೀಯ ಕ್ರಿಕೆಟ್ನಲ್ಲಿ ನಾಯಕನಾಗಿ ದೊಡ್ಡ ಹೆಸರು ಮಾಡಿದ್ದಾರೆ. ಹಾಗಾಗಿ ಅವರು ಏಕದಿನ ತಂಡವನ್ನು ಮುನ್ನಡೆಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ನಿವೃತ್ತಿಯಾದ ನಂತರ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಸರಣಿಗೆ ಭಾರತದ ಟೆಸ್ಟ್ ತಂಡದಲ್ಲಿ ಶ್ರೇಯಸ್ ಅಯ್ಯರ್ ಸ್ಥಾನ ಪಡೆಯುವ ಸಾಧ್ಯತೆ ಇದೆ ಎನ್ನಲಾಗಿತ್ತು. ಆದ್ರೆ, ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯು ಅವರನ್ನು ನಿರ್ಲಕ್ಷಿಸಿತು. 18 ಸದಸ್ಯರ ತಂಡದಲ್ಲಿ ಅಯ್ಯರ್ ಹೆಸರು ಇಲ್ಲದಿರುವುದು ಅವರ ಅಭಿಮಾನಿಗಳಿಗೆ ಆಶ್ಚರ್ಯವನ್ನುಂಟು ಮಾಡಿತ್ತು.
June 07, 2025 7:43 PM IST