Last Updated:
ಹಲವು ದಿನಗಳಿಂದ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ನಡುವೆ ಸಂಘರ್ಷ ನಡೆಯುತ್ತಿದೆ. ಏತನ್ಮಧ್ಯೆ, ಅಕ್ಟೋಬರ್ 17 ರ ಶುಕ್ರವಾರ ರಾತ್ರಿ, ಪಾಕಿಸ್ತಾನಿ ವಾಯುಪಡೆಯು 48 ಗಂಟೆಗಳ ಕದನ ವಿರಾಮವನ್ನ ಉಲ್ಲಂಘಿಸಿ ಅಫ್ಘಾನಿಸ್ತಾನದ ಪಕ್ತಿಕಾ ಪ್ರಾಂತ್ಯದಲ್ಲಿ ವೈಮಾನಿಕ ದಾಳಿ ನಡೆಸಿತು.
ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ (Pakistan vs Afghanistan) ನಡುವೆ ನಡೆಯುತ್ತಿರುವ ಮಿಲಿಟರಿ ಸಂಘರ್ಷದಲ್ಲಿ (Military conflict) ಮೂವರು ಯುವ ಕ್ರಿಕೆಟಿಗರ ಸಾವು ಕೇವಲ ಅಫ್ಘಾನಿಸ್ತಾನವನ್ನಲ್ಲ, ಇಡೀ ಪ್ರಪಂಚವನ್ನೇ ಆಘಾತಗೊಳಿಸಿದೆ. ಪಾಕಿಸ್ತಾನ ಸೇನೆಯ ವೈಮಾನಿಕ ದಾಳಿಯಲ್ಲಿ ಅಫ್ಘಾನ್ ಕ್ಲಬ್ನ ಮೂವರು ಕ್ರಿಕೆಟಿಗರು ಸಾವನ್ನಪ್ಪಿದ್ದು, ಎರಡೂ ದೇಶಗಳ ನಡುವಿನ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಿದೆ. ಈ ಘಟನೆಯ ನಂತರ, ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ ಪಾಕಿಸ್ತಾನ ವಿರುದ್ಧದ ಟಿ20 ಸರಣಿಯಲ್ಲಿ ಆಡಲು ನಿರಾಕರಿಸಿದೆ. ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ ಈಗ ಅಫ್ಘಾನಿಸ್ತಾನವನ್ನು ಬೆಂಬಲಿಸಿ, ಪಾಕಿಸ್ತಾನದ ನಡೆಯನ್ನ ಬಲವಾಗಿ ಖಂಡಿಸಿ, ಪಾಕಿಸ್ತಾನ ಸೇನೆಯ ಕೃತ್ಯವನ್ನ ಹೇಡಿತನ ಎಂದು ಕರೆದಿದೆ. ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ ಅಧ್ಯಕ್ಷ ಜಯ್ ಶಾ ಕೂಡ ಈ ಕ್ರಿಕೆಟಿಗರ ಸಾವಿನ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ ಮತ್ತು ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾರೆ.
ಕದನ ವಿರಾಮ ಉಲ್ಲಂಘಿಸಿ ದಾಳಿ
ಹಲವು ದಿನಗಳಿಂದ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ನಡುವೆ ಸಂಘರ್ಷ ನಡೆಯುತ್ತಿದೆ. ಏತನ್ಮಧ್ಯೆ, ಅಕ್ಟೋಬರ್ 17 ರ ಶುಕ್ರವಾರ ರಾತ್ರಿ, ಪಾಕಿಸ್ತಾನಿ ವಾಯುಪಡೆಯು 48 ಗಂಟೆಗಳ ಕದನ ವಿರಾಮವನ್ನ ಉಲ್ಲಂಘಿಸಿ ಅಫ್ಘಾನಿಸ್ತಾನದ ಪಕ್ತಿಕಾ ಪ್ರಾಂತ್ಯದಲ್ಲಿ ವೈಮಾನಿಕ ದಾಳಿ ನಡೆಸಿತು. ಎಲ್ಲಾ ಮಾನವೀಯ ಮೌಲ್ಯಗಳನ್ನ ಗಾಳಿಗೆ ತೂರಿ, ತಮ್ಮ ಮಿತಿಗಳನ್ನು ಮೀರಿ, ಪಾಕಿಸ್ತಾನಿ ವಾಯುಪಡೆಯು ಕೆಲವು ಕ್ಲಬ್ ಕ್ರಿಕೆಟಿಗರು ಸೇರಿದಂತೆ ವಸತಿ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿತ್ತು. ಈ ಕ್ರೂರ ದಾಳಿಯಲ್ಲಿ ಸ್ಥಳೀಯ ಕ್ಲಬ್ನ ಮೂವರು ಯುವ ಆಟಗಾರರಾದ ಕರೀಬ್ ಅಘಾ, ಹರೂನ್ ಮತ್ತು ಸಿಬ್ಘತ್ವುಲ್ಲಾ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಮತ್ತು ಇತರ ಹಲವರು ಗಾಯಗೊಂಡಿದ್ದಾರೆ ಎಂದು ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ ಹೇಳಿಕೆಯಲ್ಲಿ ತಿಳಿಸಿದೆ.
ಪಾಕಿಸ್ತಾನ ಹೆಸರೇಳದೆ ಜಯ್ ಶಾ ಆಕ್ರೋಶ
ಈ ಘಟನೆ ಇಡೀ ಕ್ರಿಕೆಟ್ ಜಗತ್ತನ್ನೇ ಬೆಚ್ಚಿಬೀಳಿಸಿದೆ ಮತ್ತು ಪಾಕಿಸ್ತಾನವು ಕ್ರಿಕೆಟಿಗರನ್ನು ಕೊಂದಿದ್ದಕ್ಕಾಗಿ ವ್ಯಾಪಕವಾಗಿ ಟೀಕೆಗೆ ಗುರಿಯಾಗುತ್ತಿದೆ. ಕೆಲವು ಘಂಟೆಗಳ ನಂತರ ಮೊದಲ ಬಾರಿಗೆ, ಐಸಿಸಿ ಈ ಘಟನೆಯ ಬಗ್ಗೆ ಹೇಳಿಕೆ ನೀಡಿದೆ. ಸಾಮಾಜಿಕ ಜಾಲತಾಣದ ಪೋಸ್ಟ್ನಲ್ಲಿ, ಐಸಿಸಿ ಅಧ್ಯಕ್ಷ ಜಯ್ ಶಾ, ಪಾಕಿಸ್ತಾನವನ್ನು ಹೆಸರಿಸದೆ, ಅದರ ಕ್ರಮಗಳನ್ನು ಮೂರ್ಖತನ ಎಂದು ಬಣ್ಣಿಸಿದ್ದಾರೆ.
” ಅರ್ಥಹೀನ ಹಿಂಸಾಚಾರದಿಂದಾಗಿ ತಮ್ಮ ಕನಸುಗಳನ್ನು ಕಳೆದುಕೊಂಡ ಮೂವರು ಅಫ್ಘಾನ್ ಕ್ರಿಕೆಟಿಗರಾದ ಕಬೀರ್ ಅಘಾ, ಸಿಬ್ಘತುಲ್ಲಾ ಮತ್ತು ಹರೂನ್ ಅವರ ಸಾವಿನಿಂದ ನಾನು ತುಂಬಾ ದುಃಖಿತನಾಗಿದ್ದೇನೆ. ಅಂತಹ ಪ್ರತಿಭಾನ್ವಿತ ಆಟಗಾರರ ಹತ್ಯೆ ಅಫ್ಘಾನಿಸ್ತಾನ ಕ್ರಿಕೆಟ್ಗೆ ಮಾತ್ರವಲ್ಲದೆ ಇಡೀ ಕ್ರಿಕೆಟ್ ಜಗತ್ತಿಗೆ ದುರಂತವಾಗಿದೆ. ಈ ದುರಂತದ ಸಮಯದಲ್ಲಿ ನಾವೆಲ್ಲರೂ ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯೊಂದಿಗೆ ನಿಲ್ಲುತ್ತೇವೆ” ಎಂದು ಶಾ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದರು.
ಬಿಸಿಸಿಐ ಖಂಡನೆ
ಪಾಕಿಸ್ತಾನದ ದಾಳಿಯನ್ನು ಹೇಡಿತನದ ಕೃತ್ಯ ಎಂದು ಕರೆದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ದೀರ್ಘ ಹೇಳಿಕೆ ನೀಡಿದೆ. ಘಟನೆಯನ್ನು ಖಂಡಿಸಿ, ಮಂಡಳಿಯ ಕಾರ್ಯದರ್ಶಿ ದೇವಜಿತ್ ಸೈಕಿಯಾ ಹೇಳಿಕೆಯಲ್ಲಿ, “ಪಕ್ತಿಕಾ ಪ್ರಾಂತ್ಯದಲ್ಲಿ ನಡೆದ ಹೇಡಿತನದ ವೈಮಾನಿಕ ದಾಳಿಯಲ್ಲಿ ಮೂವರು ಯುವ ಅಫ್ಘಾನ್ ಕ್ರಿಕೆಟಿಗರಾದ ಕಬೀರ್ ಅಘಾ, ಸಿಬ್ಘತುಲ್ಲಾ ಮತ್ತು ಹರೂನ್ ಅವರನ್ನು ಕಳೆದುಕೊಂಡ ಬಗ್ಗೆ ಬಿಸಿಸಿಐ ತನ್ನ ತೀವ್ರ ದುಃಖ ಮತ್ತು ಸಂತಾಪವನ್ನು ವ್ಯಕ್ತಪಡಿಸುತ್ತದೆ” ಎಂದು ತಿಳಿಸಿದೆ.
ಬ್ಯಾನ್ ಆಗುತ್ತಾ ಪಾಕಿಸ್ತಾನ?
ಕ್ರಿಕೆಟಿಗರ ಸಾವಿಗೆ ಕಾರಣವಾಗಿರುವುದರಿಂದ ಪಾಕಿಸ್ತಾನದ ವಿರುದ್ಧ ವಿಶ್ವದಾದ್ಯಂತೆ ಆಕ್ರೋಶ ವ್ಯಕ್ತವಾಗುತ್ತಿದೆ. ಕದನ ವಿರಾಮದ ನಡುವೆಯೂ ಕ್ರಿಕೆಟ್ ಆಡಿ ಹೊರಡುತ್ತಿದ್ದವರ ಮೇಲೆ ವೈಮಾನಿಕ ದಾಳಿ ನಡೆಸಿ ಸಾವಿಗೆ ಕಾರಣವಾಗಿರುವುದರಿಂದ ಪಾಕಿಸ್ತಾನವನ್ನ ಸೌಹಾರ್ದಯುತ ಸಾರುವ ಕ್ರಿಕೆಟ್ ಆಟದಿಂದ ಅವರನ್ನ ದೂರವಿಡಿ ಎಂದು ಕ್ರಿಕೆಟ್ ಅಭಿಮಾನಿಗಳು ಐಸಿಸಿಯನ್ನ ಒತ್ತಾಯಿಸಿದ್ದಾರೆ. ಈ ಮಧ್ಯೆ ನಾವು ಅಫ್ಘಾನಿಸ್ತಾನ ಕ್ರಿಕೆಟಿಗರ ಸಾವು ಕೇವಲ ಆ ದೇಶಕ್ಕೆ ಮಾತ್ರವಲ್ಲ, ಇಡೀ ಕ್ರಿಕೆಟ್ ಜಗತ್ತಿಗೆ ಉಂಟಾದ ನಷ್ಟ ಎಂದು ಐಸಿಸಿ ಅಧ್ಯಕ್ಷ ಜಯ್ ಶಾ ಟ್ವೀಟ್ ಮೂಲಕ ತಿಳಿಸಿದ್ದಾರೆ. ಹಾಗಾಗಿ ಪಾಕಿಸ್ತಾನದ ಮೇಲೆ ನಿಷೇಧದ ಶಿಕ್ಷೆ ವಿಧಿಸಬಹುದಾ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.
October 18, 2025 9:16 PM IST
PAK vs AFG: ಅಫ್ಘಾನಿಸ್ತಾನ ಕ್ರಿಕೆಟಿಗರನ್ನ ಕೊಂದ ಪಾಕಿಸ್ತಾನ ಕ್ರಿಕೆಟ್ನಿಂದ ಬ್ಯಾನ್ ಆಗುತ್ತಾ? ಐಸಿಸಿ ಅಧ್ಯಕ್ಷ ಜಯ್ ಶಾ ಟ್ವೀಟ್ ಮೂಲಕ ಹೇಳಿದ್ದೇನು?