Last Updated:
ಪುತ್ತೂರು ಪೊಲೀಸ್ ಠಾಣೆಯ SI ಜಂಬುರಾಜ್ ಮಹಾಜನ್ ಮತ್ತು ಸಿಬ್ಬಂದಿ ಗಾಯಗೊಂಡ ನಾಗೇಶ್ ಗೆ ಪ್ರಾಥಮಿಕ ಚಿಕಿತ್ಸೆ ನೀಡಿ, ಆಸ್ಪತ್ರೆಗೆ ದಾಖಲಿಸಿದ್ದಾರೆ.
ದಕ್ಷಿಣ ಕನ್ನಡ: ಪೊಲೀಸ್ (Police) ಅಂದರೆ ಅವರ ಭುಜದ ಮೇಲೆ ಎರಡು, ಮೂರು ಸ್ಟಾರ್ ಇರುತ್ತೆ. ಯಾವಾಗಲೂ ಖಡಕ್ ಆಗಿಯೇ ಇರುತ್ತಾರೆ. ಖಡಕ್ ಆಗಿಯೇ ಮಾತನಾಡುತ್ತಾರೆ. ಅಲ್ಲದೇ ಅವರನ್ನು ಕಂಡ್ರೆ ಏನೋ ಒಂಥರಾ ಭಯ. ಯಾವುತ್ತೂ ಅವರು ನಗುವುದಿಲ್ಲ ಎಂದು ಎಲ್ಲರೂ ಅಂದುಕೊಳ್ತಾರೆ. ಇಂತಹುದೇ ಓರ್ವ ಖಡಕ್ ಮುಖದ ಎಸ್.ಐ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಪುತ್ತೂರು ಗ್ರಾಮಾಂತರ ಪೊಲೀಸ್ (Police) ಠಾಣೆಯಲ್ಲೂ ಇದ್ದಾರೆ. ಇವರ ಮಾನವೀಯತೆ ಮುಖದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದೆ. ಕಾಲಿಗೆ ಗಂಭೀರವಾಗಿ ಗಾಯಗೊಂಡು ರಸ್ತೆ ಬದಿಯಲ್ಲಿ ಅಸಹಾಯಕ ಸ್ಥಿತಿಯಲ್ಲಿದ್ದ ವ್ಯಕ್ತಿಯೋರ್ವನನ್ನು ಪ್ರಾಥಮಿಕವಾಗಿ ಉಪಚರಿಸಿ ಬಳಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುವ ಮೂಲಕ ಸುದ್ದಿಯಲ್ಲಿದ್ದಾರೆ. ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ಉಪನಿರೀಕ್ಷಕ ಜಂಬೂರಾಜ್ ಮಹಾಜನ್ ಮತ್ತು ಸಿಬ್ಬಂದಿ ಮಾನವೀಯತೆ ಮೆರೆದ ಪೊಲೀಸರಾಗಿದ್ದಾರೆ.
ಇತ್ತೀಚೆಗೆ ಪುತ್ತೂರು ತಾಲೂಕಿನ ಮುಡೂರು ಗ್ರಾಮದ ಗಾಳಿಮುಖದಲ್ಲಿ ವ್ಯಕ್ತಿಯೊಬ್ಬರು ಕಾಲಿಗೆ ಗಂಭೀರವಾಗಿ ಗಾಯಗೊಂಡ ಸ್ಥಿತಿಯಲ್ಲಿ ಕಂಡು ಬಂದಿದ್ದು ಕಾಲಿನಿಂದ ರಕ್ತ ಸೋರುತ್ತಿತ್ತು. ಈ ವೇಳೆ ಅಲ್ಲಿಂದ ತೆರಳುತ್ತಿದ್ದ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ಎಸ್ಐ ಜಂಬೂರಾಜ್ ಮಹಾಜನ್ ಅವರು ವ್ಯಕ್ತಿಯ ಬಳಿಗೆ ಹೋಗಿ ವಿಚಾರಿಸುತ್ತಾರೆ. ಕೂಡಲೇ ತಮ್ಮ ಪೊಲೀಸ್ ಜೀಪಿನಲ್ಲಿದ್ದ ‘ಪ್ರಥಮ ಚಿಕಿತ್ಸೆ ಪೆಟ್ಟಿಗೆ’ಯಲ್ಲಿದ್ದ ಔಷಧಿಗಳನ್ನು ಬಳಸಿಕೊಂಡು ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ.
ನಂತರ ಅವರನ್ನು ಸಿಬ್ಬಂದಿ ಸಹಾಯದಿಂದ ಆಟೋ ರಿಕ್ಷಾವೊಂದರಲ್ಲಿ ಈಶ್ವರಮಂಗಲದ ಕ್ಲಿನಿಕ್ವೊಂದಕ್ಕೆ ಕರೆತಂದು ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಗಾಯಾಳು ಕೇರಳದ ಮುಳಿಯಡ್ಕದ ನಾಗೇಶ್ ಎಂದು ತಿಳಿದು ಬಂದಿದೆ.ನಾಗೇಶ್ ಅವರ ಕಾಲಿನ ಮೂಳೆ ಮುರಿತಗೊಂಡಿದ್ದು ಅವರಿಗೆ ಶಸ್ತ್ರಚಿಕಿತ್ಸೆಯ ಅಗತ್ಯವಿದೆ, ಹೀಗಾಗಿ ಅವರು ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದಾರೆ.
Dakshina Kannada,Karnataka
September 11, 2025 8:38 AM IST