Last Updated:
ಕೃಷಿಕರು ರೈತಸಂಘಗಳ ನೇತೃತ್ವದಲ್ಲಿ ನಡೆಸುತ್ತಿದ್ದ ವಿದ್ಯುತ್ ಮಾರ್ಗ ವಿರೋಧಿ ಹೋರಾಟಕ್ಕೆ ಹಿಂದೂ ಸಂಘಟನೆಗಳು ಕೈ ಜೋಡಿಸಿರೋದು ರೈತ ಸಂಘಟನೆಗಳಿಗೆ ಬಲ ಬಂದಂತಾಗಿದೆ.
ಪುತ್ತೂರು: ಉಡುಪಿಯಿಂದ (Udupi) ಕೇರಳಕ್ಕೆ (Kerala) ವಿದ್ಯುತ್ ತಂತಿ ಸಾಗಾಟ ಯೋಜನೆಗೆ ದಕ್ಷಿಣ ಕನ್ನಡ (Dakshina Kannada) ಮತ್ತು ಉಡುಪಿ ಜಿಲ್ಲೆಯ ಕೃಷಿಕರ (Farmers) ವಿರೋಧ ಕೇಳಿ ಬರುತ್ತಿದೆ. ಈ ನಡುವೆ ಈ ಯೋಜನೆಯನ್ನು ಕೈ ಬಿಡಬೇಕೆಂದು ಇದೀಗ ಹಿಂದೂ ಸಂಘಟನೆಗೂ (Hindu Organizations Activists) ಹೋರಾಟಕ್ಕೆ ಸಾಥ್ ಕೊಟ್ಟಿವೆ. ಯೋಜನೆಯಿಂದ ಹಲವು ಹಿಂದೂ ಧಾರ್ಮಿಕ ಕೇಂದ್ರಗಳು ನಾಶವಾಗುವ ಆತಂಕ ಎದುರಾಗಿದೆ.
ಉಡುಪಿ ಜಿಲ್ಲೆ ನಂದಿಕೂರಿನಿಂದ ಕೇರಳಕ್ಕೆ ಹಾದು ಹೋಗಲಿರುವ ವಿದ್ಯುತ್ ಮಾರ್ಗಕ್ಕೆ ಉಡುಪಿ ಕೃಷಿಕರ ವಿರೋಧದ ಜೊತೆಗೆ ದಕ್ಷಿಣಕನ್ನಡ ಜಿಲ್ಲೆಯ ಕೃಷಿಕರೂ ವಿರೋಧ ಮಾಡಿದ್ದರು. 400 ಕೆ.ವಿ ವಿದ್ಯುತ್ ಮಾರ್ಗ ಹಾದು ಹೋಗಲು ಸುಮಾರು 115 ಕಿಲೋಮೀಟರ್ ಉದ್ದ ಮತ್ತು 40 ಕಿಲೋಮೀಟರ್ ಅಗಲದ ಜಮೀನು ಅಗತ್ಯ ಇದೆ. ಅಷ್ಟೂ ಜಾಗದ ಕೃಷಿಭೂಮಿ, ದೇವಸ್ಥಾನ, ಮಸೀದಿ, ಶಾಲೆಗಳನ್ನು ಒತ್ತುವರಿ ಮಾಡುವ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದೆ. ದಟ್ಟ ಅರಣ್ಯದಲ್ಲೂ ಈ ಮಾರ್ಗ ಹಾದುಹೋಗಲಿದೆ. ಇದೀಗ ಹೋರಾಟಕ್ಕೆ ಹಿಂದೂ ಸಂಘಟನೆಗಳು ಬೆಂಬಲಿಸಿವೆ. ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಕಡೆಗಳಲ್ಲಿ ವಿದ್ಯುತ್ ಮಾರ್ಗದ ಯೋಜನೆಯನ್ನು ತಾತ್ಕಾಲಿಕವಾಗಿ ನಿಲ್ಲಿಸುವಲ್ಲಿ ಯಶಸ್ವಿ ಆಗಿದ್ದಾರೆ.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಬಂಟ್ವಾಳ ತಹಶೀಲ್ದಾರ್ ಮಂಜುನಾಥ್, ಅನೇಕ ಧಾರ್ಮಿಕ ನಂಬಿಕೆಗಳಿಗೆ ಸಂಬಂಧ ಪಟ್ಟಂತೆ ಮನವಿ ನೀಡಿದ್ದಾರೆ. ಈ ಯೋಜನೆಯ ಅಡಿ ವಿದ್ಯುತ್ ಲೈನ್ ಗಳ ಹಲವು ದೇವಸ್ಥಾನ, ಮಸೀದಿ, ಮನೆಗಳು ಸೇರಿದಂತೆ ಚರ್ಚ್ ಗಳ ಮೇಲೆ ಹಾದು ಹೋಗುತ್ತದೆ ಎಂದು ತಿಳಿಸಿದ್ದಾರೆ.
ಧಾರ್ಮಿಕ ಕ್ಷೇತ್ರಗಳ ತೆರವು ಬಗ್ಗೆ ಆತಂಕ
ಈ ವಿದ್ಯುತ್ ಯೋಜನೆಯಿಂದ ಇಪ್ಪತ್ತಕ್ಕೂ ಹೆಚ್ಚು ದೈವಸ್ಥಾನಗಳು ನಾಶವಾಗಲಿದ್ದು, ಇದು ಧಾರ್ಮಿಕ ಭಾವನೆಗ ಧಕ್ಕೆ ತರಲಿದೆ ಎಂದು ಹಿಂದೂ ಸಂಘಟನೆಗಳು ಆರೋಪಿಸಿವೆ. ಯಾವುದೇ ಕಾರಣಕ್ಕೂ ಈ ಯೋಜನೆಯನ್ನು ಕೃಷಿಕರ ಭೂಮಿಯಲ್ಲಿ ಮಾಡಬಾರದು. ವಿದ್ಯುತ್ ಮಾರ್ಗವನ್ನು ಕಡಲ ತೀರದಲ್ಲಿ ಅಂಡರ್ ಗ್ರೌಂಡ್ ಮೂಲಕ ಕೇರಳಕ್ಕೆ ಸಾಗಿಸಲಿ ಅನ್ನೋ ಆಗ್ರಹ ಮಾಡಿದ್ದಾರೆ.
ಈ ಬಗ್ಗೆ ನ್ಯೂಸ್ 18 ಕನ್ನಡದೊಂದಿಗೆ ಮಾತನಾಡಿದ ರೈತಸಂಘದ ಮುಖಂಡ ಶ್ರೀಧರ್ ಶೆಟ್ಟಿ ಬೈಲುಗುತ್ತು, ತಾಲೂಕು ಅಧಿಕಾರಿಗಳು ಈಗ ಒಪ್ಪಿಕೊಂಡಿದ್ದಾರೆ. ಯೋಜನೆಗೆ ತಡೆ ನೀಡಿ, ಅಗತ್ಯ ಪರಿಹಾರ ಕ್ರಮಗಳನ್ನ ಕೈಗೊಂಡು ಯೋಜನೆ ಮುಂದುವರಿಸಲು ಸೂಚನೆ ನೀಡುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
Puttur,Dakshina Kannada,Karnataka
October 17, 2025 12:17 PM IST