Last Updated:
ಪುತ್ತೂರು ತಾಲೂಕಿನ ಆದರ್ಶ ನಗರದಲ್ಲಿ ಆಯುರ್ವೇದ ವೈದ್ಯರ ಕುಟುಂಬ 3 ಲಕ್ಷ ರೂ. ವೆಚ್ಚದಲ್ಲಿ ಕೆಂಪು ಕಲ್ಲಿನಿಂದ ಪರಿಸರಸ್ನೇಹಿ, ಪಾರಂಪರಿಕ ಹೈಟೆಕ್ ಬಸ್ ನಿಲ್ದಾಣ ನಿರ್ಮಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಆದರ್ಶ ನಗರದಲ್ಲೊಂದು ಆದರ್ಶ ಬಸ್ ನಿಲ್ದಾಣವೊಂದು ತಲೆ ಎತ್ತಿ ನಿಂತಿದೆ. ಪುತ್ತೂರು- ಉಪ್ಪಿನಂಗಡಿ ಮಾರ್ಗವಾಗಿ (Route) ತೆರಳುವ ಯಾವ ಪ್ರಯಾಣಿಕನೂ ಈ ಬಸ್ ನಿಲ್ದಾಣವನ್ನೊಮ್ಮೆ ನೋಡದೆ ಮುಂದೆ ಸಾಗಲು ಸಾಧ್ಯವೇ (Possible) ಇಲ್ಲ. ಹೌದು, ಅಷ್ಟೊಂದು ಆಕರ್ಷಕವಾಗಿ ಈ ಬಸ್ ನಿಲ್ದಾಣವನ್ನು ನಿರ್ಮಿಸಲಾಗಿದೆ. ಆದರ್ಶ ನಗರದ ಆಯುರ್ವೇದ ವೈದ್ಯರ (Doctor) ಕುಟುಂಬವೊಂದು ಈ ಆಕರ್ಷಕ ಬಸ್ ನಿಲ್ದಾಣವನ್ನು ಸಾರ್ವಜನಿಕರ (Public) ಅನುಕೂಲಕ್ಕಾಗಿ ನಿರ್ಮಿಸಿದೆ.
ಸಾಮಾನ್ಯವಾಗಿ ಬಸ್ ನಿಲ್ದಾಣವೆಂದರೆ ಒಂದು ಮೇಲ್ಛಾವಣಿ, ಕುಳಿತುಕೊಳ್ಳಲು ಕಲ್ಲು ಹಾಸಿದ ಆಸನ ಬಿಟ್ಟರೆ ಬೇರೇನೂ ಇರುವುದಿಲ್ಲ. ಆದರೆ ಕೆಲವೊಂದು ಬಸ್ ನಿಲ್ದಾಣಗಳು ಹೈಟೆಕ್ ಸ್ವರೂಪದಲ್ಲಿಯೂ ಇರುತ್ತೆ. ಇಂತಹ ಹೈಟೆಕ್ ಬಸ್ ನಿಲ್ದಾಣಗಳ ಸಾಲಿಗೆ ಆದರ್ಶ ನಗರದ ಈ ಬಸ್ ನಿಲ್ದಾಣವೂ ಸೇರುತ್ತೆ.
ಸಂಪೂರ್ಣ ಕೆಂಪು ಕಲ್ಲಿನಿಂದ ನಿರ್ಮಿಸಲಾಗಿರುವ ಈ ಬಸ್ ನಿಲ್ದಾಣವನ್ನು ನೈಸರ್ಗಿಕವಾಗಿ ಕಟ್ಟಲಾಗಿದೆ. ಕಾಂಕ್ರೀಟ್ ಕಟ್ಟಡದ ಬದಲು ನೈಸರ್ಗಿಕವಾಗಿ ಸಿಗುವ ಕೆಂಪುಕಲ್ಲಿನಿಂದಲೇ ಈ ಬಸ್ ನಿಲ್ದಾಣವನ್ನು ನಿರ್ಮಿಸಲಾಗಿದ್ದು, ಇದಕ್ಕೆ ಹಚ್ಚಲಾಗಿರುವ ಬಣ್ಣವೂ ರಾಸಾಯನಿಕ ಮುಕ್ತವಾಗಿದ್ದು, ಪರಿಸರಸ್ನೇಹಿ ಬಸ್ ನಿಲ್ದಾಣವಾಗಿಯೂ ಇದು ರೂಪುಗೊಂಡಿದೆ.
ಬಸ್ ನಿಲ್ದಾಣದ ಸ್ವರೂಪ ಶಾಸ್ತ್ರೀಯವಾಗಿರಬೇಕು ಎನ್ನುವ ಕಾರಣಕ್ಕೆ ಕಟ್ಟಡದ ವಿನ್ಯಾಸವನ್ನು ಪಾರಂಪರಿಕ ಸ್ವರೂಪಕ್ಕೆ ಹೊಂದಿಕೊಳ್ಳುವ ರೀತಿಯಲ್ಲಿ ನಿರ್ಮಾಣ ಮಾಡಲಾಗಿದೆ. ಬಸ್ ನಿಲ್ದಾಣ ನಿರ್ಮಿಸುವ ಸಂದರ್ಭದಲ್ಲಿ ಬಸ್ ನಿಲ್ದಾಣದ ಹಿಂದಿರುವ ಮರವನ್ನು ಕಡಿಯಲು 34 ನೇ ನೆಕ್ಕಿಲ್ಲಾಡಿ ಗ್ರಾಮಪಂಚಾಯತ್ ಯೋಚಿಸಿತ್ತಾದರೂ, ಮರವನ್ನು ಕಡಿಯದೆ, ಆ ಮರದ ನೆರಳಿನಡಿಯಲ್ಲೇ ನಿಲ್ದಾಣವನ್ನು ನಿರ್ಮಿಸುವ ನಿರ್ಧಾರಕ್ಕೆ ಬಳ್ಳಿ ಆಯುರ್ವೇದ ಸಂಸ್ಥೆಯ ವೈದ್ಯರು ಮಾಡಿದ್ದರು. ಹೀಗಾಗಿ 3 ಲಕ್ಷ ರೂಪಾಯಿ ವ್ಯಯಿಸಿ ಈ ನಿಲ್ದಾಣ ನಿರ್ಮಿಸಿದ್ದಾರೆ.
ಸಕ್ಕತ್ ತಂಪಾಗಿರೋ ಬಸ್ ನಿಲ್ದಾಣವಿದು!
ಇದರಿಂದಾಗಿ ಮರವನ್ನು ಉಳಿಸಿಕೊಂಡೇ ನಿಲ್ದಾಣದ ವಿನ್ಯಾಸ ರೂಪಿಸಿ ಕಟ್ಟಲಾಗಿದೆ. ನಿಲ್ದಾಣದ ಮೇಲ್ಛಾವಣಿಗೆ ಎರಡು ಲೇಯರ್ ಗಳಲ್ಲಿ ಹೆಂಚು ಹಾಕಲಾಗಿದ್ದು, ಇದರಿಂದಾಗಿ ನಿಲ್ದಾಣದ ಒಳಗೆ ತಂಪಿನ ಅನುಭವವೂ ಇದೆ. ಜಿಲ್ಲೆಗೆ ವ್ಯಾಪ್ತಿಗೆ ಸೇರಿದಂತೆ ಇಂತಹ ಆಕರ್ಷಕ, ಪಾರಂಪರಿಕ ಕಟ್ಟಡದ ವಿನ್ಯಾಸವಿರುವ ಬಸ್ ನಿಲ್ದಾಣ ಬೇರೆಲ್ಲೂ ಇಲ್ಲ. ಇದೇ ಕಾರಣಕ್ಕಾಗಿ ಈ ಬಸ್ ನಿಲ್ದಾಣವನ್ನು ನೋಡಲೆಂದೇ ಉತ್ಸಾಹಿಗಳು ಇಲ್ಲಿ ಬರಲು ಆರಂಭಿಸಿದ್ದಾರೆ. ಕೆಲವು ಮಂದಿ ಈ ಬಸ್ ನಿಲ್ದಾಣದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ತಮ್ಮ ಅನುಭವಗಳನ್ನೂ ಹಂಚಿಕೊಂಡಿದ್ದಾರೆ.
Dakshina Kannada,Karnataka
December 07, 2025 2:22 PM IST