Last Updated:
ದಕ್ಷಿಣ ಕನ್ನಡದ ಪುತ್ತೂರಿನ ಶಿಕ್ಷಕರು ರಮೇಶ್ ಉಳಯ ಮತ್ತು ಪ್ರಶಾಂತ್ ಅನಂತಾಡಿ ಬರೆದ ಮೂರು ಕಥೆಗಳು ರಾಜ್ಯದ 1-3 ತರಗತಿ ಮಕ್ಕಳಿಗೆ ವಾಚಕ ಪಠ್ಯವಾಗಿ ಆಯ್ಕೆಯಾಗಿವೆ. 46 ವಾಚಕಗಳಲ್ಲಿ ಇವರ ಕಥೆಗಳು ಮುದ್ರಣಗೊಂಡಿವೆ.
ದಕ್ಷಿಣ ಕನ್ನಡ: ನೀವು ನೋಡುತ್ತಿರುವ ದಕ್ಷಿಣ ಕನ್ನಡದ (Dakshina Kannada) ಪುತ್ತೂರಿನ (Puttur) ಇಬ್ಬರು ಶಿಕ್ಷಕರು (Teacher) ಎಲ್ಲಾ ಶಿಕ್ಷಕರಂತಲ್ಲ. ಕೊಂಚ ವಿಭಿನ್ನ ಅಂದ್ರು ತಪ್ಪಾಗಲಾರದು ಪಾಠ ಮಾಡುವುದರ ಜೊತೆಗೆ ತಾವು ಬರೆದ ಕಥೆಗಳು ರಾಜ್ಯದ ಮಕ್ಕಳಿಗೆ ವಾಚಕವಾಗಿ ಆಯ್ಕೆಯಾಗಿವೆ. ಹೌದು ಸಂಜಯನಗರ ಸರ್ಕಾರಿ ಪ್ರಾಥಮಿಕ ಶಾಲೆಯ (School) ಪ್ರಭಾರ ಮುಖ್ಯ ಶಿಕ್ಷಕ ರಮೇಶ್ ಉಳಯ ಮತ್ತು ಕೊಂಬೆಟ್ಟು ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಆಂಗ್ಲ ಭಾಷಾ ಶಿಕ್ಷಕ ಪ್ರಶಾಂತ್ ಅನಂತಾಡಿ ರಚಿಸಿದ ತಲಾ ಮೂರು ಕಥೆಗಳು ಕರ್ನಾಟಕ ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳ ಒಂದರಿಂದ ಮೂರನೇ ತರಗತಿವರೆಗಿನ ಮಕ್ಕಳಿಗೆ ವಾಚಕ ಪಠ್ಯವಾಗಿ ಆಯ್ಕೆಯಾಗಿವೆ.
ರಮೇಶ್ ಉಳಯ ಅವರ ನಲ್ಲಿಯಲ್ಲಿ ಹಾಲು, ಅಬ್ರಕಡಬ್ರಕ, ಗಡಬಡತಿರುಗುವ ಫ್ಯಾನು ಹಾಗೂ ಪ್ರಶಾಂತ್ ಅನಂತಾಡಿ ಅವರ ಪುಟ್ಟನ ಹೊಸಮನೆ, ಜಾನು ಇರುವೆ-ಮುನ್ನಿ ಕಪ್ಪೆ, ಚಿನ್ನು ಹುಳುವಿನ ಮನೆ ಎಂಬ ಮೂರು ಕಥೆಗಳು ಈ ವಾಚಕ ಮಾಲೆಯಲ್ಲಿ ಪ್ರಕಟಗೊಂಡ ಬರಹಗಳಾಗಿವೆ.
ಕರ್ನಾಟಕ ಸರ್ಕಾರದ ಶಾಲಾ ಶಿಕ್ಷಣ ಇಲಾಖೆಯು ಈ ವರ್ಷದಿಂದ ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳ ಒಂದರಿಂದ ಮೂರನೇ ತರಗತಿ ವರೆಗಿನ ಮಕ್ಕಳ ಕಲಿಕೆಗಾಗಿ ಸುಮಾರು 46 ವಾಚಕಗಳನ್ನು ವಾಚಕ ಪಠ್ಯವಾಗಿ ಮುದ್ರಿಸಿದೆ. ಇವೆಲ್ಲವೂ ವಿಶಿಷ್ಟ ರೀತಿಯ ಕಥೆಗಳಾಗಿದ್ದು, ವಿವಿಧ ರೀತಿಯ ವಿವರಣೆಗಳು ಮತ್ತು ಕೆಲವೊಂದು ಪ್ರಕಾರಗಳ ಮಾಹಿತಿಗಳನ್ನು ಒಳಗೊಂಡಿವೆ. ರಾಜ್ಯ ಶಿಕ್ಷಣ ಸಂಶೋಧನಾ ಮತ್ತು ತರಬೇತಿ ಸಂಸ್ಥೆ ಬೆಂಗಳೂರು ಇದರ ಉಸ್ತುವಾರಿಯಲ್ಲಿ ಇಲ್ಲಿನ ಕಾರ್ಯಕ್ರಮ ಅಧಿಕಾರಿ ಗುಣವತಿ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಗಾರದಲ್ಲಿ ಮೂಡಿಬಂದ ಈ ವಾಚಕಗಳು ಪ್ರಸ್ತುತ ಪುಸ್ತಕದಲ್ಲಿ ಚಿತ್ರಸಹಿತ ಮುದ್ರಣಗೊಂಡಿದೆ. ಅದರಲ್ಲಿ ಇವರ ಕಥೆಗಳು ಇವೆ.
Dakshina Kannada,Karnataka
July 31, 2025 6:56 PM IST