RCB Victory Parade Stampede: ಆರ್‌ಸಿಬಿಯ 10 ಅಭಿಮಾನಿಗಳ ಸಾವು! ಅತ್ತ ಸಿಎಂ ಆಸ್ಪತ್ರೆಯಲ್ಲಿ, ಇತ್ತ ಡಿಸಿಎಂ ಆರ್‌ಸಿಬಿ ಸಂಭ್ರಮದಲ್ಲಿ! | IPL 2025 RCB fans stampede public outrage over government decision

RCB Victory Parade Stampede: ಆರ್‌ಸಿಬಿಯ 10 ಅಭಿಮಾನಿಗಳ ಸಾವು! ಅತ್ತ ಸಿಎಂ ಆಸ್ಪತ್ರೆಯಲ್ಲಿ, ಇತ್ತ ಡಿಸಿಎಂ ಆರ್‌ಸಿಬಿ ಸಂಭ್ರಮದಲ್ಲಿ! | IPL 2025 RCB fans stampede public outrage over government decision

Last Updated:

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬರೋಬ್ಬರಿ 18 ವರ್ಷಗಳ ಬಳಿಕ ತಮ್ಮ ಚೊಚ್ಚಲ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಸಹಜವಾಗಿ ಇದು ಸಂಭ್ರಮ ಮುಗಿಲು ಮುಟ್ಟೋದಕ್ಕೆ ಕಾರಣವಾಗಿದೆ. ಈ ಸಂಭ್ರಮದಲ್ಲಿ ಪಾಲ್ಗೊಳ್ಳಬೇಕು ಅನ್ನೋ ಧಾವಂತ ಬಹುತೇಕ ಅಭಿಮಾನಿಗಳಿಗೆ. ಆದ್ರೆ, ಈ ಸಂಭ್ರಮಾಚರಣೆ 18 ಗಂಟೆ ಕೂಡ ಉಳಿಯಲಿಲ್ಲ.

ಸಂಭ್ರಮಾಚರಣೆ ವೇಳೆ ದುರಂತಸಂಭ್ರಮಾಚರಣೆ ವೇಳೆ ದುರಂತ
ಸಂಭ್ರಮಾಚರಣೆ ವೇಳೆ ದುರಂತ

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಬರೋಬ್ಬರಿ 18 ವರ್ಷಗಳ ಬಳಿಕ ತಮ್ಮ ಚೊಚ್ಚಲ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಸಹಜವಾಗಿ ಇದು ಸಂಭ್ರಮ ಮುಗಿಲು ಮುಟ್ಟೋದಕ್ಕೆ ಕಾರಣವಾಗಿದೆ. ಈ ಸಂಭ್ರಮದಲ್ಲಿ ಪಾಲ್ಗೊಳ್ಳಬೇಕು ಅನ್ನೋ ಧಾವಂತ ಬಹುತೇಕ ಅಭಿಮಾನಿಗಳಿಗೆ. ಆದ್ರೆ, ಈ ಸಂಭ್ರಮಾಚರಣೆ 18 ಗಂಟೆ ಕೂಡ ಉಳಿಯಲಿಲ್ಲ. ನಿನ್ನೆ ತಡರಾತ್ರಿ ಪಂದ್ಯ ಮುಗಿಯುಗಿತ್ತೆ. ಇಂದೇ ಬೆಂಗಳೂರಿನಲ್ಲಿ (Bangalore) ಸಂಭ್ರಮಾಚರಣೆಗೆ ನಿರ್ಧರಿಸಲಾಗುತ್ತೆ. ಒಮ್ಮೆ ರೋಡ್ ಶೋ, ಮಗದೊಮ್ಮೆ ವಿಕ್ಟರಿ ಯಾತ್ರೆ, ಇನ್ನೊಮ್ಮೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲೇ ಸಂಭ್ರಮ, ಮತ್ತೊಮ್ಮೆ ವಿಧಾನ ಸೌಧದಲ್ಲಿಯೇ ಸನ್ಮಾನ ಮಾಡ್ತೀವಿ ಅನ್ನೋ ಸರ್ಕಾರದ ತೀರ್ಮಾನ. ಒಬ್ಬ ಸಚಿವ ಯಾರೂ ಬರಬೇಡಿ ಅಂದ್ರೆ, ಇನ್ನೊಬ್ಬ ಸಚಿವರು ಎಲ್ಲರಿಗೂ ಮುಕ್ತ ಆಹ್ವಾನ. ಇದ್ರಿಂದ ಆಗಿದ್ದೇನು? ಬರೋಬ್ಬರಿ 10 ಮಂದಿ ಆರ್‌ಸಿಬಿ ಅಭಿಮಾನಿಗಳು (RCB Fans) ಕಾಲ್ತುಳಿತದಿಂದ ಸಾವನ್ನಪ್ಪೋ ಹಾಗೆ ಆಗಿದೆ. ಹಲವರು ಗಂಭೀರವಾಗಿ ಗಾಯಗೊಳ್ಳುವಂತಾಗಿದೆ.

ಇನ್ನೂ ವಿಪರ್ಯಾಸವೆಂದ್ರೆ ವಿಷಯ ತಿಳೀತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಸ್ಪತ್ರೆಯತ್ತ ಧಾವಿಸಿದ್ರೆ, ಇತ್ತ ಆರ್ಸಿಬಿ ಸಂಭ್ರಮದಲ್ಲಿ ಪಾಲ್ಗೊಂಡ ಡಿಸಿಎಂ ಡಿ.ಕೆ ಶಿವಕುಮಾರ್, ಗೆದ್ದ ಕಪ್ಪಿಗೆ ಮುತ್ತಿಕ್ಕುತ್ತ ಚಿನ್ನ ಸ್ವಾಮಿ ಕ್ರೀಡಾಂಗಣದಲ್ಲಿ ಸಂಭ್ರಮದ ಭಾಗವಾಗಿದ್ದರು. ಇನ್ನು ಗೃಹ ಸಚಿವ ಡಾ. ಜಿ ಪರಮೇಶ್ವರ್ ಅಂತೂ ಏನು ಮಾಡ್ತಿದ್ರು? ಅವರಿಗೇ ಗೊತ್ತು.

ಯಾರು ಹೊಣೆ?

ಆರ್ಸಿಬಿ ಫೈನಲ್ಗೆ ಬರ್ತಿದ್ದಂತೆಯೇ ಸರ್ಕಾರ ಮತ್ತು ಸಂಬಂಧ ಪಟ್ಟವರು ಅಲರ್ಟ್ ಆಗಬೇಕಿತ್ತು. ಒಂದು ವೇಳೆ ನಾವು ಗೆದ್ದರೆ ಸಂಭ್ರಮಾಚರಣೆ ಸೇರಿದಂತೆ ಯಾವ ರಸ್ತೆಯಲ್ಲಿ ಬರಬೇಕು? ವಿಜಯೋತ್ಸವ ಮಾಡಬೇಕಾ ಬೇಡವ? ಮಾಡೋದಾದ್ರೆ ಹೇಗೆ ಮಾಡಬೇಕು? ಭದ್ರತೆ ಹೇಗಿರಬೇಕು? ಪೊಲಿಸ್ ಇಲಾಖೆ ಹೇಳೋದೇನು? ಹೀಗೆ ಎಲ್ಲ ವಿಚಾರಗಳ ಸಿದ್ಧತೆ ಆಗಬೇಕಿತ್ತು. ಕಡೆ ಪಕ್ಷ, ನಿನ್ನೆ ರಾತ್ರಿಯೇ ಗೃಹ ಸಚಿವರ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ಆಗಬೇಕಿತ್ತು. ಕೇವಲ ಪೊಲೀಸ್ ಆಯುಕ್ತರು ಮಾತ್ರವಲ್ಲ ಆರ್ಸಿಬಿ ಪ್ರತಿನಿಧಿ, ಚಿನ್ನಸ್ವಾಮಿ ಕ್ರೀಡಾಂಗಣದ ಉನ್ನತ ಅಧಿಕಾರಿ, ಬಿಸಿಸಿಐ ಈ ಎಲ್ಲರ ಸಭೆ ಕೂಡ ಆಗಿ ಪೊಲೀಸ್ ಕ್ಲಿಯರನ್ಸ್ ಪಡೆದುಕೊಳ್ಳಬೇಕಿತ್ತು. ಇವೆಲ್ಲ ಚರ್ಚೆ ಆಗಿದೆಯೋ ಇಲ್ಲವೋ ಇವತ್ತಿನ ವ್ಯವಸ್ಥೆ ನೋಡಿದ್ರೆ ನಂಬಿಕೆ ಅಂತೂ ಇಲ್ಲ.

ಆದ್ರೆ ಆಗಿದ್ದೇನು?

ಸರ್ಕಾರ ತರಾತುರಿಯಲ್ಲಿ ಕ್ರೆಡಿಟ್ ಗೀಳಿಗೆ ಬಿದ್ದು ತರಾತುರಿಯಲ್ಲಿ ಅಭಿನಂದನಾ ಸಮಾವೇಶ ಆಯೋಜನೆ ಮಾಡಿತಾ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುಂತೆ ಆಗಿದೆ. ಸರ್ಕಾರ ದಿಢೀರನೆ ನಿರ್ಧಾರ ತೆಗೆದುಕೊಂಡು ವಿಧಾನಸೌಧದ ಮುಂಭಾಗದಲ್ಲಿ ಆಟಗಾರರಿಗೆ ಅಭಿನಂದನಾ ಸಮಾವೇಶ ಆಯೋಜನೆ ಮಾಡಿ. ಸಾರ್ವಜನಿಕರಿಗೆ ಮುಕ್ತ ಆಹ್ವಾನ ನೀಡಿದ್ದು ಯಾಕೆ? ಅನ್ನೋದು ಒಂದು ಪ್ರಶ್ನೆ ಆದ್ರೆ, ಕೊನೆ ಪಕ್ಷ ವಿಧಾನಸೌಧದ ಮುಂಭಾಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದ ನಿರ್ವಹಣೆಯನ್ನಾದ್ರೂ ಸರಿಯಾಗಿ ಮಾಡಲಾಯ್ತಾ? ಕಂಡ ಕಂಡವರು ವೇದಿಕೆ ಮೇಲೆ ಹತ್ತಿ ಬಂದು ಆಟಗಾರರ ಜೊತೆ ಸೆಲ್ಫಿಗೆ ಮುಗಿಬಿದ್ದಿದ್ದು ಕೂಡ ಕಂಡು ಬಂದಿತು. ವಿರಾಟ್ ಕೊಹ್ಲಿಯಂತಹ ಸ್ಟಾರ್ ಆಟಗಾರ ಇರುವ ವೇದಿಕೆಯನ್ನು ಯಾವ ರೀತಿಯಾಗಿ ನಿರ್ವಹಣೆ ಮಾಡಬೇಕು ಎಂಬು ಸಾಮಾನ್ಯ ಜ್ಞಾನ ಸರ್ಕಾರಕ್ಕೆ ಇರಲಿಲ್ಲವೇ ಎಂಬ ಪ್ರಶ್ನೆ ಕೂಡ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

ವಿಧಾನಸೌಧದ ಮೆಟ್ಟಿಲುಗಳಿರುವ ಪ್ರಾಂಗಣಕ್ಕೆ ಎಲ್ಲೆಲ್ಲಿಂದಲೋ ಓಡಿಬಂದ ಜನರು ವಾಸ್ತುಶಿಲ್ಪಗಳ ಮೇಲೆಲ್ಲಾ ಕಾಲಿಟ್ಟು ಕೊಹ್ಲಿ ಮತ್ತವರ ತಂಡವನ್ನು ನೋಡಲು ಮುಗಿಬಿದ್ದಿದ್ದಾರೆ. ತರಾತುರಿಯಲ್ಲಿ ಕಾರ್ಯಕ್ರಮ ಆಗಿದ್ದರಿಂದ ಪೊಲೀಸರು ಕೂಡ ಜನರನ್ನು ನಿಯಂತ್ರಿಸುವಲ್ಲಿ ವಿಫಲರಾಗಿದ್ದಾರೆ. ಮುಂದಾಲೋಚನೆ, ಮುಂಜಾಗರೂಕತೆ ವಹಿಸದೇ ಕಾರ್ಯಕ್ರಮ ನಡೆಸಿದ ಕಾರಣ ಇಷ್ಟೆಲ್ಲಾ ಅವಘಡ ನಡೆದಿವೆ ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ.

ವಿಧಾನ ಸೌಧದಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದ ಬಳಿಕ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೆಎಸ್‌ಸಿಎ ಆಯೋಜಿಸಿದ್ದ ಅಭಿನಂದನಾ ಸಮಾವೇಶಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಆಗಮಿಸಿದ್ದಾರೆ. ಒಂದೆಡೆ 10 ಜನ ಆರ್‌ಸಿಬಿ ಅಭಿಮಾನಿಗಳು ಜೀವ ಕಳೆದುಕೊಂಡಿದ್ದರೆ, ಇನ್ನೊಂದೆಡೆ ಅಭಿನಂದನಾ ಸಮಾರಂಭದ ಅಗತ್ಯತೆ ಇತ್ತಾ ಎಂಬ ಪ್ರಶ್ನೆಗಳು ಉಂಟಾಗಿವೆ. ಅದರಲ್ಲೂ ಈ ಕಾರ್ಯಕ್ರಮಕ್ಕೆ ಸರ್ಕಾರದ ಭಾಗವಾಗಿ ಡಿಸಿಎಂ ಡಿಕೆ ಶಿವಕುಮಾರ್ ಕೂಡ ಭಾಗಿಯಾಗಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಇನ್ನೊಂದೆಡೆ ಸಿಎಂ ಸಿದ್ದರಾಮಯ್ಯ ಅವರು ಬೌರಿಂಗ್ ಹಾಗೂ ವೈದೇಹಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ.

ಈ ನಡುವೆ ಉಳಿದಿರೋದು ಒಂದೇ ಪ್ರಶ್ನೆ, ಈ ಎಲ್ಲ ಘಟನೆಗಳಿಗೆ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಸಚಿವರ ಹೆಗ್ಗಳಿಕೆಯ ಹಮ್ಮು ಬಿಮ್ಮುವಿಕೆಯೇ ಕಾರಣವಾಯ್ತಾ? ಹಾಗಿದ್ರೆ, ಈ ತಪ್ಪಿಗೆ ಶಿಕ್ಷೆ ಯಾರಿಗೆ? ಒಂದು ವೇಳೆ ಸರ್ಕಾರ ಪರಿಹಾರ ಕೊಟ್ಟರೂ, ಅದ್ರಿಂದ ಹೋದ ಜೀವಗಳು ಮರಳಿ ಬರ್ತಾವಾ? ಇಂಥ ಸಂಭ್ರಮ ಸೂತಕವಾಗಿ ಬದಲಾದ ಈ ಪಾಪದ ಕಲೆ ಎಷ್ಟೂ ಅಲ್ಲಗಳೆದ್ರೂ ಸರ್ಕಾರದ ಕೈಗೆ ಒಂಚೂರಾದ್ರೂ ಅಂಟಿಯೇ ಅಂಟುತ್ತೆ, ನೊಂದವರ ನಿಟ್ಟುಸಿರು ಆಳುವವರಿಗೆ ಶಾಪವಾದ್ರೂ ಅಚ್ಚರಿ ಇಲ್ಲ ಅನ್ನೋದಂತೂ ಸ್ಪಷ್ಟವಾಗಿ ಗೋಚರವಾಗುತ್ತಿದೆ.