Last Updated:
ರುದ್ರಾಕ್ಷಿ ಧಾರಣೆ ಧುರಿತ ನಿವಾರಣೆ, ಶಾಂತಿ, ಆರೋಗ್ಯ ವೃದ್ಧಿಗೆ ಸಹಾಯಕ ಎಂದು ನಂಬಲಾಗುತ್ತದೆ. 1-21 ಮುಖದ ರುದ್ರಾಕ್ಷಿಗಳು ಪುರಾಣ ಪ್ರಕಾರ ಪ್ರಚಲಿತ. ಔಷಧೀಯ ಗುಣಗಳಿಂದ ಜನರು ಆಕರ್ಷಿತರಾಗಿದ್ದಾರೆ.
ದಕ್ಷಿಣ ಕನ್ನಡ: ಮಹಾ ಶಿವನ ಆರಾಧಕರು (Lord Shiva) ರುದ್ರಾಕ್ಷಿಯನ್ನು ಹೆಚ್ಚಾಗಿ ಮಾಲೆಯ ರೂಪದಲ್ಲಿ ಧರಿಸುತ್ತಾರೆ. ಈ ರುದ್ರಾಕ್ಷಿ ಮಾಲೆಯನ್ನು (Rudraksha) ಧಾರಣೆ ಮಾಡಿದರೆ ದುರಿತಗಳ ನಿವಾರಣೆಯಾಗುತ್ತದೆ, ಶಾಂತಿ, ನೆಮ್ಮದಿ ಸಿಗುತ್ತದೆ, ಆರೋಗ್ಯ ವೃದ್ಧಿಯಾಗುತ್ತದೆ (Health Benefits) ಎನ್ನುವ ನಂಬಿಕೆಯಿದೆ. ಆ ಕಾರಣಕ್ಕಾಗಿ ಹಿಂದೆ ಕೇವಲ ಯೋಗಿಗಳು ಮತ್ತು ಋಷಿಗಳು ಬಳಸುತ್ತಿದ್ದ ರುದ್ರಾಕ್ಷಿಯನ್ನು ಇಂದು ಸಾಮಾನ್ಯ ಜನರೂ ಬಳಸಲಾರಂಭಿಸಿದ್ದಾರೆ.
ರುದ್ರಾಕ್ಷಿಯ ಅಸಾಧಾರಣ ಶಕ್ತಿ ಮತ್ತು ಔಷಧೀಯ ಗುಣಗಳೂ ಇಂದು ಎಲ್ಲರನ್ನೂ ರುದ್ರಾಕ್ಷಿಯತ್ತ ಸೆಳೆಯುತ್ತಿದೆ. ಏಕ ಮುಖ ರುದ್ರಾಕ್ಷಿಯಿಂದ ಹಿಡಿದು 21 ಮುಖದ ರುದ್ರಾಕ್ಷಿಗಳು ಇವೆ ಎನ್ನೋದು ಪುರಾಣದಿಂದ ದೊರೆತ ಮಾಹಿತಿಯಾಗಿದ್ದು, ಇವುಗಳಲ್ಲಿ ಹದಿನಾರು ಮುಖಗಳವರೆಗಿನ ರುದ್ರಾಕ್ಷಿಗಳು ಗೋಚರಕ್ಕೆ ಬಂದಿವೆ. ರುದ್ರಾಕ್ಷಿಯ ಮೇಲಿರುವ ಗೆರೆಗಳ ಆಧಾರದಲ್ಲಿ ಅದನ್ನು ಏಕಮುಖಿ, ಪಂಚಮುಖಿ, ಸಪ್ತಮುಖಿ ಹೀಗೆ ವಿಂಗಡಿಸಲಾಗುತ್ತದೆ.
ಶಿವನಿಗೆ ಬಹಳ ಪ್ರಿಯವಾದ ರುದ್ರಾಕ್ಷಿ
ಪುರಾಣದ ಪ್ರಕಾರ ತ್ರಿಪುರಾಸುರ ರಾಕ್ಷಸನ ಸಂಹಾರದ ನಂತರ, ಪರಶಿವನ ಕಣ್ಣಿನಿಂದ ಬಂದ ಆನಂದದ ಅಶ್ರುಬಿಂದುಗಳು ರುದ್ರಾಕ್ಷಿ ಮಣಿಗಳಾದವು. ಶಿವನಿಗೆ ಬಹಳ ಪ್ರಿಯವಾದ ರುದ್ರಾಕ್ಷಿ ಮಣಿಗಳು ಶಿವಭಕ್ತರ ಕೊರಳ ಮಣಿ-ಮಾಲೆಯಾಗಿ ಉಪಯೋಗಿಸಲ್ಪಡುತ್ತದೆ. ಇದನ್ನು ಜಪಮಾಲೆಯಾಗಿಯೂ ಉಪಯೋಗಿಸುತ್ತಾರೆ.
ಶಿವನ ಮೂರನೇ ಕಣ್ಣಿನ ರೂಪ
ಶಿವನು ದೀರ್ಘಕಾಲ ಧ್ಯಾನ ನಿರತನಾಗಿ ನಂತರ ಕಣ್ಣು ಬಿಟ್ಟಾಗ ಅವನ ಕಣ್ಣಿನಿಂದ ಬಿದ್ದ ಒಂದು ಆನಂದ ಬಾಷ್ಪ ರುದ್ರಾಕ್ಷಿಯಾಗಿ ಅದರಿಂದ ರುದ್ರಾಕ್ಷಿಯ ಮರ ಹುಟ್ಟಿತೆಂದು ಹೇಳಲಾಗಿದೆ. ಅದು ಶಿವನ ಮೂರನೇ ಕಣ್ಣಿನ ರೂಪವಾದದ್ದು ಜನರ ಕಣ್ಣೀರನ್ನು ಒರೆಸುವ ಎಂದರೆ ದುಃಖವನ್ನು ದೂರಮಾಡುವ ಗುಣ ಹೊಂದಿದೆ ಎಂದು ಕೆಲವರು ಹೇಳುತ್ತಾರೆ.
ಒಂದು ಮುಖದಿಂದ 21 ಮುಖಗಳವರೆಗೂ ರುದ್ರಾಕ್ಷಿ ಕಾಣಬಹುದು
ರುದ್ರಾಕ್ಷಿ ಆಗ್ನೇಯ ಏಷ್ಯಾ ದೇಶಗಳಲ್ಲಿಯೂ ಬೆಳೆಯುತ್ತದೆ. ರುದ್ರಾಕ್ಷಿ ಕಾಯಿ ಸಿಪ್ಪೆಯ ಭಾಗ. ಸಿಪ್ಪೆ ಸುಲಿದರೆ, ಒಳಗಡೆ ಹಸಿರು ಬಣ್ಣದ ರುದ್ರಾಕ್ಷಿ ಸಿಗುತ್ತದೆ. ಅದು ಚೆನ್ನಾಗಿ ಒಣಗಿದ ನಂತರ ನಸು ಶ್ವೇತವರ್ಣ, ತಾಮ್ರದ ನಸು ಕೆಂಪು, ಹಾಗೂ ನಸು ಕಪ್ಪು ಬಣ್ಣದವು ಸಿಗುತ್ತವೆ. ಸೂಜಿಯನ್ನು ಉಪಯೋಗಿಸಿ ಮಡಿಕೆಗಳಿರುವ ರುದ್ರಾಕ್ಷಿಯ ಗೆರೆಗಳನ್ನು ಬಿಡಿಸುತ್ತಾರೆ. ಗೆರೆಗಳ ಆಕಾರವನ್ನು ನೋಡಿ ರುದ್ರಾಕ್ಷಿಯ ಮುಖಗಳನ್ನು ಗುರುತಿಸುತ್ತಾರೆ. ಅದರಲ್ಲಿ ಒಂದು ಮುಖದಿಂದ ಹಿಡಿದು 21 ಮುಖಗಳವರೆಗೂ ಇರುವ ರುದ್ರಾಕ್ಷಿ ಸಿಗುವುದೆಂದು ಹೇಳುತ್ತಾರೆ. ಆದರೆ 5 ಮುಖದಿಂದ 14 ಮುಖಗಳಿರುವ ರುದ್ರಾಕ್ಷಿಗಳು ಹೆಚ್ಚು ಇರುತ್ತವೆ.
ಆಯುರ್ವೇದದಲ್ಲಿ ರುದ್ರಾಕ್ಷಿ ಬಳಕೆ
ಏಕ ಮುಖ ರುದ್ರಾಕ್ಷಿ ಬಹಳ ವಿರಳವಾಗಿ ದೊರೆಯುತ್ತದೆ. ಪಂಚಮುಖಿ ರುದ್ರಾಕ್ಷಿ ಹೆಚ್ಚಿನ ಸಂಖ್ಯೆಯಲ್ಲಿ ದೊರೆಯುತ್ತದೆ. ಒಂದೊಂದು ಬಗೆಯ ರುದ್ರಾಕ್ಷಿಗೂ ಅದರದೇ ಮಹತ್ವವಿದೆ. ಒಂದೊಂದು ಮುಖಕ್ಕೂ ಒಬ್ಬೊಬ್ಬ ದೇವತೆಯನ್ನು ಗುರುತಿಸುತ್ತಾರೆ. ಇದಲ್ಲದೆ ರುದ್ರಾಕ್ಷಿಗೆ ಔಷಧೀಯ ಗುಣಗಳಿವೆ. ಅನೇಕ ರೋಗಗಳಿಗೆ ಆಯುರ್ವೇದದಲ್ಲಿ ರುದ್ರಾಕ್ಷಿಯನ್ನು ಉಪಯೋಗಿಸುತ್ತಾರೆ. ಹಿಮಾಲಯದ ತಪ್ಪಲಿನಲ್ಲಿ ರುದ್ರಾಕ್ಷಿ ಮರಗಳು ಹೆಚ್ಚಾಗಿ ಬೆಳೆಯುತ್ತಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ರುದ್ರಾಕ್ಷಿ ಮರಗಳನ್ನು ಕೆಲವೆಡೆ ಕೃಷಿಕರು ತಮ್ಮ ಅಡಿಕೆ ತೋಟದ ಮಧ್ಯೆ ಬೆಳೆಯುತ್ತಿದ್ದಾರೆ.
Disclaimer
ಇಲ್ಲಿ ನೀಡಿರುವ ಎಲ್ಲಾ ಮಾಹಿತಿಯನ್ನು ಜ್ಯೋತಿಷ್ಯ ಶಾಸ್ತ್ರಜ್ಞರು ಮತ್ತು ತಜ್ಞರನ್ನು ಸಂಪರ್ಕಿಸಿ ರಾಶಿ, ಧರ್ಮ ಮತ್ತು ಶಾಸ್ತ್ರಗಳಿಗೆ ಅನುಸಾರವಾಗಿ ನೀಡಲಾಗಿದೆ. ಯಾವುದೇ ಘಟನೆ-ದುರ್ಘಟನೆ ಅಥವಾ ಲಾಭ-ನಷ್ಟಗಳು ಕೇವಲ ಕಾಕತಾಳೀಯ. ಸಾರ್ವಜನಿಕ ಹಿತದೃಷ್ಟಿಯಿಂದ ಜ್ಯೋತಿಷಿಗಳ ಮಾಹಿತಿ ನೀಡಲಾಗಿದೆ. ಇಲ್ಲಿ ತಿಳಿಸಿರುವ ಯಾವುದೇ ಮಾಹಿತಿಯನ್ನು ಲೋಕಲ್ 18 ವ್ಯಕ್ತಿಗತವಾಗಿ ಸಮರ್ಥಿಸಿಕೊಳ್ಳುವುದಿಲ್ಲ.
Dakshina Kannada,Karnataka
June 12, 2025 11:54 AM IST