Last Updated:
ಶಿರಾಡಿ ಘಾಟ್: ಮಂಗಳೂರು-ಬೆಂಗಳೂರು ಹೆದ್ದಾರಿಯ ಹಸಿರ ಕಾನನದ ಮಧ್ಯೆ ಶಿರಾಡಿ ಘಾಟ್ ರಸ್ತೆ, ಪ್ರಕೃತಿ ಪ್ರೇಮಿಗಳಿಗೆ ಆಕರ್ಷಣೆಯ ಕೇಂದ್ರ.
ದಕ್ಷಿಣ ಕನ್ನಡ: ಪ್ರಕೃತಿಯ ಸೊಬಗನ್ನು ಸವಿಯಲೆಂದೇ ಕೆಲವು ಪ್ರಕೃತಿ ಪ್ರೇಮಿಗಳು(Nature Lovers) ವಿದೇಶಗಳನ್ನು ಸುತ್ತಿ ಬರೋದು ಸಾಮಾನ್ಯ. ಆದರೆ ನಮ್ಮ ದೇಶದಲ್ಲೇ, ನಮ್ಮ ನಮ್ಮ ಗ್ರಾಮದಲ್ಲೇ ಪ್ರಕೃತಿಯ ಸುಂದರ ದೃಶ್ಯಗಳು ಸಾಕಷ್ಟಿದ್ದು, ಇವುಗಳಲ್ಲಿ ಹಸಿರ ಕಾನನದ(Green Forest) ನಡುವಿನ ಮಧ್ಯೆ ಹಾದು ಹೋಗುವ ಶಿರಾಡಿ ಘಾಟ್ (Shiradi Ghat) ರಸ್ತೆಯೂ ಒಂದು. ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಅಡ್ಡಹೊಳೆಯಿಂದ ಶಿರಾಡಿ ಘಾಟ್ವರೆಗಿನ ಈ ರಸ್ತೆ ಹಸಿರ ರಾಶಿಯ ಮಧ್ಯೆ ಸಾಗುತ್ತಿದ್ದು, ಈ ರಸ್ತೆಯ ಅಕ್ಕ-ಪಕ್ಕದಲ್ಲಿರುವ ಹಸಿರ ರಾಶಿಗಳು ಪ್ರಯಾಣಿಕನ ಎಲ್ಲಾ ಸುಸ್ತು-ಆಯಾಸವನ್ನ ಕ್ಷಣ ಮಾತ್ರದಲ್ಲಿ ಮರೆಸುವಂತಿದೆ.
ಅಡ್ಡಹೊಳೆಯಿಂದ ಸುಮಾರು 12 ಕಿಲೋಮೀಟರ್ ವರೆಗೂ ಎರಡೂ ಪಕ್ಕದಲ್ಲಿ ದಟ್ಟ ಕಾಡುಗಳಿದ್ದು, ಇಲ್ಲಿ ಪ್ರಕೃತಿಗೆ ವಿರುದ್ಧವಾಗಿರುವ ಯಾವುದೇ ಮಾನವ ಹಸ್ತಕ್ಷೇಪಗಳಿಲ್ಲ. ಕಣ್ಣು ಹಾಯಿಸಿದಷ್ಟೂ ಇಲ್ಲಿ ಹಸಿರೇ ತುಂಬಿದ್ದು, ನೇಚರ್ ಲವರ್ಸ್ ಗೆ ಈ ರಸ್ತೆ ಹೇಳಿ ಮಾಡಿಸಿದಂತಿದೆ. ಹೆದ್ದಾರಿ ಇಲಾಖೆಯೂ ಈ ರಸ್ತೆಯ ಕೆಲವು ಕಿಲೋಮೀಟರ್ ವ್ಯಾಪ್ತಿಯನ್ನು ಗ್ರೀನ್ ಕಾರಿಡಾರ್ ನಂತೆಯೂ ನಿರ್ಮಿಸಿದ್ದು, ಡಿವೈಡರ್ ಗಳಲ್ಲಿ ಹಸಿರ ಬೋರ್ಡ್ ಗಳನ್ನು ಅಳವಡಿಸಿ ರಸ್ತೆಯ ಸೌಂದರ್ಯವನ್ನ ಇಮ್ಮಡಿಗೊಳಿಸಿದೆ.
ಈ ರಸ್ತೆಯಲ್ಲಿ ಸಂಚರಿಸುವ ವೇಳೆ ವಿದೇಶದ ರಸ್ತೆಗಳಲ್ಲಿ ಸಂಚರಿಸಿದ ಅನುಭವವನ್ನೂ ಪ್ರಯಾಣಿಕರು ಪಡೆಯುತ್ತಿದ್ದು, ಅತೀ ಎತ್ತರದ ಶಿರಾಡಿಘಾಟ್ ಶಿಖರಗಳ ದರ್ಶನವೂ ಈ ರಸ್ತೆಯಲ್ಲೇ ಆಗುತ್ತೆ. ಹಸಿರ ಹೊದಿಕೆಗಳ ಮಧ್ಯೆ ಬಾನೆತ್ತರಕ್ಕೆ ಬೆಳೆದ ಮರಗಳು ಪ್ರಯಾಣಿಕನನ್ನು ತನ್ನತ್ತ ಕೈ ಬೀಸಿ ಕರೆಯುವಂತೆ ಭಾಸವಾಗುತ್ತಿದ್ದು, ಈ ರಸ್ತೆ ಎಲ್ಲರ ಆಕರ್ಷಣೆಯ ಕೇಂದ್ರಬಿಂದುವೂ ಆಗಿದೆ.
ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75 ರ ಚತುಷ್ಪಥ ಕಾಮಗಾರಿ ನಡೆದಿದ್ದು, ಪ್ರಕೃತಿಗೆ ಹೆಚ್ಚು ಹಾನಿಯಾಗದ ರೀತಿಯಲ್ಲಿ ಈ ಹೆದ್ದಾರಿಯನ್ನು ನಿರ್ಮಿಸಲಾಗಿದೆ. ಈ ಭಾಗದಲ್ಲಿ ಕಾಡಾನೆಗಳ ಓಡಾಟವೂ ಹೆಚ್ಚಾಗಿರುವ ಕಾರಣ, ಹೆದ್ದಾರಿಯ ಅಡ್ಡಹೊಳೆ ಹಾಗು ಶಿರಾಡಿ ಭಾಗದಲ್ಲಿ ಆನೆಗಳು ಸರಾಗವಾಗಿ ಸಂಚರಿಸಲು ಆನೆ ಕಾರಿಡಾರ್ ವ್ಯವಸ್ಥೆಯನ್ನು ರಸ್ತೆಯ ಕೆಳಭಾಗದಿಂದಲೇ ಮಾಡಲಾಗಿದೆ.
Dakshina Kannada,Karnataka
May 29, 2025 11:23 AM IST