Last Updated:
ಮಂಗಳೂರು ಅನಿ ಮಂಗಳೂರು ನಾಲ್ಕು ಆಟೋ ಮಾಲಕಿ ಹಾಗೂ ಅನಿ ಕೆಫೆ ಸ್ಥಾಪಕಿಯಾಗಿ ಮಂಗಳಮುಖಿಯರಿಗೆ ಸ್ವಾವಲಂಬನೆ ಮಾದರಿ, ವೃದ್ಧಾಶ್ರಮ ಸ್ಥಾಪನೆ ಕನಸು ಹೊತ್ತಿದ್ದಾರೆ.
ಮಂಗಳೂರು: ಬದುಕು (Life) ಸರಳರೇಖೆಯಲ್ಲ, ಅದೊಂದು ಸರ್ಕಲ್. ಇಂದು ಕೆಳಗಿದ್ದವ ಮೇಲೆ ಬರಬೇಕು, ಮೇಲಿದ್ದವ ಕೆಳಗಿಳಿಯಬೇಕು. ನಮ್ಮ ಸಂವಿಧಾನ (Constitution) ಎಲ್ಲರಿಗೂ ಸಮಬಾಳು ಎಂಬ ಉದಾರ ನೀತಿ ಹೇಳಿದರೂ ಕೂಡ ಈ ತೃತೀಯ ಲಿಂಗಿಗಳ ಬಗ್ಗೆ ಜನ ಸಾಮಾನ್ಯರೆಲ್ಲರಿಗೂ ಒಂದು ರೀತಿ ಅಸಮಾಧಾನ ಇದ್ದೇ ಇದೆ, ಅದೆಷ್ಟೇ ತೊಳೆದರೂ ಹೋಗದ ಕಲೆ. ಆದರೆ ಮಂಗಳೂರು (Mangaluru) ಅದಕ್ಕೆ ಅಪವಾದವಾಗಿದೆ ನಿಂತಿದೆ, ಮತ್ತು ಮಂಗಳೂರಿನ ಈ ಮಂಗಳಮುಖಿ (Transgender) ಅದಕ್ಕೆ ಅಪವಾದವಾಗಿದ್ದಾಳೆ.
ಅಂದು ನನ್ನನ್ನು ಕೆಟ್ಟ ಪದದಿಂದ ಕರೆದು ಅವಮಾನಿಸಿದವರೇ ಇಂದು ‘ಅಕ್ಕ’ ಎಂದು ಕರೆಯುತ್ತಿದ್ದಾರೆ. ಇದು ಅವಮಾನವೆಂಬ ನೋವನ್ನು ಉಂಡು ಧೃತಿಗೆಡದೆ ಎಲ್ಲರಂತೆ ಸ್ವಾಭಿಮಾನಿ ಬದುಕು ಬದುಕುತ್ತಿರುವ ‘ಅನಿ ಮಂಗಳೂರು’ ಹೆಮ್ಮೆಯ ಮಾತು.
ಮಂಗಳಮುಖಿಯೆಂಬ ಕಾರಣಕ್ಕೆ ತನಗೆ ಆಟೋಗಳು ನಿಲ್ಲಿಸದಿದ್ದ ಕಾರಣ ಸಾಲಸೋಲ ಮಾಡಿ ನಾಲ್ಕು ಆಟೋಗಳನ್ನು ಖರೀದಿಸಿ ಬಾಡಿಗೆಗೆ ಬಿಟ್ಟಿರುವ ಅನಿ ಮಂಗಳೂರು ಇಂದು ಕೆಫೆಯೊಂದರ ಮಾಲಕಿ. ನಾಲ್ಕು ಆಟೋರಿಕ್ಷಾಗಳ ಮಾಲಕಿಯಾದರೂ, ಇನ್ನೂ ಏನಾದರೂ ಸಾಧನೆ ಮಾಡಬೇಕೆಂಬ ಕನಸಿನ ದ್ಯೋತಕವಾಗಿ ‘ಅನಿ ಕೆಫೆ’ಯನ್ನು ಅವರು ತೆರೆದಿದ್ದಾರೆ.
ಈ ಕೆಫೆಯಲ್ಲಿ ಚಹಾ, ಕಾಫಿ, ಬಿಸ್ಕತ್ತು, ಸಮೋಸ, ತಂಪುಪಾನೀಯ ಸಿಗುತ್ತದೆ. ಮುಂಜಾನೆ ಮೂರು ಗಂಟೆಯಿಂದ ಮಧ್ಯರಾತ್ರಿ 12 ಗಂಟೆಯವರೆಗೂ ಅನಿ ಅವರ ಕೆಫೆ ತೆರೆದಿಡುತ್ತದೆ. ಅಂದ ಹಾಗೆ ಈ ಕೆಫೆಯಿರುವುದು ಪಂಪ್ವೆಲ್ ಸರ್ಕಲ್ ಬಳಿ. ಈ ಮೂಲಕ ಅನಿ ಮಂಗಳೂರು ಮಂಗಳಮುಖಿಯರಿಗೆ ಸ್ವಾವಲಂಬನೆ ಬದುಕು ಕಟ್ಟಿಕೊಳ್ಳುವಲ್ಲಿ ಮಾದರಿಯಾಗಿದ್ದಾರೆ.
ಈ ಕೆಫೆಯ ಉದ್ದೇಶವೇನು? ಅನಿ ಕನಸುಗಳೇನು?
ಈ ಕೆಫೆಯು ಅನಾಥಾಶ್ರಮದ ಮಕ್ಕಳು ಹಾಗೂ ಮಂಗಳಮುಖಿಯರಿಂದಲೇ ಫೆ.6ರಂದು ಲೋಕಾರ್ಪಣೆಗೊಂಡಿದೆ. ಇನ್ನೂ ನಾಲ್ಕಾರು ಕೆಫೆ ತೆರೆಯುವ ಕನಸು ಅನಿಯವರಲ್ಲಿದೆ. ಈ ಕೆಫೆಗಳಿಂದ ಬರುವ ಆದಾಯದಿಂದ ವೃದ್ಧ ಮಂಗಳಮುಖಿಯರಿಗೆ ವೃದ್ಧಾಶ್ರಮ ತೆರೆಯಬೇಕು. ಈ ಮೂಲಕ ಯಾರಿಗೂ ಬೇಡವಾಗಿ ಅನಾಥ ಬದುಕು ಬದುಕಬೇಕಾಗಿ ಬರುವ ವೃದ್ಧ ಮಂಗಳಮುಖಿಯರಿಗೂ ಉತ್ತಮ ಬದುಕು ಕಟ್ಟಿಕೊಡುವ ಬಯಕೆ ಅನಿಯವರಿಗಿದೆ. ಇವರ ಈ ಸಾಹಸ ಬರೀ ಮಂಗಳಮುಖಿಯರಿಗೆ ಮಾತ್ರವಲ್ಲ ಎಲ್ಲರಿಗೂ ಮಾದರಿಯೆನಿಸಿದೆ. ನಿಜವಾಗಲೂ ಅನಿಗೆ ಅನಿಯೇ ಸಾಟಿ. ಇವರ ಸಾಧನೆಗೊಂದು ಸಲಾಂ ಎನ್ನಲೇಬೇಕು.
Dakshina Kannada,Karnataka