Last Updated:
ಕರ್ನಾಟಕ-ಕೇರಳ ಗಡಿಯಲ್ಲಿ ಇರುವ ರಾಣಿಪುರ ಬೆಟ್ಟ 1048 ಮೀ ಎತ್ತರದಲ್ಲಿ, ಚಾರಣಿಗರು ಮತ್ತು ಬೈಕ್ ಸವಾರರಿಗೆ ಆಕರ್ಷಕ ತಾಣವಾಗಿದೆ, ಹಸಿರು, ನದಿ ದೃಶ್ಯ, ಪ್ಲಾಸ್ಟಿಕ್ ನಿಷೇಧ ಇಲ್ಲಿದೆ.
ದಕ್ಷಿಣ ಕನ್ನಡ: ಮಳೆಗಾಲ ಕೊಂಚ ಕಡಿಮೆಯಾಗುತ್ತಿದ್ದಂತೆ ಚಾರಣಿಗರು ತಮ್ಮ ನೆಚ್ಚಿನ ಪ್ರದೇಶಗಳಿಗೆ ಚಾರಣಕ್ಕೆ ಹೊರಡಲು ಅಣಿಯಾಗುತ್ತಾರೆ. ಮಳೆಗಾಲದಲ್ಲಿದ್ದಂತೆ (Rainy Season) ಅಚ್ಚ ಹಸುರಿನ ಪರಿಸರದ ಅನುಭವ ಸಿಗಬೇಕು ಅನ್ನೋ ಕಾರಣಕ್ಕೆ ಇದೇ ಸಮಯದಲ್ಲಿ ಚಾರಣಕ್ಕೆ ತೆರಳಬೇಕಾಗುತ್ತೆ. ಚಾರಣಕ್ಕೆಂದೇ (Trekking) ಹೇಳಿ ಮಾಡಿಸಿದಂತಿರುವ ಹಲವು ಸ್ಪಾಟ್ಗಳು ಕರ್ನಾಟಕ (Karnataka) ಮತ್ತು ಕೇರಳದಲ್ಲಿ (Kerala) ಸಾಕಷ್ಟಿವೆ. ಇಂತಹ ಒಂದು ಸ್ಪಾಟ್ ಕೇರಳ-ಕರ್ನಾಟಕ ಗಡಿಭಾಗದಲ್ಲಿರೋ ರಾಣಿಪುರ ಪ್ರವಾಸಿತಾಣ.
ಸಮುದ್ರ ಮಟ್ಟದಿಂದ ಸುಮಾರು 1048 ಮೀಟರ್ ಎತ್ತರ ಅಂದರೆ ಸರಿ ಸುಮಾರು 3438 ಅಡಿ ಎತ್ತರದಲ್ಲಿರುವ ಈ ಹಸಿರ ಬೆಟ್ಟ ಪ್ರವಾಸಿಗರನ್ನು ಕೈ ಬೀಸಿ ತನ್ನತ್ತ ಸೆಳೆಯುತ್ತಿದೆ. ಬೆಟ್ಟದ ಕೆಳಗಿನಿಂದ ಸುಮಾರು ಐದು ಕಿಲೋ ಮೀಟರ್ ನಡೆದುಕೊಂಡೇ ಬೆಟ್ಟ ಹತ್ತಿದರೆ ಸಿಗೋದೇ ಈ ರಾಣಿಪುರ ತಾಣ. ಈ ಬೆಟ್ಟದ ಮೇಲಿನ ಅನುಭವವೇ ಒಂದು ತರ ಮನಸ್ಸಿಗೆ ಮುದ ನೀಡುತ್ತೆ. ಬೆಟ್ಟ ಹತ್ತುವ ಸಂದರ್ಭದಲ್ಲಿ ಇದ್ದ ದಣಿವು, ಬೇಗೆ ಎಲ್ಲವೂ ಈ ಬೆಟ್ಟದ ತುದಿ ಮುಟ್ಟಿದ ತಕ್ಷಣವೇ ಮಾಯವಾಗುತ್ತೆ . ಬೆಟ್ಟದ ತಳದಲ್ಲಿ ವಿಪರೀತ ಉರಿ ಕಂಡುಬಂದರೆ ಬೆಟ್ಟದ ತುದಿಯಲ್ಲಿ ಕೂಲ್ ಕೂಲ್ ಅನುಭವ ಸಿಗುತ್ತೆ. ಅಲ್ಲದೆ ಈ ಬೆಟ್ಟದ ಮೇಲಿನಿಂದ ಇಡೀ ವಾತಾವರಣವನ್ನೊಮ್ಮೆ ವೀಕ್ಷಿಸಿದಲ್ಲಿ ಸುತ್ತಲೂ ಹಸಿರಿನ ಹೊದಿಕೆಗಳೇ ಕಂಡು ಬರುತ್ತವೆ. ಹಸಿರು ಹೊದಿಕೆಯ ಮಧ್ಯೆ ಹರಿಯುವ ನದಿಗಳ ದೃಶ್ಯಕಾವ್ಯವೂ ಪ್ರವಾಸಿಗನ ಮನಸೂರೆಗೊಳಿಸುತ್ತೆ.
ತಲಕಾವೇರಿ ವನ್ಯಧಾಮದ ವ್ಯಾಪ್ತಿಯಲ್ಲಿ ಬರುವ ಈ ಬೆಟ್ಟ ಮೇಲೆ ಪರಿಸರಕ್ಕೆ ಹಾನಿ ಮಾಡುವ ಪ್ಲಾಸ್ಟಿಕ್ ಮತ್ತು ಇತರ ವಸ್ತುಗಳನ್ನು ಕೊಂಡೊಯ್ಯಲು ನಿಷೇಧವಿದೆ. ಬೆಟ್ಟದ ಮೇಲೆ ಚಾರಣ ಮಾಡುವವರು ತಮಗೆ ಬೇಕಾದ ತಿಂಡಿ ತಿನಿಸುಗಳ ವ್ಯವಸ್ಥೆಯನ್ನು ತಾವಾಗಿಯೇ ಮಾಡಬೇಕಾಗಿದ್ದು, ಬೆಟ್ಟದ ಮೇಲೆ ಅಥವಾ ದಾರಿ ಮಧ್ಯೆ ಯಾವುದೇ ಅಂಗಡಿಗಳ ವ್ಯವಸ್ಥೆಗಳಿಲ್ಲ. ತಂಪಾದ ಮೋಡಗಳು ತಲೆ ಮೇಲಿಂದಲೇ ಚಲಿಸುವಂತೆ ಭಾಸವಾಗುತ್ತಿದ್ದು, ಕೈಗೆಟುಕುವ ದೂರದಲ್ಲಿದೆ ಅನ್ನುವ ಅನುಭವವನ್ನು ನೀಡುತ್ತದೆ.
Dakshina Kannada,Karnataka
October 12, 2025 7:12 AM IST