Last Updated:
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ 1.71 ಲಕ್ಷ ಜನರನ್ನು ಕುಡಿತದ ಚಟದಿಂದ ಮುಕ್ತಗೊಳಿಸಿ, ಸಮಾಜದಲ್ಲಿ ಬದಲಾವಣೆ ತಂದಿದೆ.
ದಕ್ಷಿಣ ಕನ್ನಡ: ಕುಡಿತದ ದಾಸ್ಯಕ್ಕೆ (Drunkenness) ಬಲಿಯಾಗಿ ಇಡೀ ಜೀವನವನ್ನೇ ಹಾಳು ಮಾಡಿಕೊಂಡವರ ಕಥೆಗಳು ಸಾಕಷ್ಟಿವೆ. ಅದೇ ಕುಡಿತದ ಚಟದಿಂದ ಹೊರಬಂದು ಯಶಸ್ಸು (Success) ಸಾಧಿಸಿದವರ ಪಟ್ಟಿಯೂ ನಮ್ಮ ನಿಮ್ಮ ಮುಂದಿದೆ. ಕುಡಿತದ ದಾಸರಾದವರನ್ನು ಮತ್ತೆ ಸಮಾಜದ ಮುಖ್ಯವಾಹಿನಿಗೆ ತರುವ ಪ್ರಯತ್ನದಲ್ಲಿ ಕಳೆದ ಮೂರು ದಶಕಗಳಿಂದ ದುಡಿಯುತ್ತಿರುವ ಧರ್ಮಸ್ಥಳ (Dharmasthala) ಗ್ರಾಮಾಭಿವೃದ್ಧಿ ಯೋಜನೆ, ಅಖಿಲ ಕರ್ನಾಟಕ (Karnataka) ಜನಜಾಗೃತಿ ವೇದಿಕೆ ಈವರೆಗೆ ಲಕ್ಷಕ್ಕೂ ಮಿಕ್ಕಿದ ಕುಟುಂಬಗಳನ್ನು ಕುಡಿತದ ಚಟದಿಂದ ಹೊರ ತಂದು ಆ ಕುಟುಂಬಗಳು ಹೊಸ ಜೀವನ ಸಾಗಿಸುವಂತೆ ಮಾಡಿದೆ.
ಹೌದು ಈವರೆಗೆ ರಾಜ್ಯದಾದ್ಯಂತ ಸುಮಾರು 1990 ಮದ್ಯವರ್ಜನ ಶಿಬಿರಗಳನ್ನು ಮಾಡುವ ಮೂಲಕ 1.71 ಲಕ್ಷ ಜನರನ್ನು ಕುಡಿತದ ವ್ಯಸನದಿಂದ ಮುಕ್ತಗೊಳಿಸಿದೆ. ಹೀಗೆ ಕುಡಿತದ ಚಟದಿಂದ ಮುಕ್ತರಾದವರನ್ನು ಸಾರ್ವಜನಿಕವಾಗಿ ಅಭಿನಂಧಿಸುವ ಕಾರ್ಯಕ್ರಮಗಳನ್ನೂ ಜನಜಾಗೃತಿ ವೇದಿಕೆಯ ಮೂಲಕ ಆಯೋಜಿಸಲಾಗುತ್ತದೆ. ಕುಡಿತ ಬಿಟ್ಟ ವ್ಯಕ್ತಿಗಳಿಗೆ ಧರ್ಮಸ್ಥಳ ಧರ್ಮಾಧಿಕಾರಿ ಮತ್ತು ಜನಜಾಗೃತಿ ಯೋಜನೆಯ ರೂವಾರಿ ಡಾ.ಡಿ.ವೀರೇಂದ್ರ ಹೆಗಡೆಯವರ ಮುಂದೆ ಗೌರವಿಸುವ ಕಾರ್ಯವೂ ನಡೆಯುತ್ತೆ.
ಇಂತಹುದೇ ಒಂದು ಕಾರ್ಯಕ್ರಮವು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲೂ ನಡೆದಿದ್ದು, ಕುಡಿತದ ಚಟದಿಂದ ಹೊರಬಂದ ಹಲವರು ತಮ್ಮ ಜೀವನದಲ್ಲಾದ ಕಥೆಗಳನ್ನು ಹೇಳುವ ಮೂಲಕ ಕುಡಿತದ ವ್ಯಸನದ ಕರಾಳ ಮುಖವನ್ನು ಅನಾವರಣಗೊಳಿಸಿದ್ದಾರೆ. ಕುಡಿತದಿಂದ ಮನೆಯ ವಾತಾವರಣವನ್ನೇ ಹಾಳುಗೆಡವಿದ್ದ ವ್ಯಕ್ತಿ, ಮದ್ಯವರ್ಜನ ಶಿಬಿರಕ್ಕೆ ಸೇರದ ಬಳಿಕ ಯಾವ ರೀತಿಯಲ್ಲಿ ಬದಲಾಗುತ್ತಾನೆ ಎನ್ನುವುದಕ್ಕೆ ಹಲವಾರು ಉದಾಹರಣೆಗಳೂ ಈ ಕಾರ್ಯಕ್ರಮಗಳ ಮೂಲಕ ಅನಾವರಣಗೊಳ್ಳುತ್ತೆ.
Dakshina Kannada,Karnataka
October 17, 2025 11:05 AM IST