ಉತ್ತರ ಮತ್ತು ಮಧ್ಯ ಭಾರತದಲ್ಲಿ ತಾಪಮಾನದಲ್ಲಿ ತೀವ್ರ ಏರಿಕೆಯಾಗಲಿದ್ದು, ಈಶಾನ್ಯ ಮತ್ತು ದಕ್ಷಿಣದಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ನವದೆಹಲಿ: ದಿನದಿಂದ ದಿನಕ್ಕೆ ಬೇಸಿಗೆಯ ತಾಪಮಾನ ಏರಿಕೆಯಾಗುತ್ತಲೇ ಇದೆ. ಮುಂಬರುವ ದಿನಗಳಲ್ಲಿ ಹವಾಮಾನ ಯಾವಾಗ ಬೇಕಾದರೂ ಅನಿರೀಕ್ಷಿತ ಮತ್ತು ಅಸಮಂಜಸ ರೀತಿಯಲ್ಲಿ ಉತ್ತುಂಗಕ್ಕೆ ಏರುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ.
ಭಾರತೀಯ ಹವಾಮಾನ ಇಲಾಖೆಯ ಪ್ರಕಾರ, ದೆಹಲಿ, ಉತ್ತರ ಪ್ರದೇಶ, ಹರಿಯಾಣ ಮತ್ತು ಪಂಜಾಬ್ ಪ್ರದೇಶಗಳು ಬಿಸಿಲಿನ ಶಾಖವನ್ನು ಎದುರಿಸಲು ಸಿದ್ಧವಾಗುತ್ತಿವೆ. ಆದರೆ, ಜಮ್ಮು ಮತ್ತು ಕಾಶ್ಮೀರ ಮತ್ತು ಹಿಮಾಚಲ ಪ್ರದೇಶದಲ್ಲಿ ಇನ್ನೂ ಮಳೆ ಮತ್ತು ಹಿಮಪಾತ ಮುಂದುವರಿದಿದೆ.
ಮತ್ತೊಂದೆಡೆ, ಪೂರ್ವ ಮತ್ತು ಮಧ್ಯ ರಾಜ್ಯಗಳಾದ ಬಿಹಾರ, ಜಾರ್ಖಂಡ್ ಮತ್ತು ಒಡಿಶಾದಲ್ಲಿ ಬಿಸಿಲಿನ ಶಾಖ ಮತ್ತು ಮಳೆ ಮಿಶ್ರಿತ ವಾತಾವರಣ ಕಂಡುಬರುವ ಸಾಧ್ಯತೆಯಿದೆ. ಈಶಾನ್ಯ ಮತ್ತು ದಕ್ಷಿಣ ರಾಜ್ಯಗಳಲ್ಲಿ ಗುಡುಗು ಸಹಿತ ಮಳೆ ಮತ್ತು ಭಾರೀ ಮಳೆಯಾಗುವ ನಿರೀಕ್ಷೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.
ಉತ್ತರ ಭಾರತದಲ್ಲಿ ಹೆಚ್ಚುತ್ತಿರುವ ತಾಪಮಾನ: ಏರುತ್ತಿರುವ ಹೀಟ್ ವೇವ್ಸ್ ಮಧ್ಯೆ, ಮಾರ್ಚ್ ಅಂತ್ಯದ ವೇಳೆಗೆ ದೆಹಲಿ, ಹರಿಯಾಣ, ಪಂಜಾಬ್ ಮತ್ತು ಉತ್ತರ ಪ್ರದೇಶದಲ್ಲಿ 38 – 40 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುವ ಮುನ್ಸೂಚನೆಯನ್ನು ಐಎಂಡಿ ನೀಡಿದೆ.
ನವದೆಹಲಿ: ಮುಂದಿನ ಕೆಲವು ದಿನಗಳು ಬಿಸಿಲಿನಿಂದ ಕೂಡಿರಲಿದ್ದು, ಇಂದು ಮತ್ತು 25 ರಂದು ಕ್ರಮವಾಗಿ 34 ಡಿಗ್ರಿ ಸೆಲ್ಸಿಯಸ್ ಮತ್ತು 36 ಡಿಗ್ರಿ ಸೆಲ್ಸಿಯಸ್ ನಡುವೆ ತಾಪಮಾನವಿರಲಿದೆ.
ಗಾಜಿಯಾಬಾದ್ ಮತ್ತು NCR: ಆರೋಗ್ಯ ಇಲಾಖೆ ನೀಡಿರುವ ಹೀಟ್ವೇವ್ಸ್ ಸಲಹೆಯಲ್ಲಿ, ಬೆಳಗ್ಗೆ 11ರಿಂದ ಸಂಜೆ 4 ರವರೆಗಿನ ಅವಧಿಯಲ್ಲಿ ಸೂರ್ಯನ ನೇರ ಬೆಳಕಿನಿಂದ ತಪ್ಪಿಸಿಕೊಳ್ಳಿ, ಆದಷ್ಟು ಮನೆಯೊಳಗಿರಲು ಸೂಚಿಸಿದೆ.
ಪಂಜಾಬ್ ಮತ್ತು ಹರಿಯಾಣ: ಪ್ರಸ್ತುತ, ಪಾದರಸದ ಮಟ್ಟ ಹೆಚ್ಚುತ್ತಿದ್ದು, ಸಂರಕ್ಷಣಾ ತಜ್ಞರು ಗೋಧಿ ಮತ್ತು ಸಾಸಿವೆ ಬೆಳೆಗಳ ಮೇಲೆ ನೀರಿನ ಕೊರತೆ ಉಂಟಾಗುವ ಭಯ ವ್ಯಕ್ತಪಡಿಸಿದ್ದಾರೆ.
ಉತ್ತರ ಪ್ರದೇಶ: ಉತ್ತರ ಪ್ರದೇಶದ ಪಶ್ಚಿಮ ಭಾಗವನ್ನು ಹೊರತುಪಡಿಸಿ ರಾಜ್ಯದ ಹೆಚ್ಚಿನ ಭಾಗಗಳು ಶುಷ್ಕವಾಗಿರುತ್ತವೆ. ಪಶ್ಚಿಮ ಭಾಗದಲ್ಲಿ ಸ್ವಲ್ಪ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಣೆ ಮುನ್ಸೂಚನೆ ನೀಡಿದೆ.
ಹಿಮಾಲಯನ್ ರಾಜ್ಯಗಳಲ್ಲಿ ಮಳೆ ಜೊತೆಗೆ ಹಿಮಪಾತ: ಹಿಮ ರಾಜ್ಯಗಳಲ್ಲಿ ಮಳೆ ಮತ್ತು ಹಿಮಪಾತವಾಗುತ್ತಿದೆ. ಜಮ್ಮು ಮತ್ತು ಕಾಶ್ಮೀರ ಮತ್ತು ಹಿಮಾಚಲ ಪ್ರದೇಶದಲ್ಲಿ ಮುಂದಿನ ಎರಡು ದಿನಗಳಲ್ಲಿ ಹಗುರದಿಂದ ಮಧ್ಯಮ ಹಿಮಪಾತವಾಗಲಿದೆ. ಇದಕ್ಕೆ ವಿರುದ್ಧವಾಗಿ, ಬಯಲು ಪ್ರದೇಶಗಳಲ್ಲಿ ತಾಪಮಾನದಲ್ಲಿ ಹೆಚ್ಚಳವಾಗಿದೆ.
ಮುನ್ಸೂಚನೆಯ ಪ್ರಕಾರ, ಉತ್ತರಾಖಂಡದ ಕೆಲವು ಪ್ರದೇಶಗಳಲ್ಲಿ ಮಳೆ ಮತ್ತು ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಶಿಮ್ಲಾ, ಮನಾಲಿ ಮತ್ತು ಗುಲ್ಮಾರ್ಗ್ನ ಪ್ರವಾಸಿಗರು ಹಿಮಪಾತದಿಂದ ಉಂಟಾಗುವ ರಸ್ತೆ ಅಡಚಣೆಗಳಿಂದ ತಪ್ಪಿಸಿಕೊಳ್ಳಲು ಪ್ರಯಾಣ ಪ್ರಾರಂಭಿಸುವ ಮೊದಲು ಹವಾಮಾನದ ಬಗ್ಗೆ ವಿಚಾರಿಸಲು ಸೂಚಿಸಲಾಗಿದೆ.
ರಾಜಸ್ಥಾನ ಮತ್ತು ಬಿಹಾರ: ಈ ರಾಜ್ಯಗಳಲ್ಲಿ ಉಷ್ಣತೆ ಹೆಚ್ಚುತ್ತಿದ್ದು, ಮಳೆ ಸ್ವಲ್ಪಮಟ್ಟಿಗೆ ನೆಮ್ಮದಿ ತರುವ ಸಾಧ್ಯತೆಯಿದೆ. ಸಾಮಾನ್ಯವಾಗಿ, ಮಧ್ಯಾಹ್ನದ ನಂತರ ಮಳೆ ಬೀಳಲಿದೆ, ಅದರ ಬೆನ್ನಲ್ಲೇ ಗಾಳಿ ಬೀಸಲಿದ್ದು, ಅದು ತಾಪಮಾನದಲ್ಲಿ ಸ್ವಲ್ಪ ಇಳಿಕೆ ತರಬಹುದು. ಆದರೂ, ನಂತರ ಮತ್ತೆ ಅದೇ ಉಷ್ಣತೆ ಮರಳುತ್ತದೆ. ಅಲ್ಲದೇ, ಇದರ ನಂತರ ಶೀಘ್ರದಲ್ಲೇ ಬಿಸಿಲಿನ ಪರಿಸ್ಥಿತಿ ನೆಲೆಗೊಳ್ಳಲಿದೆ.
ಮಳೆ ಇಲ್ಲದ ಸಮಯದಲ್ಲಿ ಗರಿಷ್ಠ ತಾಪಮಾನ ಹೆಚ್ಚಾಗುವ ಸಾಧ್ಯತೆಯಿದೆ. ಆದರೆ ಮಾರ್ಚ್ ಇಂದು ನಾಳೆ ಮಳೆಯಾಗುವ ಸಾಧ್ಯತೆ ಇದೆ. ಇದು ಗರಿಷ್ಠ ತಾಪಮಾನದ ಮೇಲೆ ಸಕಾರಾತ್ಮಕ ಪ್ರಭಾವ ಬೀರಬಹುದು. ಎರಡೂ ಪ್ರದೇಶಗಳ ಅಧಿಕಾರಿಗಳು ಸೂರ್ಯನ ತಾಪಮಾನಕ್ಕೆ ಸಂಬಂಧಿಸಿ ಆರೋಗ್ಯ ಅಪಾಯಗಳು ಮತ್ತು ಅನಿರೀಕ್ಷಿತ ಹವಾಮಾನದಿಂದಾಗಿ ಬೆಳೆ ಹಾನಿಯ ಬಗ್ಗೆ ಜಾಗರೂಕರಾಗಿರುವಂತೆ ಸಲಹೆ ನೀಡಿದ್ದಾರೆ.
ಪೂರ್ವ ಮತ್ತು ಮಧ್ಯ ಭಾರತ: ಪೂರ್ವ ಮತ್ತು ಮಧ್ಯ ಭಾರತದ ಅನೇಕ ರಾಜ್ಯಗಳಲ್ಲಿ ಮಧ್ಯಮ ಮಳೆಯಾಗುವ ನಿರೀಕ್ಷೆಯಿದೆ. ಜಾರ್ಖಂಡ್ ಮತ್ತು ಒಡಿಶಾದಲ್ಲಿ, ಮಾರ್ಚ್ 22 ರವರೆಗೆ ಗುಡುಗು, ಮಿಂಚು ಮತ್ತು ಬಲವಾದ ಗಾಳಿ(ಗಂಟೆಗೆ 30-40 ಕಿಮೀ) ಸಹಿತ ಮಳೆಯಾಗುವ ಸಾಧ್ಯತೆಯಿದೆ. ಪೂರ್ವ ಮಧ್ಯಪ್ರದೇಶ, ವಿದರ್ಭ ಮತ್ತು ಛತ್ತೀಸ್ಗಢದಲ್ಲಿ ಮಾರ್ಚ್ 20-22 ರವರೆಗೆ ಚದುರಿದ ಆಲಿಕಲ್ಲು ಮತ್ತು ಗುಡುಗು ಸಹಿತ ಮಳೆಯಾಗಲಿದೆ.
ಈಶಾನ್ಯ ಭಾರತದಲ್ಲಿ ಭಾರೀ ಮಳೆ: ಮುಂದಿನ ಐದು ದಿನಗಳಲ್ಲಿ ಈಶಾನ್ಯ ರಾಜ್ಯಗಳಲ್ಲಿ ವ್ಯಾಪಕ ಮಳೆಯಾಗಲಿದೆ. ಅರುಣಾಚಲ ಪ್ರದೇಶದಲ್ಲಿ ಮಾರ್ಚ್ 21-22 ರಂದು ಭಾರೀ ಮಳೆ ಮತ್ತು ಹಿಮಪಾತವಾಗಲಿದೆ. ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಮತ್ತು ತ್ರಿಪುರಾದಲ್ಲಿ ಗುಡುಗು, ಬಲವಾದ ಗಾಳಿ ಸಹಿತ ಮಳೆಯಾಗಲಿದೆ. ದಕ್ಷಿಣ ಅಸ್ಸಾಂನಲ್ಲಿ ಮಾರ್ಚ್ ಇಂದು ಕೆಲವು ಭಾಗಗಳಲ್ಲಿ ಆಲಿಕಲ್ಲು ಮಳೆಯಾಗುವ ಸಾಧ್ಯತೆಯಿದೆ.
ದಕ್ಷಿಣ ಭಾರತದ ತಮಿಳುನಾಡು, ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಮಳೆ: ಉತ್ತರ ಭಾರತಕ್ಕಿಂತ ಭಿನ್ನವಾಗಿ, ಮುಂದಿನ ಕೆಲವು ದಿನಗಳಲ್ಲಿ ದಕ್ಷಿಣ ಭಾರತದಲ್ಲಿ ಸ್ಪಲ್ಪ ಪ್ರಮಾಣದಿಂದ ಮಧ್ಯಮವರೆಗೆ ಮಳೆಯಾಗಲಿದೆ. ಮಾರ್ಚ್ 22-24 ರ ನಡುವೆ ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್ಗಳಲ್ಲಿ ತುಂತುರು ಮಳೆಯಾಗಲಿದೆ.
ಕರಾವಳಿ ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿ ಗುಡುಗು ಗಾಳಿ ಸಹಿತ (ಗಂಟೆಗೆ 30-50 ಕಿಮೀ) ಮಳೆಯಾಗಲಿದೆ. ತೆಲಂಗಾಣದ ಉತ್ತರ ಜಿಲ್ಲೆಗಳಲ್ಲಿ ಇಂದು ಮತ್ತು ದಕ್ಷಿಣ ಜಿಲ್ಲೆಗಳಲ್ಲಿ ನಾಳೆ ಆಲಿಕಲ್ಲು ಮಳೆಯಾಗುವ ಸಾಧ್ಯತೆಯಿದೆ. ಕೇರಳ ಮತ್ತು ದಕ್ಷಿಣ ಒಳನಾಡು ಕರ್ನಾಟಕದಲ್ಲಿ ಮುಂದಿನ ಐದು ದಿನಗಳಲ್ಲಿ ಬೆಚ್ಚಗಿನ ಮತ್ತು ಆರ್ದ್ರತೆಯಿಂದ ಕೂಡಿದ ವಾತಾವರಣವಿರಲಿದೆ. ಜೊತೆಗೆ ಗುಡುಗು ಸಹಿತ ಆಲಿಕಲ್ಲು ಮಳೆಯಾಗುವ ಸಾಧ್ಯತೆ ಇದೆ. ಜೂನ್ 5 ರಂದು ಕೇರಳಕ್ಕೆ ನೈಋತ್ಯ ಮಾನ್ಸೂನ್ ಅಪ್ಪಳಿಸಲಿದೆ. ಈ ಬಾರಿ ಕೇವಲ ಮೂರು ದಿನಗಳಿಗೆ ಮುಂಚೆಯೇ ಆಗಮಿಸಲಿದೆ.
ಸುರಕ್ಷತಾ ಎಚ್ಚರಿಕೆ: ಭಾರತದ ವಿವಿಧ ರಾಜ್ಯಗಳಲ್ಲಿ ಹವಾಮಾನ ಬೇರೆ ಬೇರೆ ರೀತಿಯಾಗಿದ್ದು, ಮಾನವ ಜೀವನದ ಮೇಲೆ ಪರಿಣಾಮ ಬೀರಿದೆ. ಆಯುಷ್ ಸಚಿವಾಲಯ, ಬಿಸಿಲಿನ ತಾಪಮಾನ ಏರುತ್ತಿರುವ ವಾತಾವರಣದಲ್ಲಿ ಜೀವವನ್ನು ಹೇಗೆ ಕಾಪಾಡಿಕೊಳ್ಳುವುದು ಎಂಬುದರ ಕುರಿತು ಇಡೀ ಜನಸಂಖ್ಯೆಯನ್ನು ಗುರಿಯಾಗಿಟ್ಟುಕೊಂಡು ರಾಷ್ಟ್ರವ್ಯಾಪಿ ಜಾಗೃತಿ ಅಭಿಯಾನವನ್ನು ಪ್ರಾರಂಭಿಸಿದೆ.
ಹೀಟ್ವೇವ್ಸ್ ಸಮಯದಲ್ಲಿ ಸುರಕ್ಷಿತವಾಗಿರುವುದು ಹೇಗೆ?:
- ದೇಹ ನಿರ್ಜಲೀಕರಣವಾಗದಂತೆ ಕಾಪಾಡಿಕೊಳ್ಳಿ
- ನಿಯಮಿತವಾಗಿ ನೀರಿನ ಕುಡಿಯುತ್ತಿರಬೇಕು
- ಕೆಫೀನ್ ಭರಿತ ಮತ್ತು ಆಲ್ಕೋಹಾಲ್ ಪಾನೀಯಗಳನ್ನು ಸಂಪೂರ್ಣವಾಗಿ ತಪ್ಪಿಸಬೇಕು
- ಸೂರ್ಯನ ನೇರ ಬೆಳಕಿನಿಂದ ಆದಷ್ಟು ತಪ್ಪಿಸಿಕೊಳ್ಳಿ- ಬೆಳಗ್ಗೆ 11 ರಿಂದ ಸಂಜೆ 4 ರವರೆಗೆ ಹೊರಗೆ ಹೋಗುವುದನ್ನು ತಪ್ಪಿಸಿ.
- ಹಗುರವಾದ ಬಟ್ಟೆಗಳನ್ನು ಧರಿಸಿ: ಹತ್ತಿಯಿಂದ ಮಾಡಿದ ಹಗುರವಾದ, ಸಡಿಲವಾದ ಲಿನಿನ್ ಬಟ್ಟೆಗಳನ್ನು ಬಳಸಿ. ಮತ್ತು ಹೊರಗೆ ಹೋಗುವ ಮೊದಲು ಸನ್ಸ್ಕ್ರೀನ್ ಹಚ್ಚುವುದನ್ನು ಖಚಿತಪಡಿಸಿಕೊಳ್ಳಿ.
- ತಂಪಾದ ವಾತಾವರಣದಲ್ಲಿರುವಂತೆ ನೋಡಿಕೊಳ್ಳಿ: ಹವಾನಿಯಂತ್ರಣವನ್ನು ಬಳಸುವುದು ಅತ್ಯಂತ ಪರಿಣಾಮಕಾರಿ ಮಾರ್ಗ
- ಹೀಟ್ಸ್ಟ್ರೋಕ್ ಲಕ್ಷಣಗಳ ಬಗ್ಗೆ ಎಚ್ಚರವಿರಲಿ: ತಲೆತಿರುಗುವಿಕೆ, ವಾಕರಿಕೆ, ಗೊಂದಲ ಅಥವಾ ಮೂರ್ಛೆ ಮುಂತಾದ ಸಂಕೇತಗಳು ಕಂಡುಬಂದಲ್ಲಿ ತುರ್ತಾಗಿ ವೈದ್ಯರನ್ನು ಸಂಪರ್ಕಿಸಿ