ಉಕ್ರೇನ್-ರಷ್ಯಾ ಯುದ್ಧದಲ್ಲಿ ಮಡಿದ ಮಗನ ನೆನಪಿಗಾಗಿ ಶಿವಧ್ಯಾನ ಮಂದಿರ ನಿರ್ಮಿಸಿದ ಪೋಷಕರು – SHIVA MEDITATION TEMPLE

 

ಉಕ್ರೇನ್-ರಷ್ಯಾ ಯುದ್ಧದಲ್ಲಿ ಮಡಿದ ಮಗನ ನೆನಪಿಗಾಗಿ ಶಿವಧ್ಯಾನ ಮಂದಿರ ನಿರ್ಮಿಸಿದ ಪೋಷಕರು – SHIVA MEDITATION TEMPLE

ಎಂಬಿಬಿಎಸ್ ಓದಿ ವೈದ್ಯನಾಗಬೇಕು ಎನ್ನುವ ಮಹದಾಸೆ ಹೊತ್ತು ಯುದ್ಧಪೀಡಿತ ಉಕ್ರೇನ್​ಗೆ ತೆರಳಿದ್ದ ನವೀನ್ ನಿಧನವಾಗಿ ಇಂದಿಗೆ 3 ವರ್ಷ. ಮಗನ ನೆನಪಿಗೋಸ್ಕರ ಶಿವಧ್ಯಾನ ಮಂದಿರ ಕಟ್ಟಿಸುವ ಮೂಲಕ ಆತನನ್ನು ಸ್ಮರಿಸುತ್ತಿದ್ದಾರೆ.

ಹಾವೇರಿ : ಉಕ್ರೇನ್​ನಲ್ಲಿ ವೈದ್ಯಕೀಯ ಶಿಕ್ಷಣ ಓದುತ್ತಿದ್ದ ಹಾವೇರಿ ಜಿಲ್ಲೆ, ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದ ಪ್ರತಿಭಾನ್ವಿತ ವಿದ್ಯಾರ್ಥಿ ನವೀನಗೌಡ ಸಾವಿಗೀಡಾಗಿ ಇಂದಿಗೆ 3 ವರ್ಷ. ರಷ್ಯಾ-ಉಕ್ರೇನ್ ಯುದ್ಧ ಈ ಯುವಕನನ್ನು ಬಲಿ ಪಡೆದಾಗ ನಾಡಿಗೆ ನಾಡೇ ಕಣ್ಣೀರು ಹಾಕಿತ್ತು.

ಶೇಖರಗೌಡ ಮತ್ತು ವಿಜಯಲಕ್ಷ್ಮಿ ಪುತ್ರನಾಗಿ ಜನಿಸಿದ್ದ ನವೀನ್‌ಗೆ ಎಂಬಿಬಿಎಸ್ ಓದಿ ವೈದ್ಯನಾಗಬೇಕು, ಬಡವರ ಸೇವೆ ಮಾಡಬೇಕು ಎನ್ನುವ ಮಹದಾಸೆ ಇತ್ತು. ಅದರಂತೆ ಪಿಯುಸಿಯಲ್ಲಿ ಅಧಿಕ ಅಂಕಗಳನ್ನು ಪಡೆದ ನವೀನ್‌, ವೈದ್ಯಕೀಯ ಪ್ರವೇಶ ಪರೀಕ್ಷೆ ಕೂಡ ಬರೆದಿದ್ದರು. ಆದರೆ, ಕಡಿಮೆ ಅಂಕ ಬಂದಿದ್ದರಿಂದ ಸರ್ಕಾರಿ ಸೀಟು ಸಿಗಲಿಲ್ಲ. ಖಾಸಗಿಯಲ್ಲಿ ಎಂಬಿಬಿಎಸ್ ಓದಬೇಕೆಂದರೆ ಸಾಕಷ್ಟು ಹಣ ಬೇಕು. ಅಷ್ಟು ಹಣ ಹೊಂದಿಕೆಯಾಗದ್ದರಿಂದ ಆಗ ಅವರ ಗಮನಕ್ಕೆ ಬಂದಿದ್ದೇ

ಕೇವಲ 25 ರಿಂದ 50 ಲಕ್ಷ ರೂಪಾಯಿಯಲ್ಲಿ ಎಂಬಿಬಿಎಸ್ ಮಾಡಬಹುದೆಂದು ಉಕ್ರೇನ್‌ ದೇಶದ ಕಿವ್‌ ನಗರದಲ್ಲಿ ಪ್ರವೇಶ ಪಡೆದು ವೈದ್ಯಕೀಯ ವೃತ್ತಿ ಸೇರಬೇಕೆಂದುಕೊಂಡು ವ್ಯಾಸಂಗಕ್ಕೂ ಮುಂದಾದರು. ಇನ್ನೇನು ಕೆಲವೇ ಕೆಲವು ತಿಂಗಳು ಎಂಬಿಬಿಎಸ್ ಪದವಿ ಮುಗಿಸಲು ಬಾಕಿ ಇದ್ದವು. ಅಷ್ಟರಲ್ಲಿ ರಷ್ಯಾ ಮತ್ತು ಉಕ್ರೇನ್‌ ನಡುವೆ ಯುದ್ಧ ಪ್ರಾರಂಭವಾಗಿತ್ತು. ಭಾರತೀಯರೆಲ್ಲ ಉಕ್ರೇನ್‌ ತೊರೆದು ಸ್ವದೇಶಕ್ಕೆ ಬರಲಾರಂಭಿಸಿದ್ದರು. ಅದರಂತೆ ನವೀನಗೌಡ ಸಹ ತನ್ನ ಸಂಗಡಿಗರ ಜೊತೆ ಭಾರತದ ಧ್ವಜ ಹಿಡಿದು ಭಾರತಕ್ಕೆ ಮರಳುತ್ತಿದ್ದರು. ಆದರೆ, ಕಾರ್ಕಿವ್ ನಗರದಲ್ಲಿದ್ದ ತನ್ನ ಸ್ನೇಹಿತರ ಹಸಿವು ನೀಗಿಸಲು ಉಪಹಾರ ತರಲೆಂದು ಹೊರಗೆ ಹೋದಾಗ ರಷ್ಯಾ ಹಾಕಿದ ಬಾಂಬ್ ನವೀನಗೌಡ ಅವರನ್ನು ಬಲಿ ಪಡೆದಿತ್ತು.

ವಿಪರ್ಯಾಸವೆಂದರೆ ಭಾರತದಲ್ಲಿ ಅಂದು ಮಹಾಶಿವರಾತ್ರಿ ಆಚರಿಸಲಾಗುತ್ತಿತ್ತು. ಶಿವರಾತ್ರಿ ಎಂದರೆ ನವೀನಗೌಡ ಅವರಿಗೆ ಎಲ್ಲಿಲ್ಲದ ಭಕ್ತಿ. ಈ ದಿನ ಉಪವಾಸ, ಜಪ ತಪ ಮಾಡುತ್ತಿದ್ದ ನವೀನ ಅಂದೇ ಬಾರದ ಲೋಕಕ್ಕೆ ತೆರಳಿದ್ದು ವಿಧಿಲಿಖಿತ! ಉಕ್ರೇನ್‌-ರಷ್ಯಾ ಯುದ್ಧದಲ್ಲಿ ಮಡಿದ ಏಕೈಕ ಭಾರತೀಯ ವಿದ್ಯಾರ್ಥಿ ನವೀನಗೌಡ ಅವರಾಗಿದ್ದರು. ಸಂಜೆಯ ವೇಳೆಗೆ ಮಗನ ಸಾವಿನ ಸುದ್ದಿ ಕೇಳಿದ್ದ ಶೇಖರಗೌಡ-ವಿಜಯಲಕ್ಷ್ಮಿ ದಂಪತಿಗೆ ಪ್ರಧಾನಿ ನರೇಂದ್ರ ಮೋದಿ, ಅಂದಿನ ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ನಾಡಿನ ಹಲವು ಮಠಾಧೀಶರು ಸಾಂತ್ವನ ಹೇಳಿದ್ದರು. ಸ್ವತಃ ಪ್ರಧಾನಿ ಅವರೇ ಮೃತ ನವೀನಗೌಡ ತಂದೆಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ನವೀನ್​ ಜೊತೆ ವ್ಯಾಸಂಗಕ್ಕೆ ತೆರಳಿದ್ದ ಜಿಲ್ಲೆಯ ವಿದ್ಯಾರ್ಥಿಗಳ ಪೋಷಕರು ತಮ್ಮ ಮಕ್ಕಳ ಪರಿಸ್ಥಿತಿ ನೆನೆದು ಕುಗ್ಗಿಹೋಗಿದ್ದರು. ಆದರೆ, ಅವರೆಲ್ಲ ಸುರಕ್ಷಿತವಾಗಿ ವಾಪಸ್ ಬಂದರೆ ನವೀನ್​ ಸಾವು ಕಂಡರು. ಆತನ ಮೃತದೇಹವಾದರೂ ಭಾರತಕ್ಕೆ ಬರುವುದೋ ಇಲ್ಲವೋ ಎನ್ನುವ ಆತಂಕವಿತ್ತು. ಕೊನೆಗೂ 23 ಮಾರ್ಚ್​ 2022ರಂದು ಆತನ ಮೃತದೇಹ ಸ್ವಗ್ರಾಮ ಚಳಗೇರಿಗೆ ಆಗಮಿಸಿತ್ತು.

ಭಾರತ ದೇಶದ ವಿದೇಶಾಂಗ ಇಲಾಖೆಯ ಪ್ರಯತ್ನದಿಂದ ನವೀನಗೌಡನ ಮೃತದೇಹ ಭಾರತಕ್ಕೆ ಬಂದು ತಲುಪಿತ್ತು. ಪುತ್ರನನ್ನು ಕಳೆದುಕೊಂಡು ಶೋಕಸಾಗರದಲ್ಲಿ ಮುಳುಗಿದ್ದ ಕುಟುಂಬ ಮನೆಯಲ್ಲಿ ನವೀನನ ಮೃತದೇಹವನ್ನು ಇಟ್ಟು ನಂತರ ಆತನ ಪಾರ್ಥಿವ ಶರೀರದ ಅಂತಿಮಯಾತ್ರೆ ನಡೆಸಲಾಗಿತ್ತು. ವೈದ್ಯಕೀಯ ಸಂಶೋಧನೆ ಮತ್ತು ಶಿಕ್ಷಣದ ಉದ್ದೇಶಕ್ಕಾಗಿ ಪುತ್ರನ ಮೃತದೇಹವನ್ನು ಶೇಖರಗೌಡ ದಂಪತಿ ದಾವಣಗೆರೆ ಆಸ್ಪತ್ರೆಗೆ ದಾನ ಮಾಡುವುದರ ಮೂಲಕ ಸಾರ್ಥಕತೆ ಮೆರೆದಿದ್ದು ಇಂದಿಗೂ ಮಾದರಿಯಾಗಿದೆ.

ಭವಿಷ್ಯದಲ್ಲಿ ಬಡವರ ಸೇವೆಯ ಕನಸು ಕಂಡಿದ್ದ ನವೀನ್​; ಆದರೆ, ನವೀನಗೌಡ ಕಟ್ಟಿಸಬೇಕಾಗಿದ್ದ ಆಸ್ಪತ್ರೆ, ಬಡವರ ಸೇವೆಯ ಕನಸು ಕನಸಾಗಿಯೇ ಹೋಯಿತು. ಇದೀಗ ಆಸ್ಪತ್ರೆ ಕಟ್ಟಿಸಲಾಗದಿದ್ದರೇ ಏನಾಯಿತು? ಅವನ ಹೆಸರಿನಲ್ಲಿ ಶಿವಧ್ಯಾನ ಮಂದಿರ ಕಟ್ಟಿಸೋಣವೆಂದು ತಿಳಿದು ನವೀನಗೌಡನ ತಂದೆ-ತಾಯಿ ಮನೆಯ ಪಕ್ಕದಲ್ಲಿ ಒಂದು ಸುಂದರ ಶಿವಧ್ಯಾನ ಮಂದಿರ ಕಟ್ಟಿಸಿದ್ದಾರೆ. ಸುಮಾರು 21 ಅಡಿ ಉದ್ದ, 17 ಅಡಿ ಅಗಲ ಜಾಗದಲ್ಲಿ ಶಿವಧ್ಯಾನ ಮಂದಿರ ಕಟ್ಟಿಸಿದ್ದು, ಶಿವರಾತ್ರಿಯ ದಿನವೇ ಲೋಕಾರ್ಪಣೆ ಮಾಡಿದ್ದಾರೆ. ಶಿವಧ್ಯಾನ ಮಂದಿರದಲ್ಲಿ ಎರಡೂವರೆ ಅಡಿಯ ಶಿವಲಿಂಗವನ್ನು ಸ್ಥಾಪಿಸಿದ್ದಾರೆ. ಅದರ ಪಕ್ಕದಲ್ಲಿ ಮೃತ ಪುತ್ರ ನವೀನಗೌಡನ ಭಾವಚಿತ್ರ ಹಾಕಿ ತಮ್ಮ ಜೀವನ ದೂಡುತ್ತಿದ್ದಾರೆ.

”ನಮ್ಮ ಮಗ ವೈದ್ಯನಾಗಿ ಆಸ್ಪತ್ರೆ ಕಟ್ಟಿಸುವ ಕನಸು ಕಂಡಿದ್ದ. ಆದರೆ, ವಿಧಿಯಾಟದಿಂದ ಅದು ಸಾಧ್ಯವಾಗಲಿಲ್ಲ. ಆದರೆ, ಅವನ ನೆನಪಿಗೋಸ್ಕರ ಶಿವಧ್ಯಾನಮಂದಿರ ಕಟ್ಟಿಸಿದ್ದೇವೆ. ಸುಮಾರು 5 ಲಕ್ಷ ರೂಪಾಯಿ ವೆಚ್ಚದಲ್ಲಿ ಮಂದಿರ ನಿರ್ಮಿಸಿದ್ದೇವೆ. ದೇಹಕ್ಕಾಗುವ ಕಾಯಿಲೆ ಮತ್ತು ರೋಗಗಳಿಗೆ ಮಾನಸಿಕ ಆರೋಗ್ಯ ಮುಖ್ಯ. ಈ ಮಾನಸಿಕ ಆರೋಗ್ಯಕ್ಕೆ ಮುಖ್ಯವಾಗಿದ್ದು ಧ್ಯಾನ. ಈ ಧ್ಯಾನ ಮಂದಿರ ನಿರ್ಮಿಸುವ ಮೂಲಕ ಮಾನಸಿಕ, ದೈಹಿಕ ಕಾಯಿಲೆಗಳಿಗೆ ಪರಿಹಾರ ಕಂಡುಕೊಳ್ಳುವ ಮಾರ್ಗ ಹುಡುಕಿಕೊಂಡಿದ್ದೇವೆ. ದಿನನಿತ್ಯ ಧ್ಯಾನ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಇಲ್ಲಿ ನಡೆಯುತ್ತವೆ. ನಮಗೆ ಬೇಜಾರಾದಾಗಲೆಲ್ಲಾ ಮತ್ತು ಮಗ ನೆನಪಾದಗಲೆಲ್ಲಾ ಈ ಶಿವಧ್ಯಾನ ಮಂದಿರಕ್ಕೆ ಆಗಮಿಸಿ ಒಂದಷ್ಟು ಹೊತ್ತು ಕುಳಿತುಕೊಳ್ಳುತ್ತೇವೆ. ಅಗಲಿದ ಮಗನ ಆಸೆಯಂತೂ ಈಡೇರಲಿಲ್ಲ. ಕೊನೆ ಪಕ್ಷ ಈ ರೀತಿಯಾದರೂ ಸಾರ್ವಜನಿಕರಿಗೆ ಸಹಾಯವಾಗುವ ಕೆಲಸ ಮಾಡಿದ್ದು ಸ್ವಲ್ಪಮಟ್ಟಿನ ಬೇಸರ ಮರಿಸಿದೆ” ಎನ್ನುತ್ತಾರೆ ಮೃತ ನವೀನ್​ಗೌಡ ಅವರ ತಂದೆ ಶೇಖರಗೌಡ ಮತ್ತು ತಾಯಿ ವಿಜಯಲಕ್ಷ್ಮಿ.