‘ನಮ್ಮ ನಾಯಕರು ಬೆದರಿಕೆ ಹಾಕುವುದನ್ನು ನಿಲ್ಲಿಸಬೇಕು’: ನಟಿ ರಮ್ಯಾ – RAMYA

 

‘ನಮ್ಮ ನಾಯಕರು ಬೆದರಿಕೆ ಹಾಕುವುದನ್ನು ನಿಲ್ಲಿಸಬೇಕು’: ನಟಿ ರಮ್ಯಾ – RAMYA

ಕಲಾವಿದರ ನಟ್ ಬೋಲ್ಟ್ ಟೈಟ್ ಮಾಡೋ ಡಿಸಿಎಂ ಡಿಕೆ ಶಿವಕುಮಾರ್​​ ಹೇಳಿಕೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ರಾಜಕಾರಣಿಗಳು ಹೇಳಿಕೆ ಕೊಡುತ್ತಿದ್ದು, ನಟಿ ರಮ್ಯಾ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ನೆಲ, ಜಲ, ಭಾಷೆಯ ವಿಚಾರವಾಗಿ ಕನ್ನಡ ಕಲಾವಿದರಿಗೆ ಇತ್ತೀಚೆಗಷ್ಟೇ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾ‌ರ್​ ಎಚ್ಚರಿಕೆ ನೀಡಿದ್ದರು. ಎಲ್ಲಿ ನಟ್ ಬೋಲ್ಟ್ ಟೈಟ್ ಮಾಡಿ ರಿಪೇರಿ ಮಾಡಬೇಕೋ ಮಾಡುತ್ತೇವೆ ಎಂಬ ಡಿಕೆಶಿ ಹೇಳಿಕೆ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಈ ಹೇಳಿಕೆಯನ್ನು ಚಂದನವನದ ಖ್ಯಾತ ನಟಿ ರಮ್ಯಾ ಸಮರ್ಥಿಸಿಕೊಂಡಿದ್ದರು. ರಾಜಕಾರಣಿಗಳು ಪ್ರತಿಕ್ರಿಯಿಸುತ್ತಿದ್ದಾರೆ. ಇದೀಗ ಮತ್ತೊಮ್ಮೆ ತಮ್ಮ ಇನ್​ಸ್ಟಾಗ್ರಾಮ್​ ಸ್ಟೋರಿ ಮೂಲಕ ರಿಯಾಕ್ಟ್​ ಮಾಡಿದ್ದಾರೆ ಕಾಂಗ್ರೆಸ್​​ ನಾಯಕಿ ರಮ್ಯಾ.

ರಮ್ಯಾ ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಏನಿದೆ ? ”ಡಿಕೆ ಶಿವಕುಮಾರ್ ಅವರು ಸಂಪೂರ್ಣ ತಪ್ಪಿಲ್ಲ. ಕಲಾವಿದರಾಗಿ ನಾವು ಸಾರ್ವಜನಿಕರ ಮೇಲೆ ವ್ಯಾಪಕ ಪ್ರಭಾವ ಬೀರುತ್ತೇವೆ (ವೈಯಕ್ತಿಕ ಅಭಿಪ್ರಾಯ). ನಮ್ಮ ಧ್ವನಿ ಏರಿಸುವುದು ಕಡ್ಡಾಯ (ನೀವು ಯಾವುದೇ ವಿಷಯದ ಪರವಾಗಿ ಮಾತನಾಡಬಹುದು). ಪ್ರಜಾಪ್ರಭುತ್ವಕ್ಕೆ ಸಂಭಾಷಣೆ ಅತ್ಯಗತ್ಯ. ಗೋಕಾಕ್ ಆಂದೋಲನಕ್ಕೆ ಡಾ.ರಾಜ್‌ಕುಮಾರ್ ಹೇಗೆ ಬೆಂಬಲ ನೀಡಿದರೆಂಬುದು ಇದಕ್ಕೆ ಒಂದು ಉತ್ತಮ ಉದಾಹರಣೆ”.

”ಒಂದು ವಿಷಯಕ್ಕೆ ತಮ್ಮ ಹೆಸರನ್ನು ನೀಡಬೇಕೇ ಅಥವಾ ಬೇಡವೇ ಎಂಬುದು ಕಲಾವಿದರಿಗೆ ಬಿಟ್ಟದ್ದು. ಆದರೆ ಯಾವುದೇ ಸಂದರ್ಭದಲ್ಲಿ ಹೀಗೇ ಮಾಡಿ ಎಂದು ಬೆದರಿಕೆ ಹಾಕಬಾರದು. ಉದ್ಯಮದಲ್ಲಿರುವ ಹೆಚ್ಚಿನ ಸ್ನೇಹಿತರು ತಮ್ಮ ಅಭಿಪ್ರಾಯಗಳನ್ನು ನೇರವಾಗಿ ಹೇಳಿಕೊಳ್ಳುತ್ತಾರೆ. ಆದರೆ ನಿರಂತರ ಟ್ರೋಲಿಂಗ್‌ಗೆ ಒಳಗಾಗುವುದರಿಂದ ಮತ್ತು ಅವರ ಕೆಲಸ-ಸಿನಿಮಾಗಳು/ಅನುಮೋದನೆಗಳ ಮೇಲೆ ಪರಿಣಾಮ ಬೀರುವುದರಿಂದ ಸಾರ್ವಜನಿಕ ಹೇಳಿಕೆಗಳನ್ನು ನೀಡುವುದರಿಂದ ದೂರ ಸರಿಯುತ್ತಾರೆ. ನಟರು, ವಿಶೇಷವಾಗಿ ಮಹಿಳಾ ಕಲಾವಿದರು ರಾಜಕಾರಣಿಗಳ ಟಾರ್ಗೆಟ್​​​ ಆಗಿದ್ದಾರೆ. ನಮ್ಮ ನಾಯಕರು ಬೆದರಿಕೆ ಹಾಕುವುದರಿಂದ ದೂರವಿರಿ ಎಂದು ಒತ್ತಾಯಿಸುತ್ತಿದ್ದೇನೆ. ಹಾಗಾಗಿಯೇ ಅವರು ಮಾತನಾಡುವುದಿಲ್ಲ” ಎಂದು ಬರೆದುಕೊಂಡಿದ್ದಾರೆ.

ಡಿಸಿಎಂ ಡಿಕೆಶಿ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದ ತಾರೆ, “ಸಾಹೇಬ್ರು ಹೇಳಿರುವುದರಲ್ಲಿ ತಪ್ಪೇನು ಇಲ್ಲ. ರಾಜ್‌ಕುಮಾರ್ ಅವರು ನೆಲ, ಜಲ, ಭಾಷೆಗಾಗಿ ದನಿ ಎತ್ತಿದ್ದಾರೆ. ಇಂಥ ವಿಚಾರಗಳಿಗೆ ಸೆಲೆಬ್ರಿಟಿಗಳು ತಮ್ಮ ಸಾಥ್ ನೀಡಬೇಕು. ನೀರಿನ ವಿಚಾರವಾಗಿ ಕಲಾವಿದರು ಮಾತನಾಡಬೇಕು. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​ ಅವರು ಸಹ ಅದನ್ನೇ ತಿಳಿಸಿದ್ದಾರೆ. ನನ್ನ ಸಹಮತವಿದೆ” ಎಂದು ತಿಳಿಸಿದ್ದರು.