ಬೆಂಗಳೂರು ವಾಹನ ದಟ್ಟಣೆಗೆ ಟನೆಲ್ ರಸ್ತೆ ಪರಿಹಾರವಲ್ಲ : ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ – UNION MINISTER ASHWINI VAISHNAV

 

ಬೆಂಗಳೂರು ವಾಹನ ದಟ್ಟಣೆಗೆ ಟನೆಲ್ ರಸ್ತೆ ಪರಿಹಾರವಲ್ಲ : ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ – UNION MINISTER ASHWINI VAISHNAV

ಬೆಂಗಳೂರಿನಲ್ಲಿ ವಾಹನ ದಟ್ಟಣೆ ನಿಯಂತ್ರಣಕ್ಕೆ ಟನೆಲ್ ರಸ್ತೆ ಯೋಜನೆ ಪರಿಹಾರ ಅಲ್ಲ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ‌ ವೈಷ್ಣವ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು: ರಾಜ್ಯ ಸರ್ಕಾರದ ಟನೆಲ್ ರಸ್ತೆ ಯೋಜನೆಗೆ ರೈಲ್ವೆ ಸಚಿವ ಅಶ್ವಿನಿ‌ ವೈಷ್ಣವ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಶನಿವಾರ ಬೆಂಗಳೂರಲ್ಲಿ ಗಣ್ಯರ ಜೊತೆಗಿನ ಸಂವಾದದಲ್ಲಿ ಮಾತನಾಡಿದ ಅವರು, ವಾಹನ ದಟ್ಟಣೆ ನಿಯಂತ್ರಣಕ್ಕೆ ಟನೆಲ್ ರಸ್ತೆ ಯೋಜನೆ ಪರಿಹಾರ ಅಲ್ಲ ಎಂದು ತಿಳಿಸಿದರು.

ಟನೆಲ್ ರಸ್ತೆ ಯೋಜನೆಗಳು ಬೆಂಗಳೂರಿನಂಥ ನಗರಗಳ ಸಂಚಾರ ದಟ್ಟಣೆ ಸರಳಗೊಳಿಸಲು ಹೇಳಿ ಮಾಡಿಸದ್ದಲ್ಲ. ಅದು ದುಬಾರಿಯೂ ಆಗಲಿದೆ. ಅದರ ಬದಲು ರೈಲು ಮತ್ತು ಮೆಟ್ರೋ ಆಧಾರಿತ ಸಂಚಾರ ವ್ಯವಸ್ಥೆಗಳು ನಗರದ ಜನ ಜೀವನವನ್ನು ಸರಳಗೊಳಿಸುತ್ತವೆ. ಟನೆಲ್ ರಸ್ತೆಗಳು ಎಲ್ಲೂ ಸಂಚಾರ ದಟ್ಟಣೆಗೆ ಪರಿಹಾರ ಅಲ್ಲ ಅಂತ ನಗರ ತಜ್ಞರೇ ಎಲ್ಲ ಕಡೆ ಹೇಳಿದ್ದಾರೆ ಎಂದರು.

ರೈಲ್ವೇ ಆಧಾರಿತ ಯೋಜನೆಗಳನ್ನೇ ಬೇರೆ ಬೇರೆ ದೇಶಗಳ ನಗರಗಳಲ್ಲೂ ಮಾಡಿದ್ದಾರೆ. ರೈಲ್ವೆ ಆಧಾರಿತ ಯೋಜನೆಗಳೇ ಪರಿಹಾರ. ಪ್ರತಿ ಕಿ.ಮೀ. ಸಾವಿರ ಕೋಟಿ ಖರ್ಚು ಮಾಡಿ ಟನೆಲ್ ರಸ್ತೆ ಮಾಡುವುದರಿಂದ ನಗರದ ವಾಹನ‌ ದಟ್ಟಣೆ ನಿವಾರಣೆ ಆಗುವುದಿಲ್ಲ. ಬೆಂಗಳೂರಿನ‌ ವಾಹನ‌ ದಟ್ಟಣೆ ನಿವಾರಣೆ ಆಗಬೇಕಾದರೆ ಸಬ್ ಅರ್ಬನ್, ಮೆಟ್ರೋ ಸಂಪರ್ಕ, ರೈಲ್ವೇ ಆಧಾರಿತ ಸಂಪರ್ಕಗಳು ಬೇಕು ಎಂದು ಕೇಂದ್ರ ಸಚಿವರು ತಿಳಿಸಿದರು.

ಸಬ್ ಅರ್ಬನ್ ಯೋಜನೆ ಪ್ರಗತಿ ನಿರೀಕ್ಷಿತ ಮಟ್ಟದಲ್ಲಿಲ್ಲ :

ಇದೇ ವೇಳೆ ಬೆಂಗಳೂರು ಉಪನಗರ ರೈಲು ಯೋಜನೆಯ ಪ್ರಗತಿ ನಿರೀಕ್ಷಿತ ಮಟ್ಟದಲ್ಲಿಲ್ಲ ಎಂದ ಅಶ್ವಿನಿ ವೈಷ್ಣವ್, ಕೆ-ರೈಡ್ ಅನುಷ್ಠಾನಗೊಳಿಸುತ್ತಿರುವ ಸಬ್ ಅರ್ಬನ್ ಯೋಜನೆಗೆ ತಾಂತ್ರಿಕ ಅಧಿಕಾರಿಯನ್ನು ರೈಲ್ವೇಯಿಂದ ನೇಮಕ ಮಾಡಲು ಚಿಂತನೆ ನಡೆಸಲಾಗಿದೆ. ಈ ಸಂಬಂಧ ರಾಜ್ಯ ಸರ್ಕಾರಕ್ಕೆ ಅಧಿಕೃತ ಮನವಿ ಸಲ್ಲಿಸಲಿದ್ದೇವೆ. ಸಬ್ ಅರ್ಬನ್ ರೈಲು ಯೋಜನೆ ಕಾಮಗಾರಿ ನಿಧಾನಗತಿಯಲ್ಲಿ ನಡೆಯುತ್ತಿದ್ದು, ವಿಂಬವಾಗುತ್ತಿದೆ ಎಂದು ಹೇಳಿದರು.

ಸಬ್ ಅರ್ಬನ್ ರೈಲು ಯೋಜನೆ ಜಾರಿ ಸಂಬಂಧ ರಾಜ್ಯಸರ್ಕಾರದ ಪ್ರಯತ್ನ ಸಮಾಧಾನಕರ ಆಗಿಲ್ಲ. ರಾಜ್ಯ ಸರ್ಕಾರ ಸಮರ್ಥ ತಾಂತ್ರಿಕ ತಂಡದ ನೇಮಕ ಮಾಡುತ್ತಿಲ್ಲ. ಇದು ಬಹಳ ಬೇಸರದ ವಿಚಾರವಾಗಿದೆ. ತಾಂತ್ರಿಕ ಸಿಬ್ಬಂದಿ ಇರಬೇಕು. ಅದಕ್ಕಾಗಿ ರೈಲ್ವೇ ಇಲಾಖೆಯಿಂದ ತಾಂತ್ರಿಕ ಅಧಿಕಾರಿಗಳ ನಿಯೋಜನೆ ಮಾಡಲು ಚಿಂತನೆ ನಡೆದಿದೆ. ಈ ಸಂಬಂಧ ರಾಜ್ಯ ಸರ್ಕಾರಕ್ಕೆ ಅಧಿಕೃತ ಮನವಿ ಸಲ್ಲಿಸಲು ನಿರ್ಧರಿಸಿದ್ದೇವೆ ಎಂದರು.

ಕೆ-ರೈಡ್​​ನಿಂದ ಬೆಂಗಳೂರು ಉಪನಗರ ರೈಲು ಯೋಜನೆಗೆ ವೇಕಾಗುವ ರೈಲು ಕೋಚ್ ಖರೀದಿ ಆಗುತ್ತಿಲ್ಲ. ಹೀಗಾಗಿ, ಅದನ್ನು ರೈಲ್ವೇಯಿಂದ ಸರಬರಾಜು ಮಾಡಲಾಗುತ್ತದೆ. ನಮೋ ಭಾರತ್ ರೈಲು ಕೋಚುಗಳನ್ನು ಸರಬರಾಜು ಮಾಡಲಾಗುವುದು ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.

ಬೆಂಗಳೂರಿಗೆ ಸರ್ಕ್ಯುಲರ್ ಯೋಜನೆಗೆ ಸದ್ಯದಲ್ಲೇ ಡಿಪಿಆರ್ ಸಿದ್ಧಪಡಿಸುತ್ತೇವೆ. ಏಳು ದಿಕ್ಕುಗಳಿಂದಲೂ ರೈಲು ಮಾರ್ಗಗಳು ಬೆಂಗಳೂರಿಗೆ ಸಂಪರ್ಕ ಕೊಡ್ತವೆ. ಈ ಏಳೂ ಮಾರ್ಗಗಳನ್ನೂ ಸಂಪರ್ಕಿಸುವ ಸರ್ಕ್ಯುಲರ್ ರೈಲು ಯೋಜನೆ ತರುತ್ತಿದ್ದೇವೆ. ನಗರ ಮುಂದಿನ 30-50 ವರ್ಷಗಳಲ್ಲಿ ಬೆಳೆಯುವಾಗ ಉತ್ತಮ ಸಾರಿಗೆ ವ್ಯವಸ್ಥೆ ಬೇಕಾಗಿದೆ. ಹೀಗಾಗಿ, ನಾವು ಮುಂದಿನದ್ದನ್ನು ಯೋಚಿಸಬೇಕಾಗಿದೆ. ಅದಕ್ಕೆ ಈಗಾಗಲೇ ಕೆಲಸ ಮಾಡಬೇಕಾಗಿದೆ. ಅದರ ಫಲವಾಗಿ ಸರ್ಕ್ಯುಲರ್ ರೈಲು ಯೋಜನೆ ರೂಪಿಸಿದ್ದೇವೆ ಎಂದು ಹೇಳಿದರು.

ಬೆಂಗಳೂರಿನ ನಿತ್ಯ ರೈಲು ಸಂಚಾರ 400ಕ್ಕೆ ಹೆಚ್ಚಿಸಲು ಯೋಜನೆ : ಬೆಂಗಳೂರಲ್ಲಿ ಮೆಗಾ ರೈಲು ಟರ್ಮಿನಲ್ ಅಭಿವೃದ್ಧಿ ಪಡಿಸಲಿದ್ದೇವೆ. ಈಗ ಬೆಂಗಳೂರಲ್ಲಿ ನಿತ್ಯ 200 ರೈಲುಗಳು ಓಡಾಡುತ್ತಿವೆ. ಹೀಗಾಗಿ, ಅದನ್ನು 400 ರೈಲಿಗೆ ಹೆಚ್ಚಳ ಮಾಡಲು ಮುಂದಾಗಿದ್ದೇವೆ. ಬೆಂಗಳೂರಿನಿಂದ ಹೊರಕ್ಕೆ ಹೋಗುವ ಜನರು ಮುಂದಿನ ಐದು ವರ್ಷದಲ್ಲಿ ವೇಟಿಂಗ್ ಲಿಸ್ಟ್​​​ನ ಸಮಸ್ಯೆ ಎದುರಿಸಬಾರದು. ಈ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗುತ್ತಿದೆ. ಇದು ಕಷ್ಟದ ಕೆಲಸವಾಗಿದೆ. ಆದರೆ ಈಗಿನಿಂದಲೇ ಈ ನಿಟ್ಟಿನಲ್ಲಿ ಕೆಲಸ ಶುರು ಮಾಡಬೇಕಾಗಿದೆ ಎಂದು ತಿಳಿಸಿದರು.

ದೇವನಹಳ್ಳಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಈ ಮೆಗಾ ಟರ್ಮಿನಲ್​​ಗೆ ಸುಮಾರು 1000 ಎಕರೆ ಜಮೀನಿನ ಅಗತ್ಯವಿದೆ. ಕನಿಷ್ಠ 16 ಪ್ಲಾಟ್ ಫಾರ್ಮ್ ಹೊಂದಿರಲಿದೆ. ಆ ಮೂಲಕ ಬೆಂಗಳೂರಿನ ಹೆಚ್ಚುತ್ತಿರುವ ಪ್ರಯಾಣಿಕರ ರೈಲು ಟ್ರಾಫಿಕ್ ನ ಅಗತ್ಯತೆಯನ್ನು ಪೂರೈಸಲಿದೆ ಎಂದರು.