ಮಹಾಕುಂಭಮೇಳದಲ್ಲಿ ₹30 ಕೋಟಿ ಗಳಿಸಿದ ದೋಣಿ ಚಾಲಕರ ಕುಟುಂಬ: ವಿಧಾನಸಭೆಯಲ್ಲಿ ಯಶೋಗಾಥೆಯ ಪ್ರಸ್ತಾಪ – BOATMAN FAMILY EARNED CRORES

 

ಮಹಾಕುಂಭಮೇಳದಲ್ಲಿ ₹30 ಕೋಟಿ ಗಳಿಸಿದ ದೋಣಿ ಚಾಲಕರ ಕುಟುಂಬ: ವಿಧಾನಸಭೆಯಲ್ಲಿ ಯಶೋಗಾಥೆಯ ಪ್ರಸ್ತಾಪ – BOATMAN FAMILY EARNED CRORES

ಪ್ರಯಾಗ್​ರಾಜ್​​ನಲ್ಲಿ ನಡೆದ ಮಹಾಕುಂಭಮೇಳವು ವಿವಿಧ ವೃತ್ತಿ ನಿರ್ವಹಿಸುವ ಕುಟುಂಬಗಳ ಬದುಕನ್ನು ಹಸಿರಾಗಿಸಿದೆ. ದೋಣಿ ಚಾಲಕರ ಕುಟುಂಬವು ಕೋಟಿಗಟ್ಟಲೆ ಹಣ ಗಳಿಕೆ ಮಾಡಿದ್ದನ್ನು ಸಿಎಂ ಯೋಗಿ ಪ್ರಸ್ತಾಪಿಸಿದ್ದಾರೆ.

ಪ್ರಯಾಗ್‌ರಾಜ್ (ಉತ್ತರ ಪ್ರದೇಶ) : ಇತ್ತೀಚೆಗೆ ಮುಗಿದ ಮಹಾ ಕುಂಭಮೇಳದ ಯಶಸ್ಸು ವಿಶ್ವವೇ ನಿಬ್ಬೆರಗಾಗುವಂತೆ ಮಾಡಿದೆ. 66 ಕೋಟಿ ಭಕ್ತರು ಪ್ರಯಾಗ್​​ರಾಜ್​​ನ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದ್ದಾರೆ. 3 ಲಕ್ಷ ಕೋಟಿಗೂ ಅಧಿಕ ವಹಿವಾಟು ಕೂಡ ಇಲ್ಲಿ ನಡೆದಿದೆ. ಇದರ ಮಧ್ಯೆ, ದೋಣಿ ಚಾಲಕರ ಕುಟುಂಬವೊಂದು 30 ಕೋಟಿ ರೂಪಾಯಿ ಗಳಿಕೆ ಮಾಡಿದೆ ಎಂದರೆ ನೀವು ನಂಬಲೇಬೇಕು.

ಪಿಂಟು ಮಹಾರಾ ಎಂಬ ದೋಣಿ ಚಾಲಕರ ಕುಟುಂಬವು ಈ ಸಾಧನೆ ಮಾಡಿದೆ. 45 ದಿನಗಳು ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ತಮ್ಮ 70 ದೋಣಿಗಳಿಂದ 30 ಕೋಟಿ ರೂಪಾಯಿ ವಹಿವಾಟು ನಡೆದಿದೆ. 300 ಜನರು ಇದರಲ್ಲಿ ಕೆಲಸ ಮಾಡಿದ್ದೇವೆ ಎಂದು ಹೇಳಿಕೊಂಡಿದ್ದಾರೆ.

ಈ ಬಗ್ಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ಕೂಡ ವಿಧಾನಸಭೆಯಲ್ಲಿ 
ಮಂಗಳವಾರ ಮಾಹಿತಿ ನೀಡಿದ್ದಾರೆ. ದೋಣಿ ಚಾಲಕರನ್ನು ಸರ್ಕಾರ ಒಕ್ಕಲೆಬ್ಬಿಸಿದೆ 
ಎಂಬ ವಿಪಕ್ಷಗಳ ಆರೋಪಕ್ಕೆ ಇದು ತಕ್ಕ ಉತ್ತರ ಎಂದೂ ಹೇಳಿದ್ದಾರೆ.
ಕೋಟಿ ಗಳಿಕೆ ಬಗ್ಗೆ ಪಿಂಟು ಹೇಳಿದ್ದಿಷ್ಟು: ದೋಣಿ ಚಾಲನೆ ಮಾಡುವ ಕುಟುಂಬದವರಾದ ಪಿಂಟು ಮಹಾರಾ ತಮ್ಮ ಅನುಭವವನ್ನು ಹಂಚಿಕೊಂಡಿದ್ದು, 45 ದಿನಗಳ ಭವ್ಯ ಧಾರ್ಮಿಕ ಉತ್ಸವದಲ್ಲಿ ಭಕ್ತರು ಮತ್ತು ಯಾತ್ರಿಕರನ್ನು ಸಾಗಿಸಲು 70 ದೋಣಿಗಳನ್ನು ಹೊಂದಿದ್ದೆವು. ಇದಕ್ಕಾಗಿ ಬ್ಯಾಂಕ್ ಸಾಲ, ಆಭರಣಗಳನ್ನು ಅಡಮಾನ ಇಟ್ಟಿದ್ದೆವು. ದೊಡ್ಡ ಮೊತ್ತದಲ್ಲಿ ನಾವು ಹೂಡಿಕೆ ಮಾಡಿದ್ದೆವು. ಆದರೆ, ಇದೆಲ್ಲವನ್ನೂ ಮೀರಿದ ಲಾಭವಾಗಿದೆ ಎಂದು ತಿಳಿಸಿದರು.

300 ಕ್ಕೂ ಹೆಚ್ಚು ಜನರು ದೋಣಿ ಚಾಲನೆಯಲ್ಲಿ ತೊಡಗಿದ್ದೆವು. ಪ್ರಯಾಗ್​ರಾಜ್​ಗೆ ಬಂದ ಭಕ್ತರಿಗೆ ದೋಣಿ ವಿಹಾರ, ಸ್ನಾನದ ವ್ಯವಸ್ಥೆ ಮತ್ತು ಇತರ ಸೇವೆಗಳಲ್ಲಿ ನೀಡಿದ್ದೇವೆ. ಇದರಿಂದ ನಾವು ದೊಡ್ಡ ಮೊತ್ತವನ್ನು (30 ಕೋಟಿ ರೂಪಾಯಿ) ಪಡೆದಿದ್ದೇವೆ. ಗಂಗಾಮಾತೆ ನಮ್ಮ ಕಷ್ಟವನ್ನು ಅರಿತು ಫಲ ನೀಡಿದಳು ಎಂದ ಅವರು, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇದೇ ವೇಳೆ ಕೃತಜ್ಞತೆ ಸಲ್ಲಿಸಿದರು.

12 ವರ್ಷಗಳ ನಂತರ ಮತ್ತೊಮ್ಮೆ ನಡೆಯುವ ಕುಂಭಮೇಳದಲ್ಲಿ ಭಾಗವಹಿಸುವ ಆಶಯವನ್ನು ವ್ಯಕ್ತಪಡಿಸಿದರು. ಸ್ಥಳೀಯ ಕಾರ್ಮಿಕರು ಮತ್ತು ವ್ಯಾಪಾರಿಗಳ ಮೇಲೆ ದಯಾಳುವಾಗಿತ್ತು. ನಮ್ಮನ್ನು ಶೋಷಿಸಲಾಗಿತ್ತು ಎಂಬುದು ಸುಳ್ಳು ಎಂದು ವಿರೋಧ ಪಕ್ಷಗಳ ಹೇಳಿಕೆಯನ್ನು ತಳ್ಳಿಹಾಕಿದರು.

ವಿಧಾನಸಭೆಯಲ್ಲೂ ‘ದೋಣಿ’ ಯಶೋಗಾಥೆ: ಜನವರಿ 13 ರಿಂದ ಫೆಬ್ರವರಿ 26 ರವರೆಗೆ 45 ದಿನಗಳ ಕಾಲ ನಡೆದ ಮಹಾಕುಂಭದಲ್ಲಿ ದೋಣಿ ಚಾಲಕರ ಗಳಿಕೆಯ ಯಶೋಗಾಥೆಯ ಬಗ್ಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮಂಗಳವಾರ ವಿಧಾನಸಭೆಯಲ್ಲಿ ಹಂಚಿಕೊಂಡರು.

“ಹಲವಾರು ದೋಣಿ ಚಾಲಕರ ಕುಟುಂಬವೊಂದು ಮಹಾಕುಂಭದಲ್ಲಿ 30 ಕೋಟಿ ರೂಪಾಯಿಗಳನ್ನು ಗಳಿಸಿದೆ. ಇದರರ್ಥ ಪ್ರತಿ ದೋಣಿ 45 ದಿನಗಳಲ್ಲಿ 23 ಲಕ್ಷ ರೂ.ಗಳನ್ನು ಗಳಿಸಿತು. ಅಂದರೆ ದಿನಕ್ಕೆ ಸುಮಾರು 50 ರಿಂದ 52 ಸಾವಿರ ರೂಪಾಯಿ ಆದಾಯ ಬಂದಿದೆ ಎಂದು ತಿಳಿಸಿದರು.

ಮಹಾಕುಂಭಮೇಳದಲ್ಲಿ ದೋಣಿ ಚಾಲಕರ ಮೇಲೆ ಸರ್ಕಾರ ದಬ್ಬಾಳಿಕೆ ಮಾಡಿದೆ ಎಂದು ಸಮಾಜವಾದಿ ಪಕ್ಷದ ಆರೋಪಗಳನ್ನು ಈ ಯಶೋಗಾಥೆಯು ಅಳಿಸಿ ಹಾಕಿದೆ. ಜನರು ಉತ್ತಮವಾಗಿ ವ್ಯಾಪಾರ ನಡೆಸಿ ಬದುಕು ಕಟ್ಟಿಕೊಂಡಿದ್ದಾರೆ ಎಂದು ಹೇಳಿದರು.