ಸಾವಿನ ಅಂಚಿನ ಚಿತ್ರರಂಗಕ್ಕೆ ಬೋಲ್ಟೆ ಇಲ್ಲಾ, ಟೈಟ್ ಮಾಡಿ ಏನು ಪ್ರಯೋಜನ : ಜಗ್ಗೇಶ್​ ತಿರುಗೇಟು – JAGGESH REACTS ON D K SHIVAKUMAR

 

ಸಾವಿನ ಅಂಚಿನ ಚಿತ್ರರಂಗಕ್ಕೆ ಬೋಲ್ಟೆ ಇಲ್ಲಾ, ಟೈಟ್ ಮಾಡಿ ಏನು ಪ್ರಯೋಜನ : ಜಗ್ಗೇಶ್​ ತಿರುಗೇಟು – JAGGESH REACTS ON D K SHIVAKUMAR

16ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್​ ನೀಡಿದ್ದ ಹೇಳಿಕೆಗೆ ನಟ ಜಗ್ಗೇಶ್​​ ಎಕ್ಸ್​ ಪೋಸ್ಟ್​ ಮೂಲಕ ಪ್ರತಿಕ್ರಿಯಿಸಿದ್ದಾರೆ.

ಬೆಂಗಳೂರು : ‘ಎಲ್ಲಿ ನಟ್ ಬೋಲ್ಟ್ ಟೈಟ್ ಮಾಡಿ ರಿಪೇರಿ ಮಾಡಬೇಕೋ ಮಾಡುತ್ತೇವೆ’ ಎಂಬ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​ ಹೇಳಿಕೆಗೆ ರಾಜ್ಯಸಭಾ ಸದಸ್ಯ ಹಾಗೂ ನವರಸನಾಯಕ ಜಗ್ಗೇಶ್ ಪ್ರತಿಕ್ರಿಯಿಸಿದ್ದಾರೆ. ಎಕ್ಸ್​ನಲ್ಲಿ ಪೋಸ್ಟ್​ ಮಾಡಿರುವ ಅವರು, ”ಸಾವಿನ ಅಂಚಿನ ಚಿತ್ರರಂಗಕ್ಕೆ ಬೋಲ್ಟೆ ಇಲ್ಲಾ, ಇನ್ನು ಟೈಟ್ ಮಾಡಿ ಏನು ಪ್ರಯೋಜನ ಎಂದು ಪ್ರಶ್ನಿಸಿದ್ದಾರೆ.

ಶನಿವಾರ ವಿಧಾನಸೌಧದ ಮುಂಭಾಗದಲ್ಲಿ ನಡೆದಿದ್ದ 16ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಡಿ.ಕೆ. ಶಿವಕುಮಾರ್, ಚಿತ್ರರಂಗದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸದಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಜಗ್ಗೇಶ್​, ”ಕಾರ್ಯಕ್ರಮ 7 ಗಂಟೆಗೆ, ಆಹ್ವಾನ ಪತ್ರಿಕೆ ತಲುಪಿದ್ದು 6 ಗಂಟೆಗೆ. ಜೊತೆಗೆ ಒಗ್ಗಟ್ಟಿಲ್ಲಾ, ಸಂವಾದವಿಲ್ಲಾ, ಒಟ್ಟಾರೆ ಕಲಾವಿದರ ಸಂಘವೇ ಕಣ್ಮರೆ. ಕರ್ನಾಟಕದಲ್ಲಿ ಕನ್ನಡ ಚಿತ್ರರಂಗ ಅವಸಾನ. ಯಾವ ಕಲಾವಿದರು ಏನಾಗಿದ್ದಾರೆ, ಕಲಾವಿದರಾದ ನಮಗೆ ಮಾಹಿತಿಯಿಲ್ಲಾ! ಸಾವಿನ ಅಂಚಿನ ಚಿತ್ರರಂಗಕ್ಕೆ ಬೋಲ್ಟೆ ಇಲ್ಲಾ, ಇನ್ನು ಟೈಟ್ ಮಾಡಿ ಏನು ಪ್ರಯೋಜನ” ಎಂದು ಬರೆದು ಪೋಸ್ಟ್​ ಮಾಡಿದ್ದಾರೆ.”ಒಂದು ಕಮಿಟಿ ಮಾಡಿ ಅದರಲ್ಲಿ ಹಿರಿಯ ನಟರು ನಿರ್ಮಾಪಕರು, ನಿರ್ದೇಶಕರು, ಪತ್ರಕರ್ತರು ಇರುವಂತೆ ರಚಿಸಿ. ಈಗಿನ ಚಿತ್ರರಂಗದ ವಾಸ್ತವ ಅರಿತು ಕನ್ನಡ ಚಿತ್ರರಂಗ ಉಳಿಯುವಂತೆ, ಬೆಳೆಯುವಂತೆ, ಒಗ್ಗಟ್ಟಿನಿಂದ ಒಟ್ಟುಗೂಡುವಂತೆ, ಚಿಂತನೆಯ ಚಾವಡಿ ರಚನೆಯಾಗಲಿ. ನಿಮಗೆ ದಿನ ಸಿಗುವ ಕೆಲವರು ಮಾತ್ರ ಚಿತ್ರರಂಗವಲ್ಲಾ, ಅನೇಕರಿದ್ದಾರೆ” ಎಂದು ಜಗ್ಗೇಶ್​ ತಿರುಗೇಟು ನೀಡಿದ್ದಾರೆ.

”ಕಲಾವಿದರು ಒಟ್ಟುಗೂಡಲೆಂದೇ ಡಾ.ರಾಜಕುಮಾರ್​ ಅವರು ಕಲಾವಿದರ ಸಂಘ ಮಾಡಿದ್ದರು. ದೌರ್ಭಾಗ್ಯ, ಅದು ಇಂದು ನಿಷ್ಕ್ರಿಯಗೊಂಡಿದೆ. ಕೂಡಲೇ ನಿಮ್ಮ ಅಧಿಕಾರಿಗಳಿಗೆ ಸೂಚಿಸಿ, ಎಲೆಕ್ಷನ್ ಮಾಡಿಸಿ. ಕಲಾವಿದರು ಒಂದೆಡೆ ಕೂರುವಂತೆ ಮಾಡಿ. ಒಗ್ಗಟ್ಟು ಇರುವ ಮನೆ ಹಾಳಾದ ನಿದರ್ಶನವಿಲ್ಲ. ಚಿತ್ರರಂಗದ ಸಮಸ್ಯೆ ಅನೇಕ. ನಿಮ್ಮ ಗಮನಕ್ಕಾಗಿ ತಂದಿರುವೆ” ಎಂದು ತಿಳಿಸಿದ್ದಾರೆ.

ಪ್ರಲ್ಹಾದ್​ ಜೋಶಿ ಕಿಡಿ : ಈ ಕುರಿತಂತೆ ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ಕೂಡ​ ಎಕ್ಸ್​​ನಲ್ಲಿ ಪೋಸ್ಟ್​ ಮಾಡಿದ್ದು, ”ರಾಜ್ಯದಲ್ಲಿ ಸರ್ವಾಧಿಕಾರಿ ಧೋರಣೆ, ಧಮ್ಕಿ ರಾಜಕೀಯ, ನಟ್ಟು-ಬೋಲ್ಟು ಟೈಟ್ ಮಾಡೊ ಆಟ ನಡೆಯೊದಿಲ್ಲಾ ಸನ್ಮಾನ್ಯ ಡಿಕೆ ಶಿವಕುಮಾರ್ ಅವರೇ. ಕಲಾವಿದರು ಎಂದಿಗೂ ಕಲಾವಿದರೇ. ಸಿನಿಮಾ ಇಂಡಸ್ಟ್ರಿಯಲ್ಲಿ ಕೆಲಸ ಮಾಡುವ ಪ್ರತಿಯೊಬ್ಬ ಕನ್ನಡ ನಾಡು ಮತ್ತು ಕನ್ನಡ ಭಾಷೆಯನ್ನು ಬೆಳೆಸುವ ಕೆಲಸ ಮಾಡುತ್ತಿದ್ದಾರೆ. ಪರ್ಮಿಷನ್ ಕೊಡದೇ ಆಟ ಆಡಿಸೊ ಧಮ್ಕಿ, ಇದೆಲ್ಲಾ ಯಾವ ರಾಜಕಾರಣ. ಸಿನಿಮಾ ಪೆಟ್ಟಿಗೆ ಹಿಡಿದು ನಿಮ್ಮ ಊರಿನಲ್ಲಿ ಸಿನಿಮಾ ತೋರಿಸಿಯೇ ನೀವು ಮುಂದೆ ಬಂದಿರೋದು ಅಂತಾ ನೀವೇ ಹೇಳಿ, ಇದೀಗ ದರ್ಪದಿಂದ ಮೆರೆಯೋದು ನಿಲ್ಲಿಸಿ. ನಿಮ್ಮ ನಟ್ಟು-ಬೋಲ್ಟ್ ರಾಜ್ಯದ ಜನರೇ ಟೈಟ್ ಮಾಡೊ ಸಮಯ ಬಂದಿದೆ” ಎಂದು ಕಿಡಿಕಾರಿದ್ದಾರೆ.

ಡಿ.ಕೆ.ಶಿವಕುಮಾರ್ ಹೇಳಿಕೆಯೇನು ? 16ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​, ”ಸಿನಿಮಾ ಸಂಬಂಧಿತ ಕಾರ್ಯಕ್ರಮಗಳಲ್ಲಿ ಚಿತ್ರರಂಗ ಭಾಗವಹಿಸಬೇಕು. ನಾವು ನಿಮ್ಮ ಶೂಟಿಂಗ್‌ಗೆ ಅವಕಾಶ ಕೊಡದಿದ್ರೆ, ನೀವು ಹೇಗೆ ಸಿನಿಮಾ ಮಾಡ್ತೀರಿ?. ನಾವೂ ಎಲ್ಲಿ ನಟ್ ಬೋಲ್ಟ್ ಟೈಟ್ ಮಾಡಿ ರಿಪೇರಿ ಮಾಡಬೇಕೋ ಮಾಡುತ್ತೇವೆ. ಇದು ನನ್ನ ವಾರ್ನಿಂಗ್ ಅಂತಲಾದ್ರೂ ತಿಳಿದುಕೊಳ್ಳಿ, ರಿಕ್ವೆಸ್ಟ್ ಅಂತಲಾದ್ರೂ ತಿಳಿದುಕೊಳ್ಳಿ” ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಎಚ್ಚರಿಕೆ ನೀಡಿದ್ದರು.

”ಈ ಕಾರ್ಯಕ್ರಮ ಇಲ್ಲಿ ವೇದಿಕೆ ಮೇಲಿರುವ ಕೆಲವು ಕಲಾವಿದರು ಹಾಗೂ ರಾಜಕಾರಣಿಗಳ ಮನೆ ಕಾರ್ಯಕ್ರಮವಲ್ಲ. ಚಿತ್ರರಂಗದ ಕಾರ್ಯಕ್ರಮ. ಆದರೆ ಕೆಲವೇ ಕೆಲವು ಪ್ರಮುಖರು ಮಾತ್ರ ಇದ್ದಾರೆ. ಇದು ಕನ್ನಡ ಸಿನಿಮಾ ರಂಗದ ಕಾರ್ಯಕ್ರಮ. ಈ ಕಾರ್ಯಕ್ರಮಕ್ಕೆ ನಟರು, ನಿರ್ಮಾಪಕರು, ನಿರ್ದೇಶಕರು, ಕಲಾವಿದರಲ್ಲದೆ ಮತ್ಯಾರು ಬರುತ್ತಾರೆ? ಶಿವರಾಜಕುಮಾರ್ ಅವರು ಇದನ್ನು ನಮ್ಮ ಮನೆಯ ಹಬ್ಬ ಎಂದು ಹೇಳಿದರು. ಆ ಭಾವನೆ ಚಿತ್ರರಂಗದ ಕಲಾವಿದರು, ನಿರ್ಮಾಪಕರು, ನಿರ್ದೇಶಕರು, ಪ್ರದರ್ಶಕರಿಗೆ ಇಲ್ಲವಾದರೆ, ನಿಮಗೇ ಆಸಕ್ತಿ ಇಲ್ಲವಾದರೆ ಈ ಚಲನಚಿತ್ರೋತ್ಸವವನ್ನು ಯಾಕೆ ಮಾಡಬೇಕು” ಎಂದು ಪ್ರಶ್ನಿಸಿದ್ದರು.

”ಮುಂದಿನ ದಿನಗಳಲ್ಲಿಯಾದರೂ ಇಂತಹ ಕಾರ್ಯಕ್ರಮಗಳಿಗೆ ಚಿತ್ರರಂಗದ ಪ್ರಮುಖರು ಆಗಮಿಸಬೇಕು. ನಿಮ್ಮ ಕಾರ್ಯಕ್ರಮಕ್ಕೆ ನೀವೇ ಬರದಿದ್ದರೆ ಹೇಗೆ? ಇದನ್ನು ಎಚ್ಚರಿಕೆಯಂತಾದರೂ ಪರಿಗಣಿಸಿ ಅಥವಾ ಮನವಿ ಎಂದಾದರೂ ಪರಿಗಣಿಸಿ. ಈ ಬಗ್ಗೆ ಎಲ್ಲರಿಗೂ ಮಾಹಿತಿ ನೀಡಿ. ಸರ್ಕಾರ ಅನುಮತಿ ನೀಡದೆ ಇದ್ದರೆ ಸಿನಿಮಾ ಚಿತ್ರೀಕರಣಕ್ಕೆ ಅವಕಾಶವೇ ಸಿಗುವುದಿಲ್ಲ. ಯಾರಿಗೆ ಹೇಗೆ ನಟ್ಟು ಬೋಲ್ಟ್ ಟೈಟ್ ಮಾಡಬೇಕು ಎಂಬುದು ನಮಗೆ ಗೊತ್ತಿದೆ” ಎಂದು ಹೇಳಿದ್ದರು.